ಕವಿ ದೇವರಾಜ್ ಹುಣಸಿಕಟ್ಟಿ ಅವರು ಪಟ್ಟಣದ ಬದುಕು ಹೇಗಿದೆ ಅನ್ನೋದನ್ನ ಮನಸ್ಸಿಗೆ ನಾಟುವಂತೆ ಕವನದ ಮೂಲಕ ಕಟ್ಟಿಕೊಟ್ಟಿದ್ದಾರೆ, ಮುಂದೆ ಓದಿ…
ಈ ಶಹರದೊಳಗ ಅದೆಷ್ಟು
ನಟಿಸುತ್ತಾರೆ ಜನ
ಪರಿಚಯಸ್ಥರು ಅಪರಿಚಿತರಂತೆ
ವರ್ತಿಸುತ್ತಾರೆ ಜನ
ಮಾತಿನಲಿ ಪೆಂಟಿ ಬೆಲ್ಲವನೆ
ಸುರಿಸುತ್ತಾರೆ ಇಲ್ಲಿ ಗೊತ್ತೇ
ಸಾರಿಗೆ ಕೇಳಿದರೆ ಹಿಡು ಉಪ್ಪು
ನಿರಾಕರಿಸುತ್ತಾರೆ ಜನ
ಮಾನವೀಯತೆ ಸತ್ತು ನರಳುತ್ತಿದೆ
ಆಸ್ಪತ್ರೆಯ ಮಂಚದ ಮೇಲೆ ಗೊತ್ತೇ
ಹಣದ ಥೈಲಿಗೆ ಮಾತ್ರ
ತುಟಿ ಬಿಚ್ಚುತ್ತಾರೆ ಜನ
ರಾತ್ರಿ ರಸ್ತೆಯಲಿ ಬೆಳಗುವಷ್ಟು
ಬೆಳಕಿಲ್ಲ ಹೃದಯದಲಿ
ಬೊಗಸೆ ನೀರಿಗೂ ಲೆಕ್ಕ
ಹಾಕುತ್ತಾರೆ ಜನ
ನಗರದ ನೌಟಂಕಿ ಆಟಗಳಿಗೆ
ಹಗಲಲು ಬೆಚ್ಚತ್ತೇನೆ ಗೆಳೆಯ
‘ದೇವ’ನೂರಿನ ಪಯಣವನ್ನೂ
ಈಗೀಗ ಮರೆತು ಬದುಕುತ್ತಾರೆ ಜನ
- ದೇವರಾಜ್ ಹುಣಸಿಕಟ್ಟಿ (ಕವಿಗಳು)
