ಅವಮಾನಗಳನ್ನು ಎದುರಿಸಿ ಬದುಕು ಕಟ್ಟಿಕೊಂಡ ಅಕ್ಷತಾ

ತಪ್ಪು ನಡೆಯೋದು ಸಹಜ ಕಣೋ… ತಿದ್ದಿ ನಡೆಯುವುದು ಮನುಜ ಕಣೋ…ತಪ್ಪು ಯಾರು ಮಾಡೋದಿಲ್ಲ ಹೇಳಿ, ಅವಮಾನಗಳು ಯಾರಿಗೆ ಆಗಿಲ್ಲ ಹೇಳಿ. ಅವನ್ನೆಲ್ಲ ಮೆಟ್ಟಿ ನಿಂತಾಗಲೇ ಸುಂದರ ಭವಿಷ್ಯ ರೂಪಗೊಳ್ಳಲು ಸಾಧ್ಯ ಎನ್ನುವುದಕ್ಕೆ ಉತ್ತಮ ಉದಾಹರಣೆ ಈ ಕತೆಯ ಕಥಾನಾಯಕಿ ಅಕ್ಷತಾ ಅವರು. ವಿಕಾಸ್. ಫ್. ಮಡಿವಾಳರ ಅವರು ನೊಂದು ಬೆಂದು ಎದ್ದು ನಿಂತ ಮಹಿಳೆಯ ಕತೆಯನ್ನು ಓದುಗರಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಅವಮಾನಗಳು ಯಾರಿಗೆ ಇಲ್ಲ. ಜಗತ್ತಿನಲ್ಲಿರುವ ಪ್ರತಿಯೊಬ್ಬ ಮನುಷ್ಯನಿಗೂ ಅವಮಾನಗಳಾಗಿಳಿವೆ. ಪಕ್ಕದ ಮನೆಯವರಲ್ಲಂತೂ ಅವಮಾನಗಳ ರಸದೌತನವೇ ತುಂಬಿರುತ್ತದೆ. ಅನೇಕರು ಅವಮಾನಗಳಿಗೆ ಹೆದರಿ ತಮ್ಮಲ್ಲಿರುವ ಶಕ್ತಿಯನ್ನು ತೋರಿಸುವುದಿಲ್ಲ. ಇನ್ನು ಕೆಲವರು ಆದ ಅಪಮಾನಕ್ಕೆ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇಂಥವರನ್ನೆಲ್ಲ ನೋಡಿದಾಗ ನನಗೆ ನೆನಪಾಗುವ ಹೆಸರೆಂದರೆ ಅದು ಅಕ್ಷತಾ (ಹೆಸರು ಬದಲಾಯಿಸಲಾಗಿದೆ). ಅವಮಾನಿಸಿದವರ ಮುಂದೆ ಕುಗ್ಗದೆ ಮುಂದೊಂದು ದಿನ ಅವಮಾನಸಿದವರೇ ಸನ್ಮಾನಿಸುವಂತೆ ಬದುಕಿದ ಅವಳ ಕಥೆಯೆ ಒಂದು ಯಶೋಗಾಥೆ.

ಅಕ್ಷತಾಳನ್ನು ನಾನು ಮೊದಲು ಭೇಟಿಯಾಗಿದ್ದು ಧಾರವಾಡದಲ್ಲಿ. ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾಗ, ಆಗಾಗ ಭೇಟಿಯಾಗುತ್ತಿದ್ದ ನನಗೆ ತನ್ನ ಜೀವನದ ಕತೆಯಗಳನ್ನು ಹೇಳಿಕೊಂಡಿದ್ದಳು. ಆಕೆಯ ತಂದೆ ಚಿಕ್ಕ ಹೋಟೆಲ್ ನಡೆಸುತ್ತಿದ್ದರು, ತಾಯಿ ಖಾಸಗಿ ಶಾಲೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದರು. ಅಕ್ಷತಾಳಿಗೆ ಓದು ಎಂದರೆ ಆಗುತ್ತಿರಲಿಲ್ಲ. ಸಮಾಜ ವಿಜ್ಞಾನವೆಂದರೆ ಮುಖ ತಿರುಗಿಸುತ್ತಿದ್ದಳು. ಭಾಷಾ ವಿಷಯಗಳಲ್ಲಿ ಸ್ವಲ್ಪ ರುಚಿಯಿತ್ತಾದರೂ ಹೇಳಿಕೊಳ್ಳುವಂತ ಮಾರ್ಕ್ಸ್ ಬರುತ್ತಿರಲಿಲ್ಲ. ಹೀಗೆ ಊರಲ್ಲಿ ಬೆಳೆದ ಅವಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 63ಪರ್ಸಂಟೇಜ್ ತೆಗೆದ್ದಿದ್ದಳು.

