ಕನ್ನಡ ಚಿತ್ರರಂಗದ ಅವಧೂತರು 75 ಉಮೇಶಣ್ಣ. ಅವರಿಗೀಗ 80ರ ವಯಸ್ಸು. ಅವರಿಗೆ ಕಾಲ್ ಮಾಡಿ ಆರೋಗ್ಯ ವಿಚಾರಿಸಿದ ಚರಣ್ ರಾಜ್. ಸಿನಿ ಅಕ್ಷರ ಗಣೇಶ ಕಾಸರಗೋಡು ಅವರ ಲೇಖನಿಯಲ್ಲಿ ಉಮೇಶಣ್ಣ, ತಪ್ಪದೆ ಮುಂದೆ ಓದಿ…
ನಾನು ನನ್ನ DP’ಯಲ್ಲಿ ಹ್ಯಾಟ್ ಧರಿಸಿದ್ದ ನನ್ನದೇ ಫೋಟೋವೊಂದನ್ನು ಹಾಕಿಕೊಂಡಿದ್ದೆ. ಇದನ್ನು ನೋಡಿದ ಅನುಗಾಲದ ಮಿತ್ರ ನಟ ಚರಣ್ ರಾಜ್ ಮೆಸೇಜ್ ಮಾಡಿ ಹೀಗೆಂದು ಕಾಮೆಂಟ್ ಮಾಡಿದರು : ‘ಗುರುಗಳೇ, ಇದೆಂಥಾ ಫೋಟೋವನ್ನು ಪ್ರೊಫೈಲಿನಲ್ಲಿ ಹಾಕಿಕೊಂಡಿದ್ದೀರಿ? ನಾನು ನಿಮ್ಮನ್ನು ಗಮನಿಸಿದ ಹಾಗೆ ಎಂದೂ ನೀವು ಇನ್ನೊಬ್ಬರಿಗೆ ಟೋಪಿ ಹಾಕಿದವರಲ್ಲ, ಇನ್ನೊಬ್ಬರು ನಿಮಗೆ ಟೋಪಿ ಹಾಕುವ ಸಂದರ್ಭ ಸೃಷ್ಟಿಸಿಕೊಂಡವರೂ ಅಲ್ಲ! ದಯವಿಟ್ಟು ಆ ಫೋಟೋವನ್ನು ರಿಮೂವ್ ಮಾಡಿ…’ – ಚರಣ್ ರಾಜ್ ಅವರ ಈ ಒತ್ತಾಯಕ್ಕೆ ಮಣಿದು ಆ ಜಾಗದಲ್ಲಿ ನಿನ್ನೆ ತಾನೇ ಉಮೇಶಣ್ಣನ ಜತೆ ತೆಗೆಸಿಕೊಂಡ ಈ ಫೋಟೋವನ್ನು ಹಾಕಿದೆ ನೋಡಿ…ತಕ್ಷಣವೇ ಚರಣ್ ಅವರಿಂದ ಮತ್ತೊಂದು ಮೆಸೇಜ್ : ‘ಉಮೇಶಣ್ಣ ಎಷ್ಟೊಂದು ಕಳಕಳಿಯಾಗಿದ್ದಾರೆ, ಅವ್ರ ಜತೆ ಮಾತಾಡಬೇಕು ಫೋನ್ ನಂಬರ್ ಕೊಡಿ ಗುರುಗಳೆ…’

ನಾನು ಉಮೇಶಣ್ಣನ ಫೋನ್ ನಂಬರ್ ಕಳಿಸಿ ಅರ್ಧ ಗಂಟೆಯಾಗಿಲ್ಲ ಅಷ್ಟರಲ್ಲೇ ಚರಣ್ ರಾಜ್ ನನಗೆ ಕಾಲ್ ಮಾಡಿದರು. ಅದೇನೋ ಅವ್ಯಕ್ತ ಖುಷಿ ಅವರ ಧ್ವನಿಯಲ್ಲಿತ್ತು. ಮಾತಾಡುತ್ತಾ ಹೋದರು : ‘ಗುರುಗಳೆ, ನನ್ನ ಜನ್ಮ ಸಾರ್ಥಕವಾಯಿತು. ನಿಮ್ಮ ಕಾರಣದಿಂದ ಆ ಹಿರಿಯನ ಜತೆ ಮಾತಾಡುವಂತಾಯ್ತು. ಅವರೊಬ್ಬ ಬರೀ ನಟರಲ್ಲ, ಕನ್ನಡ ಚಿತ್ರರಂಗದ ಅವಧೂತರು! 