ಕ್ಷೀರ ಕ್ರಾಂತಿಯ ಈ ಹರಿಕಾರ ವರ್ಗಿಸ್ ಕುರಿಯನ್ ಅವರ ಜನ್ಮದಿನ. ಅವರ ಕುರಿತು ಡಾ.ರಾಜಶೇಖರ ನಾಗೂರ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
“ಅಮೂಲ್ ” (AMUL) ಎಂಬ ಸ್ವದೇಶಿ ಬ್ರ್ಯಾಂಡ್ ಹೆಸರು ಕೇಳದೇ ಇರುವವರಾರು? ..ಭಾರತದ “ಕ್ಷೀರಕ್ರಾಂತಿ”ಯ ಜನಕ ಡಾ.ವರ್ಗಿಸ್ ಕುರಿಯನ್ ರು ನೂರು ವಿದೇಶಿ ಬ್ರ್ಯಾಂಡ್ಗಳ ನಡುವೆ ಹುಟ್ಟು ಹಾಕಿದ ಹೆಮ್ಮೆಯ ಸ್ವದೇಶಿ ಹಾಲಿನ ಬ್ರ್ಯಾಂಡ್ ಈ ‘ಅಮೂಲ್’. ಕುರಿಯನ್ ರು ನ್ಯೂಕ್ಲಿಯರ್ ಫಿಸಿಕ್ಸ್ ಮತ್ತು ಲೋಹ ವಿಜ್ಞಾನ ಪದವೀಧರರಾದರೂ ಹಾಲಿನ ಉತ್ಪಾದನೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ಮಹಾನ್ ವ್ಯಕ್ತಿ.
ಅವರೊಬ್ಬ ಕ್ಷೀರ ಕ್ರಾಂತಿಯ ಹರಿಕಾರ ಮಾತ್ರ ಎಂದರೆ ತಪ್ಪಾಗುತ್ತದೆ. ಅಪ್ಪಟ ದೇಶ ಪ್ರೇಮಿ ಕೂಡ.
ಒಮ್ಮೆ ಪಾಕಿಸ್ತಾನದ ಒಬ್ಬ ಅಧಿಕಾರಿ ಪೂರ್ವಾಗ್ರಹ ಪೀಡಿತನಾಗಿ, ಕುರಿಯನ್ ಅವರಿಗೆ ಕೇಳಿದನಂತೆ, ಕ್ರಿಶ್ಚಿಯನ್ ಆದ ನೀವು, ಹಿಂದು ರಾಷ್ಟ್ರದ “ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ” (National Dairy Development Board)ಯ ಅಧ್ಯಕ್ಷನಾಗಲು ಹೇಗೆ ಸಾಧ್ಯವಾಯಿತೆಂದು. ಆಗ, ಕುರಿಯನ್ ಹೇಳುತ್ತಾರೆ.

ಫೋಟೋ ಕೃಪೆ : google
ಇದು ನನ್ನ ಭಾರತ, ನಿನ್ನ ಪಾಕಿಸ್ಥಾನವಲ್ಲ. ನಿಮ್ಮ ದೇಶ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದಾಗ, ಗುಜರಾತಿನ ಕಚ್ಛ್ ಜಿಲ್ಲೆಯ ಜಿಲ್ಲಾಧಿಕಾರಿ ಒಬ್ಬ ಕ್ರಿಶ್ಚಿಯನ್. ಗುಜರಾತಿನ ಡಿಜಿಪಿ ಓರ್ವ ನಿಷ್ಠಾವಂತ ಮುಸ್ಲಿಂ ಹಾಗೂ ಗುಜರಾತಿನ ಗೃಹಮಂತ್ರಿ ಮಂಡಲದ ಕಾರ್ಯದರ್ಶಿ ಕ್ರಿಶ್ಚಿಯನ್ ಮತ್ತು ಗುಜರಾತಿನ ಗವರ್ನರ್ ಒಬ್ಬ ಹೆಮ್ಮೆಯ ಮುಸ್ಲಿಂ ಆಗಿದ್ದರು. ನನ್ನ ದೇಶ ಈ ಬಗೆಯದು. ನಾನು ಅಪ್ಪಟ ಭಾರತೀಯ ಎಂದು ಹೆಮ್ಮೆಯಿಂದ ದಿಟ್ಟ ಉತ್ತರ ಕೊಟ್ಟರಂತೆ. ಇದಲ್ಲವೇ ದೇಶಭಕ್ತಿ, ಇದಲ್ಲವೇ ದೇಶಪ್ರೇಮ !
ದೇಶದಲ್ಲಿದ್ದು ದೇಶದ್ರೋಹವೆಸಗುವವರಿಗೆ ಇವರೊಂದು ಉತ್ತಮ ಸಂದೇಶವಲ್ಲವೇ!
ಕೇವಲ ಲಾಭಾಂಶಕ್ಕಾಗಿ ಇಂತಹ ಮಂಡಳಿಗಳ ಅಧಿಕಾರ ಹೊಂದಲು ಬಯಸುವ ಈಗಿನ ಕಾಲದ ಆಸೇಬುರುಕ ಅಧಿಕಾರಿಗಳಿಗೆ ಕುರಿಯನ್ ರವರು ಮಾದರಿಯಲ್ಲವೇ!
ಕುರಿಯನ್ ರವರು ಓದಿದ ವಿಷಯವೇ ಬೇರೆ. ಸೇವೆ ಸಲ್ಲಿಸಿ ಕ್ರಾಂತಿ ಸೃಷ್ಟಿಸಿದ ಕ್ಷೇತ್ರವೇ ಬೇರೆ. ಇದೇ ಅಲ್ವಾ ನಾವು ಕಲಿಯಬೇಕಾದದ್ದು! ವೃತ್ತಿ, ಪ್ರವೃತ್ತಿಗಳು ಭಿನ್ನವಾಗಿದ್ದರೂ ಲೋಕಹಿತದಲ್ಲಿ ಇರಬಹುದೆಂದು ತೋರಿಸಿ ಕೊಟ್ಟವರು.
ಕ್ಷೀರ ಕ್ರಾಂತಿಯ ಈ ಹರಿಕಾರನ ಜನ್ಮ ದಿನವಿಂದು. ಇವರು ಇಂದು ನಮ್ಮ ಮಧ್ಯದಲ್ಲಿಲ್ಲವಾದರೂ ನೆನೆಯಲೇ ಬೇಕಾದ ವ್ಯಕ್ತಿತ್ವ. ಭಾರತಕ್ಕೆ ಇಂತವರ ಅಗತ್ಯ ಇಂದಿಗೆ ತುಂಬಾ ಇದೆ ಎನಿಸುವುದು ಸುಳ್ಳಲ್ಲ.
- ಡಾ.ರಾಜಶೇಖರ ನಾಗೂರ