ಫೋಟೋ ಕೃಪೆ : google

ಮಗಳು 63% ತೆಗೆದಿದ್ದರೂ ಆಕೆಯ ಪಾಲಕರು ಒತ್ತಾಯ ಮಾಡಿ ಸೈನ್ಸ್ ಕಾಲೇಜಿಗೆ ಭರ್ತಿ ಮಾಡಿದರು. ಮೊದಲೇ ಗಣಿತವೆಂದರೆ ಅಸಡ್ಡೆ ತೋರಿಸಿದ ಆಕೆಗೆ ಟ್ರಿಗ್ನಾಮೆಟ್ರಿ ಇಂಟಿಗ್ರೇಶನ್ಗಳು ತಲೆ ನೋವಾದವು. ರಾಸಾಯನ ಶಾಸ್ತ್ರ ಜೀರ್ಣವಾಗದ ವಿಷಯವಾಯಿತು. ಹಾಗೋ ಹೀಗೊ ಮಾಡಿ ಪಿಯುಸಿ ಮುಗಿಸಿದಳು. ಆದರೆ ಮುಂದೆ ಏನಾಗುತ್ತೆ ಎಂಬ ಕಲ್ಪನೆ ಆಕೆಗಿರಲಿಲ್ಲ

ಅಕ್ಷತಾ ಪಿ.ಯು.ಸಿ ಓದುವಾಗ ಅದೇ ಕಾಲೇಜಿನ ವಿದ್ಯಾರ್ಥಿಯ ಮೇಲೆ ಆಕರ್ಷಿತವಾದಳು. ಸ್ನೇಹದಿಂದ ಶುರುವಾದ ಸಂಬಂಧ ಪ್ರೀತಿಯಾಗಿ ಬದಲಾಯಿತು.ಕಾಲೇಜಿನಲ್ಲಿ ಆದ ಭೇಟಿ ಪಾರ್ಕಿನಲ್ಲಿ ಸುತ್ತಾಡುವಷ್ಟು ಮೀರಿತು. ಒಂದೊಮ್ಮೆ ಸುತ್ತಾಡುವಾಗ ಅಕ್ಷತಾಳ ತಂದೆ ಆಕೆಯನ್ನು ನೋಡಿದರು. ಮುಂದೆ ಪಾಲಕರಿಗೆ ವಿಷಯ ಗೊತ್ತಾಗಿ ಮನೆಯಲ್ಲಿ ಜಗಳವಾಗಿ, ಮನೆಯವರು ತಮ್ಮ ಪ್ರೀತಿಯನ್ನು ಒಪ್ಪುವುದಿಲ್ಲವೆಂದು ಪ್ರಿಯಕರನ ಜೊತೆ ಒಡಿ ಹೋಗಲು ನಿರ್ಧರಿಸಿದಳು. ವಿಷಯ ತಿಳಿದ ಆಕೆಯ ಪಾಲಕರು ಆಗಾತಕ್ಕೀಡಾದರು. ಒಂದೆರಡು ತಿಂಗಳು ಕಳೆದ ಮೇಲೆ ಪ್ರಿಯಕರನ ನಿಜ ರೂಪ, ಆತನ ವರ್ತನೆ ಸಹಿಸಿಕೊಳ್ಳಲಾಗದೆ ಅಕ್ಷತಾ ಮರಳಿ ಮನೆಗೆ ಬಂದಳು.