75 ವರ್ಷಗಳಿಂದ ಬಣ್ಣ ಹಚ್ಚುತ್ತಿದ್ದಾರೆ. ಅವರಿಗೀಗ 80ರ ವಯಸ್ಸು. ಐದನೇ ವಯಸ್ಸಿನಿಂದ ನಟಿಸಲು ಹೊರಟವರು. ಇನ್ನೂ ಎಷ್ಟೊಂದು ಲವಲವಿಕೆಯಿಂದಿದ್ದಾರೆ ಅಲ್ವಾ? ಇಷ್ಟೊಂದು ಸೌಜನ್ಯದ ವ್ಯಕ್ತಿ ಈ ಮೋಸ ವಂಚನೆಯ ಜಗತ್ತಿನಲ್ಲಿ ಹೇಗೆ ಬಾಳ್ವೆ ನಡೆಸಿದರೋ ಗೊತ್ತಿಲ್ಲ. ಆರೋಗ್ಯ ವಿಚಾರಿಸಿದೆ.

ಆರ್ಥಿಕ ಸಹಸ್ಯವೇನಾದ್ರೂ ಬೇಕಾ ಎಂದು ಕೇಳೋಣ ಅಂತಿದ್ದೆ. ಆದ್ರೆ ಅವ್ರು ಮಹಾ ಸ್ವಾಭಿಮಾನಿ ಅಂತ ನೀವು ಹೇಳಿದ್ದು ನೆನಪಾಯ್ತು. ಹೀಗಾಗಿ ಒಂದು ನಿರ್ಧಾರಕ್ಕೆ ಬಂದೆ : ನೆಕ್ಸ್ಟ್ ವೀಕ್ ಬೆಂಗಳೂರಿಗೆ ಬಂದಾಗ ನಿಮ್ಮ ಜತೆ ನಾನೂ ಅವರ ಮನೆಗೆ ಬರ್ತೇನೆ. ಒಂದಷ್ಟು ಮಾತುಕತೆಯಾಡೋಣ. ಖುಷಿಯಾಗ್ತಾರೆ. ಬರುವಾಗ ಒಂದು ಕವರಿನಲ್ಲಿ ಒಂದಷ್ಟು ದೊಡ್ಡ ಅಮೌಂಟ್ ಇಟ್ಟು ಅವ್ರ ಕೈಲಿಡೋಣ…ಏನಂತೀರಿ ಗುರುಗಳೇ?’ – ನಾನು ಏನನ್ನಲಿ? ಹೀಗೆಯೇ ದೊಡ್ಡ ದೊಡ್ಡ ನಟರು ಒಂದಷ್ಟು ಮಂದಿ ಮೂಲೆ ಗುಂಪಾಗಿರುವ ನಟ ನಟಿಯರ ಮನೆಗೆ ಹೋಗುವ ಪ್ರೋಗ್ರಾಂ ಹಾಕಿದರೆ ಎಷ್ಟು ಚೆಂದ ಅಲ್ಲವೇ? ದುಡ್ಡು ಕೊಡೋದು ಆಮೇಲಿನ ಮಾತು. ಆದ್ರೆ ‘ನನ್ನನ್ನು ಈ ಉದ್ಯಮ ಇನ್ನೂ ಮರೆತಿಲ್ಲ’ ಎನ್ನುವ ಭಾವನೆಯನ್ನು ಅವರಲ್ಲಿ ತುಂಬೋದಿದೆಯಲ್ಲಾ…? ಅದು ಮುಖ್ಯ… ಚರಣ್ ರಾಜ್ ಅವರಿಂದ ಇದು ಆರಂಭವಾಗಲಿ…ಮುಂದೆ ನೋಡೋಣ…ಏನಂತೀರಿ?
- ಗಣೇಶ ಕಾಸರಗೋಡು
