ಎಲ್ಲರೂ ಒಂದಲ್ಲಾ ಒಂದು ಬಾರಿ ನನುಗ್ ಇವಾಗ್ ಮೂಡಿಲ್ಲ, ಆಮೇಲ್ ಮಾಡ್ತೀನಿ, ನಾಳೆ ಮಾಡ್ತೀನಿ ಅಂತಾರಲ್ಲ ಆ ಮೂಡ್ ಅನ್ನೋದು ದುಡ್ಡು ಕೊಟ್ಟು ಪಡೆಯೋದಾ? ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಮೂಡ್ ಇಲ್ಲ’ ತಪ್ಪದೆ ಮುಂದೆ ಓದಿ…
ಯಾವಾಗ್ ನೋಡಿದ್ರು ಮೊಬೈಲ್ ಹಿಡ್ಕೊಂಡ್ ಸೋಫ್ಹಾದ್ಮೇಲ್ ಬಿದ್ಕೊಂಡಿರ್ತ್ಯಲ ಹೋಗ್ ಓದ್ಕೊ, ಎಕ್ಸಾಮ್ ಹತ್ರ ಬರ್ತಿದೆ ಎಂದು ರಮೇಶ ಮಗ ರಾಮ್ ಗೆ ಹೇಳುತ್ತಿದ್ದರೆ, ಏ, ಇವಾಗ್ ನಂಗ್ ಮೂಡಿಲ್ಲ, ಸುಮ್ನೆ ಗೇಮ್ಸ್ ಆಡಕ್ ಬಿಡು, ನಂಗೊತ್ತು ಓದ್ಕೊಳಕೆ ಎಂದು ಅಪ್ಪನ ಕಡೆ ತಿರುಗಿಯೂ ನೋಡದೆ ಉತ್ತರಿಸಿದ್ದ ರಾಮ್.
ರೀ, ನಾಳೆ ಎಲ್ಲಾದ್ರು ಹೊರ್ಗಡೆ ಹೋಗ್ಬರಣ, ಎಲ್ಲು ಹೋಗ್ದೆ ತುಂಬಾ ದಿನ ಆಯ್ತು ಎಂದು ಸುಧಾ ಹೇಳುತ್ತಿದ್ದರೆ ಸತೀಶ, ನಂಗ್ಮೂಡಿಲ್ಲ, ನೀನ್ಬೇಕಾದ್ರೆ ಹೋಗ್ಬಾ. ನಾನ್ ಅರಾಮಗ್ ಮನೇಲಿರ್ತೀನಿ. ದಿನಾ ಆ ಟ್ರಾಫ್ಹಿಕ್ಕು, ಧೂಳು, ಹೊಗೆ ಸಾಕಾಗ್ಹೋಗಿದೆ ಎಂದಾಗ ಸುಧಾಳ ಮುಖ ಬಾಡಿತ್ತು.

ಫೋಟೋ ಕೃಪೆ : ಅಂತರ್ಜಾಲ
ಇವತ್ತಾದ್ರು ರೂಮಲ್ ಕಿತ್ತ್ಹಾಕಿದ್ ಬಟ್ಟೆಗಳುನ್ನೆಲ್ಲ ಮಡ್ಸಿಟ್ಗ, ರಜ ಇದ್ಯಲ ಎಂದು ವತ್ಸಲಾ ಹೇಳುತ್ತಿದ್ದರೆ ಮಗಳು ಸಾನ್ವಿ ಹೋಗಮ್ಮ, ನಂಗ್ ಮೂಡಿಲ್ಲ , ಸಿಗದೆ ಒಂದ್ ಭಾನ್ವಾರ, ಅರಾಮಾಗಿರಕ್ ಬಿಡು ಎಂದು ಥಟ್ಟನೆ ಹೇಳಿದ್ದಳು. ಆಗ ವತ್ಸಲಾ ಅಯ್ಯೋ, ಈ ಮೂಡ್ ಅನ್ನೋದು ದುಡ್ ಕೊಟ್ರೆ ಸಿಗೋ ಹಂಗಿದ್ರೆ ಅದ್ಕೆ ಅದೆಷ್ಟ್ ದುಡ್ ಖರ್ಚ್ ಮಾಡ್ತಿದ್ವೋ ಏನೋ. ಅದೇನ್, ಏನ್ ಹೇಳಿದ್ರು ಮೂಡಿಲ್ಲ, ಮೂಡಿಲ್ಲ ಅಂತಿರ್ತಿರ, ನಮ್ಗಂತು