ಮಗಳ ತಪ್ಪನ್ನು ಕ್ಷಮಿಸಿದ ಆಕೆಯ ಪಾಲಕರೆನೋ ಮನೆಯೊಳಗೆ ಕರೆಸಿಕೊಂಡರು. ಆದರೆ ನಮ್ಮ ಸಮಾಜ ಮಾತ್ರ ಆಕೆಯನ್ನು ಒಪ್ಪಲಿಲ್ಲ. ಇಂಥ ಮಗಳನ್ನು ಹುಟ್ಟಿಸುವುದಕ್ಕಿಂತ ಸಾಯಿಸುವುದು ಒಳ್ಳೆಯದೆಂದು ಜನ ಆಡಿಕೊಂಡರು. ಮದುವೆ ಸಮಾರಂಭಗಳಿಗೆ ಹೋದಾಗ ಎಷ್ಟು ಜನರ ಜೊತೆ ಮಲಗಿದ್ದಾಳೋ ಏನೋ ಎಂದು ಆಕೆಯ ನಡತೆಯ ಬಗ್ಗೆ ಸಂಬಂಧಿಕರು ಟೀಕಿಸಿದರು. ಮನೆಯ ಹೊರಗೆ ಕಾಲಿಟ್ಟರೆ ಸಾಕು ಪುಂಡ ಪೋಕರಿಗಳು ಕೇವಲವಾಗಿ ಮಾತನಾಡಿದರು. ಇಂತಹ ಅವಮಾನಗಳಿಗೆ ಕೂಗ್ಗಿದ ಅಕ್ಷತಾ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಆದರೆ ಆಕೆಯ ತಂದೆ ಧೈರ್ಯ ತುಂಬಿದರು. ಆಕೆಯ ತಾಯಿ ಜೀವನವನ್ನು ಎದುರಿಸಲು ಹುರುದುಂಬಿಸಿದರು.

ಫೋಟೋ ಕೃಪೆ : google

ಆದ ನೋವುಗಳನ್ನೆಲ್ಲಾ ಪಕ್ಕಕ್ಕಿಟ್ಟ ಅಕ್ಷತಾ, ಧಾರವಾಡದಲ್ಲಿ ನರ್ಸಿಂಗ್ ಕೋರ್ಸ್ ಓದತೊಡಗಿದಳು. ಆಗಲೇ ನಾನು ಅವಳನ್ನು ಭೇಟಿಯಾದುದ್ದು ಯಾವುದೋ ಒಂದು ದಿನ ಭೇಟಿಯಾಗುವ ನನ್ನನ್ನು ಕಂಡರೆ ಆಕೆಗೆ ಎಲ್ಲಿಲ್ಲದ ಪ್ರೀತಿ. ಧಾರವಾಡದಿಂದ ಊರಿಗೆ ಬಂದಾಗಲೂ ಆಕೆ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ನರ್ಸಿಂಗ್ ಕೋರ್ಸ್ ಮುಗಿದ ಮೇಲೆ ಧಾರವಾಡದ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿ, ಬಂದ ರೋಗಿಗಳ ಜೊತೆ ಸಲುಗೆಯಿಂದ ಮಾತಾಡಿ ಚೆನ್ನಾಗಿ ನೋಡಿಕೊಂಡಳು. ಸಮಯ ಕಳೆಯಿತು ಕೊರೊನ ಬಂದು ದೇಶದ ಪರಿಸ್ಥಿತಿ ಗಂಭೀರವಾಯಿತು. ರೋಗಿಗಳ ಸಂಖ್ಯೆ ಹೆಚ್ಚಾಯಿತು. ಅಂತ ಗಂಭೀರ ಪರಿಸ್ಥಿತಿಯಲ್ಲೂ ಅಕ್ಷತಾ ಕೊರೋನಾ ಕಿಟ್ ಹಾಕಿಕೊಂಡು ರೋಗಿಗಳನ್ನು ಉಪಚರಿಸಿದಳು.