ಹಿಂಗೆಲ್ಲ ಹೇಳೇ ಗೊತ್ತಿಲ್ಲ ಎನ್ನುವಷ್ಟರಲ್ಲೇ ಹೌದು, ನೀವೆಲ್ಲ ಹೇಳ್ತಿರ್ಲಿಲ್ಲ, ನಾವ್ ಹೇಳ್ತಿವಷ್ಟೇ ಎಂದ ಸಾನ್ವಿಯ ಮಾತು ವತ್ಸಲಾಳಿಗೆ ಒಮ್ಮೆ ಯೋಚಿಸುವಂತೆ ಮಾಡಿತ್ತು . ಹೌದು, ಅವತ್ತು ತಿಂಗಳ ಮೂರು ದಿನದ ರಜೆಯಲ್ಲಿ ವಿಪರೀತ ಸ್ರಾವ, ಕಿಬ್ಬೊಟ್ಟೆ, ಸೊಂಟ ಎಲ್ಲ ನೋವು,ನಿಲ್ಲುವುದಕ್ಕೂ ಕಷ್ಟವಾಗುತ್ತಿತ್ತು . ಆದರೂ ನಡೆಯಲಾಗದ ಅತ್ತೆಯನ್ನು ಕೈಹಿಡಿದು ಬಾತ್ರೂಮಿಗೆ ಕರೆದುಕೊಂಡು ಹೋಗುವುದರಿಂದ ಹಿಡಿದು ಮಧ್ಯಾಹ್ನದ ಊಟಕ್ಕೆ ಮುದ್ದೆ,ರಾತ್ರಿಗೆ ಚಪಾತಿ ಬೇಕೇ ಬೇಕು ಎಂಬ ಅವರ ಅಧಿಕಾರದ ಧೋರಣೆಗೆ ಜೊತೆಗೆ ಗಂಡನಾದವನು ಹೆಂಡತಿಯ ಕಷ್ಟ -ಸುಖ ಕೇಳದೇ ತಾಯಿಗೇ ಒತ್ತಾಸೆಯಾಗಿ ನಿಂತಾಗ ಕಷ್ಟವಾದರೂ ಮಾಡಿ ಬಡಿಸಿದ್ದಳು. ಹೌದು, ಆಗ ನಾನಿದ್ದ ಪರಿಸ್ಥಿತಿಗೆ ಹೋಗಿ ಮಲಗಿದ್ದರೆ ಸಾಕಾಗಿತ್ತು. ಅಡಿಗೆ ಮಾಡುವ ಮನಸ್ಸಂತೂ ಖಂಡಿತಾ ಇರಲಿಲ್ಲ. ಆದರೆ, ಅರ್ಥ ಮಾಡಿಕೊಳ್ಳುವವರು ಯಾರು? ನೆನೆಸಿಕೊಂಡು ವತ್ಸಲಾಳ ಕಣ್ಣಲ್ಲಿ ನೀರು ಜಿನುಗಿತು.
ಎಲ್ಲರೂ ಒಂದಲ್ಲಾ ಒಂದು ಬಾರಿ ನನುಗ್ ಇವಾಗ್ ಮೂಡಿಲ್ಲ, ಆಮೇಲ್ ಮಾಡ್ತೀನಿ, ನಾಳೆ ಮಾಡ್ತೀನಿ ಎಂದು ಕೆಲವು ಕೆಲಸಗಳನ್ನೋ, ಎಲ್ಲಿಗಾದರೂ ಹೋಗುವುದನ್ನೋ ಮುಂದೂಡುವವರೇ. ಇದು ಎಲ್ಲರ ಮನೆಯ ಕಥೆಯೂ ಹೌದು. ಸಮಯ, ಸಂದರ್ಭಗಳು ಬೇರೆಯಷ್ಟೆ. ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಇವತ್ತು ಯಾಕೋ ನಂಗ್ ಮೂಡಿಲ್ಲ ಅನ್ನಿಸುವುದು ಸಹಜ.
ಕಾರಣಗಳು :
- ನಿದ್ರಾಹೀನತೆ : ಸರಿಯಾಗಿ ನಿದ್ರೆ ಆಗದಿದ್ದಾಗ ಮರುದಿನ ಯಾವ ಕೆಲಸವನ್ನೂ ಮಾಡಲು ಮನಸ್ಸು ಬರುವುದಿಲ್ಲ.
- ಆಹಾರ: ಕೆಲವೊಮ್ಮೆ ಆಹಾರ ತಿಂದ ಬಳಿಕ ಹೊಟ್ಟೆಭಾರ ಆಗುವುದರಿಂದ ಸುಮ್ಮನೇ ಹೋಗಿ ಮಲಗಬೇಕೆನಿಸುತ್ತದೆ. ಚಟುವಟಿಕೆಯಿಂದಿರಲು ಸಾಧ್ಯವಾಗುವುದಿಲ್ಲ.
- ಪರಿಸರ: ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಬರೀ ಋಣಾತ್ಮಕ ಅಂಶಗಳೇ ತುಂಬಿಕೊಂಡಿದ್ದರೆ ನಮಗೂ ಯಾವುದಕ್ಕೂ ಮನಸ್ಸು ಬರುವುದಿಲ್ಲ. ಕುಗ್ಗಿಸುವವರಿದ್ದರಂತೂ ಇನ್ನೂ ಕಷ್ಟ.
- ಆರೋಗ್ಯ: ಆರೋಗ್ಯ ಸಮಸ್ಯೆಯೂ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದರಿಂದ ಮಾನಸಿಕವಾಗಿ ಉಲ್ಲಸಿತರಾಗಿರಲು ಸಾಧ್ಯವಾಗುವುದಿಲ್ಲ.
- ಹವಾಮಾನ: ವಿಪರೀತ ಬಿಸಿಲಿನ ಧಗೆಯಿಂದ ಹೆಚ್ಚಿನ ಆಯಾಸ ಉಂಟಾಗುತ್ತದೆ. ಆಗಲೂ ಏನೂ ಮಾಡುವುದು ಬೇಡ ಎನಿಸಿಬಿಡುತ್ತದೆ. ಇದೇ ರೀತಿ ವಿಪರೀತ ಚಳಿಯಲ್ಲೂ ಬೆಚ್ಚಗೆ ಹೊದೆದು ಮಲಗಲಷ್ಟೇ ಮನಸ್ಸು ಬರುವುದು. ಇನ್ನು ಅತಿಯಾದ ಮಳೆಯಿಂದ ಹೊರಗಿನ ಕೆಲಸಗಳಿಗೆ ಹೊರಡಲು ಮನಸ್ಸು ಬರುವುದಿಲ್ಲ. ಹಾಗಾಗೇ ಎಷ್ಟೋ ಕೆಲಸಗಳು ಉಳಿದು ಬಿಡುತ್ತವೆ.
- ಒತ್ತಡ: ಬಿಡುವಿಲ್ಲದ ಕೆಲಸ, ಬೇರೆಯವರಿಂದ ಮಾನಸಿಕವಾಗಿ ಉಂಟಾಗುವ ಕಿರುಕುಳ, ಇಲ್ಲಸಲ್ಲದ ಆರೋಪಗಳು, ಅವಮಾನ,ಸೋಲು, ಬೈಗುಳ ಇವೆಲ್ಲವುಗಳಿಂದ ಮನಸ್ಸಿನ ಮೇಲೆ ಒತ್ತಡ ಉಂಟಾಗುತ್ತದೆ. ಆಗ ಬೇರೆ ಯಾವುದಕ್ಕೂ ಮೂಡಿರುವುದಿಲ್ಲ.
- ಏಕತಾನತೆ: ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಜಗತ್ತಿನಿಂದ ಯಾವಾಗಲೂ ಓದು,ಬರಿ, ಪರೀಕ್ಷೆ ಇಷ್ಟೆ. ಬೇರೆ ಯಾವುದಕ್ಕೂ ಸಮಯವಿರುವುದಿಲ್ಲ. ಇನ್ನು ದುಡಿಯುವವರದ್ದು ಯಾಂತ್ರಿಕ ಬದುಕು. ಬೆಳಿಗ್ಗೆ ಏಳು,ತಯಾರಾಗು, ಕೆಲಸಕ್ಕೆ ಹೋಗು, ಸುಸ್ತಾಗಿ ಬಾ, ಊಟ, ನಿದ್ದೆ , ಇಷ್ಟೆ.

ಫೋಟೋ ಕೃಪೆ : ಅಂತರ್ಜಾಲ
ಪರಿಹಾರ
- ನೆಮ್ಮದಿಯ ನಿದ್ರೆ: ಅದಕ್ಕೆ ಬೇಕಾದ ಪ್ರಶಾಂತ ವಾತಾವರಣ, ಬೇಡದ ಯೋಚನೆಗಳನ್ನು ಬದಿಗೊತ್ತಿ ಒಂದೆರಡು ಪುಟ ಓದಿದರೂ ಜ್ಞಾನದ ಜೊತೆಗೆ ಚೆಂದದ ನಿದ್ರೆಯೂ ಬರುತ್ತದೆ.
- ಸತ್ವಯುತ ಆಹಾರ: ಜಂಕ್ ಫುಡ್ ಬದಿಗಿರಿಸಿ ಮನೆಯಲ್ಲಿ ಮಾಡಿದ ಆರೋಗ್ಯಕರ ಅಡುಗೆ, ತಿಂಡಿ ತಿಂದರೆ ನಿಜಕ್ಕೂ ಹೊಟ್ಟೆಗೂ ಹಗುರ ಮನಸ್ಸಿಗೂ ಉಲ್ಲಾಸ. ಏಕೆಂದರೆ, ಮನೆಯಲ್ಲಿ ತಾಯಿ,ಹೆಂಡತಿ ಯಾವಾಗಲೂ ಮನೆಯವರೆಲ್ಲರ ಯೋಗಕ್ಷೇಮ, ಆರೋಗ್ಯ, ಅವರ ಇಷ್ಟಾನಿಷ್ಟಗಳನ್ನು ತಿಳಿದೇ ಅಡುಗೆ ಮಾಡುತ್ತಾಳೆ.
- ಒಳ್ಳೆಯ ವಾತಾವರಣ: ಒಂದೊಮ್ಮೆ ಹೊರಗಿನ ವಾತಾವರಣ ನಮ್ಮ ಅಭ್ಯುದಯಕ್ಕೆ ವಿರೋಧವಾಗಿದ್ದರೆ ಖಂಡಿತಾ ಅಲ್ಲಿಂದ ಆದಷ್ಟು ಬೇಗ ಹೊರ ಬರುವುದು ಒಳ್ಳೆಯದು. ಇನ್ನು ನಮಗೆ ಬೇಕಾದಂತಹ ವಾತಾವರಣವನ್ನು ನಮ್ಮ ನಮ್ಮ ಮನೆಗಳಲ್ಲಿ ಸೃಷ್ಟಿಸಿಕೊಳ್ಳುವುದೂ ಸಹ ನಮ್ಮ ಕೈಯ್ಯಲ್ಲೇ ಇದೆ.
- ಆರೋಗ್ಯ: ಮೊದಲು ಸಮಸ್ಯೆ ಏನೆಂದು ಅರಿತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಕೆಲವು ಸಮಸ್ಯೆಗಳಿಗೆ ತಕ್ಷಣ,ಇನ್ನು ಕೆಲವೊಂದಕ್ಕೆ ದೀರ್ಘಕಾಲದ ಚಿಕಿತ್ಸೆ ಬೇಕಾಗುತ್ತದೆ. ಆಗ ತಾಳ್ಮೆ ಬಹು ಮುಖ್ಯ( ತಮಗೆ ಆರೋಗ್ಯ ಸರಿಯಿಲ್ಲವೆಂದು ಮನೆಯವರಿಗೆಲ್ಲಾ ಕಿರಿಕಿರಿ ಮಾಡಿದರೆ ಆ ಮನೆಯ ವಾತಾವರಣ ಹಾಳಾಗಿ ಮನೆಯಲ್ಲಿರುವವರ ಮೂಡೂ ಹಾಳಾಗುತ್ತದೆ). 5)ಹವಾಮಾನ: ಬಿಸಿಲಕಾಲದಲ್ಲಿ ತಂಪು ಪಾನೀಯಗಳು. ಅದರಲ್ಲೂ ಆರೋಗ್ಯಕ್ಕೆ ಮಜ್ಜಿಗೆ, ಎಳನೀರು, ಹಣ್ಣಿನ ಜ್ಯೂಸ್ ಉತ್ತಮ. ಐಸ್ ಕ್ರೀಮ್ ತಿಂದಾಗ, ಈ ಸೆಖೆಗೆ ನೆತ್ತಿಗೆ ಹತ್ತಿದ ಕೋಪ ಒಮ್ಮೆಲೇ ಇಳಿದು ಮನಸ್ಸು ಹಗುರಾಗುವುದಂತೂ ಹೌದು. ಅದೇ ರೀತಿ ಚಳಿ,ಮಳೆಗಾಲದಲ್ಲಿ ಬಿಸಿ ಬಿಸಿಯಾದ ತಾಜಾ ಆಹಾರ ಸೇವನೆ,ಬೆಚ್ಚನೆಯ ಉಡುಪು, ಜೊತೆಗೆ ಕಾಫಿ,ಟೀ ಸೇವನೆಯು (ಅತೀ ಬೇಡ ) ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ.
- ವ್ಯಾಯಾಮ, ಧ್ಯಾನ, ಯೋಗ , ಪ್ರತೀ ದಿನದ ವಾಯುವಿಹಾರ (ವಾಕಿಂಗ್), ಮುಖ್ಯವಾಗಿ ಒಳ್ಳೆಯವರ ಸಂಗ, ಧನಾತ್ಮಕ ಚಿಂತನೆ, ಬೆಳಗಿನ ಪೂಜೆ, ಪುನಸ್ಕಾರ ಇವೆಲ್ಲವೂ ನಮ್ಮ ಮನಸ್ಸನ್ನು ಉಲ್ಲಸಿತವಾಗಿಟ್ಟು ಎಲ್ಲಾ ಕೆಲಸ ಕಾರ್ಯಗಳನ್ನೂ ಖುಷಿಯಿಂದ ಮಾಡುವಂತೆ ಮಾಡುತ್ತದೆ.
- ಏಕತಾನತೆಗೆ ಪರಿಹಾರ: ಓದುವ ಮಕ್ಕಳಿಗೂ ಆಗಾಗ ಸಿನಿಮಾ, ಕ್ರಿಕೆಟ್ ನೋಡಲು ಬಿಡಬೇಕು. ಆಟದ ಜೊತೆ ಅವರ ಇಷ್ಟದ ಹವ್ಯಾಸಗಳಿಗೂ ಅವಕಾಶ ನೀಡಬೇಕು. ಕುಟುಂಬದವರ, ಸ್ನೇಹಿತರ ಜೊತೆಗೆ ಹೊರಗೊಂದಷ್ಟು ಓಡಾಟವೂ ಇರಲಿ. ಹೋದಲ್ಲಿಯೂ ಓದಿನ ವಿಷಯ ತೆಗೆದು ಅವರ ಮೂಡನ್ನು ಹಾಳು ಮಾಡುವುದು ಬೇಡ. ಇನ್ನು ಹೊರಗಡೆ ಹೋಗಿ ಮಾಡುವ ಶಾಪಿಂಗ್ ಸಹ ನಮ್ಮ ದಿನನಿತ್ಯದ ಏಕತಾನತೆಯ ಬದುಕಲ್ಲಿ ಒಂದಷ್ಟು ಉತ್ಸಾಹ ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಮನಸ್ಸಿಗೊಂದಷ್ಟು ಬದಲಾವಣೆ, ಇಷ್ಟವಾದ ವಸ್ತುಗಳ ಖರೀದಿ ಎಲ್ಲವೂ ಮನಕ್ಕೆ ಮುದ ನೀಡುತ್ತದೆ.
ಕೊನೆಯದಾಗಿ ಮೂಡ್ ಇರುತ್ತೋ, ಬಿಡುತ್ತೋ ಬದುಕಂತೂ ಸಾಗಲೇ ಬೇಕು. ಎಲ್ಲವನ್ನೂ ಪ್ಲಾನ್ ಪ್ರಕಾರ ಮಾಡಿಕೊಂಡು ಹೋದರೆ ಆಯಾ ಸಮಯಕ್ಕೆ ಕೆಲಸಗಳು ಮುಗಿಯುತ್ತವೆ. ಉಳಿಸಿಕೊಂಡರೆ ನಮಗೇ ಹೊರೆ. ಹಾಗಾಗಿ ನಮ್ಮ ಮೂಡನ್ನು ಎಲ್ಲಿಯೂ ಹೋಗಲು ಬಿಡದೆ ಹಿಡಿದಿಟ್ಟು ಕೊಳ್ಳೋಣ ಎಂಬ ಆಶಯದೊಂದಿಗೆ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಮಂಗಳ ಎಂ ನಾಡಿಗ್