ಅವತ್ತು ಹಾವೇರಿಯಲ್ಲಿ ನಡೆದ ಸಮಾರಂಭವನ್ನು ಮುಗಿಸಿ ಮನೆಗೆ ಬಂದಿದ್ದೆ. ಆಗಲೇ ಅಕ್ಷತಾ ನನಗೆ ಕರೆ ಮಾಡಿದ್ದಳು. “ಇವತ್ತು ನನ್ನ ಜನ್ಮ ಸಾರ್ಥಕವಾಯಿತು ಕಣೋ ” ಎಂದ ಅವಳ ಮಾತಲ್ಲಿ ತೃಪ್ತಿ ಇತ್ತು. ಸದಾ ಅವಮಾನಗಳಿಂದ ತತ್ತರಿಸಿದ್ದ ಮನಸಲ್ಲಿ ಖುಷಿಯ ಸಂಭ್ರಮವಿತ್ತು. ಕರೋನಾ ರೋಗಕ್ಕೆ ತುತ್ತಾಗಿದ್ದ ಆಕೆಯ ಊರಿನವರಿಗೆ ಅಕ್ಷತಾ ಚಿಕಿತ್ಸೆ ಮಾಡಿದ್ದಳು. ಹಗಲು ರಾತ್ರಿಯೆನ್ನದೆ ಆರೈಕೆ ಮಾಡಿದಳು. ತನ್ನನ್ನು ಅವಮಾನಿಸಿದವರೆಂದು ಕೋಪಿಸಿಕೊಳ್ಳದೆ ಎಲ್ಲವನ್ನು ಮರೆತು ತಮ್ಮೂರಿನವರು ಎಂದು ಪ್ರೀತಿ ತೋರಿಸಿದಳು. ಆಕೆಯ ನಿಷ್ಕಲ್ಮಶ ಸೇವೆಗೆ ಮೆಚ್ಚಿದ ಜನ ರಜೆಯ ದಿನಗಳಿಗೆ ಮನೆಗೆ ಬಂದಾಗ ಆಕೆಯನ್ನು ಸನ್ಮಾನಿಸಿದರು. ಕರೋನ ವಾರಿಯರ್ ಎಂದು ಕೂಗಿ ಹಾರ ಹಾಕಿದರು. ಇಂತಹ ಮಗಳು ಹುಟ್ಟಿದ್ದರೆ ಕೊಂದುಬಿಡುತ್ತಿದ್ದೆ ಎಂದ ವ್ಯಕ್ತಿ, ಮುಂದಿನ ಜನ್ಮದಲ್ಲಾದರೂ ನಿನ್ನಂತ ಮಗಳನ್ನು ಪಡೆಯಬೇಕು ಅಂತ ಕಣ್ಣಿರಿಟ್ಟ. ಅಂದು ಅವಮಾನಿಸಿದ ಊರಿನವರು ಇಂದು ಸನ್ಮಾನಿಸಿ ಊರ ಮಗಳೆಂದು ಹೊಗಳಿದರು.

ಫೋಟೋ ಕೃಪೆ : google

ಈಗಲೂ ಅಕ್ಷತಾ ಬೆಳಗಾವಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ನಿಷ್ಕಲ್ಮಶ ಸೇವೆಯಿಂದ ಜನರ ಮನಸ್ಸನ್ನು ಗೆದ್ದಿದ್ದಾಳೆ. ತನ್ನ ಬದುಕು ಇನ್ನೊಬ್ಬರಿಗೆ ಸ್ಪೂರ್ತಿಯಾಗುವಂತೆ ಬದುಕುತ್ತಿದ್ದಾಳೆ.

ಅವಮಾನಗಳಾಗಿವೆ ಎಂದು ನೊಂದು ಬೇಯುವುದಕ್ಕಿಂತ ಎಲ್ಲಿ ತಪ್ಪಾಗಿದೆ ಎಂದು ಅರಿತು ಸರಿ ಮಾಡಿಕೊಳ್ಳುವುದೆ ಜೀವನ. ಅವಮಾನವಾಗಿದೆ ಎಂದು ಜೀವ ಕಳೆದುಕೊಳ್ಳುವುದು ಹೇಡಿತನ. ಆದ ಅವಮಾನಗಳನ್ನು ಮರೆತು ಹೊಸ ಜೀವನವನ್ನು ರೂಪಿಸಿಕೊಳ್ಳಿ. ಶ್ರಮ ಪಟ್ಟು ದುಡಿಯಿರಿ. ಆಗ ನಿಮ್ಮ ಸಾಧನೆಯನ್ನು ಯಾರಾದರು ಬರೆದೆ ಬರೆಯುತ್ತಾರೆ. ನಾಲ್ಕು ಜನರಿಗಾದರೂ ನೀವು ಸ್ಫೂರ್ತಿಯಾಗುತ್ತೀರಿ.

ಇಂತಿ ನಿಮ್ಮ ಪ್ರೀತಿಯ…


  • ವಿಕಾಸ್. ಫ್. ಮಡಿವಾಳರ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW