ಹೆಣ್ಣು ಇಂದು ಗಂಡಿನ ಸರಿಸಮಾನವಾಗಿ ದುಡಿಯುತ್ತಿದ್ದಾಳೆ, ಹೆಜ್ಜೆಯಿಡುತ್ತಿದ್ದಾಳೆ. ಹಾಗಿದ್ದಾಗ ಮದುವೆ, ಬಾಣಂತನ ಖರ್ಚು ತವರಮನೆಗೆ ಸೀಮಿತವಾಗಬಾರದು.ಅದರಲ್ಲಿನ ಸಮಪಾಲು ಗಂಡಿನ ಮನೆಯವರು ವಹಿಸಿಕೊಂಡರೆ ಸಂಸಾರದಲ್ಲಿ ಹಾಲು ಜೇನಾಗುವುದರಲ್ಲಿ ಸಂಶಯವಿಲ್ಲ.
ತಂಗಿಗೆ ಹೆಣ್ಣು ಮಗು ಹುಟ್ಟಿದಾಗ, ನಾನು ಬೆಂಗಳೂರಿನಲ್ಲಿ ಸಿಹಿ ವಿತರಿಸಿದ್ದೆ ಅಂದು ಹಲವರು ಸಿಹಿ ತೆಗೆದುಕೊಂಡು ಶೋಕದ ನುಡಿ ನುಡಿದರು.
ಹಲವು ವರುಷಗಳ ನಂತರ ನನಗೂ ಮಗಳು ಹುಟ್ಟಿದಾಗ ಆ ರೀತಿ ಮುಖ ತೋರಿದವರಲ್ಲಿ, ನುಡಿದವರಲ್ಲಿ ಕಾರಣ ಕೇಳಿದೆ.
” ಏನೇ ಆದರೂ ನಿಮ್ಮ ಮಗಳು ಇನ್ನೊಂದು ಕುಟುಂಬಕ್ಕೆ ಕೊಡಬೇಕಾದವಳು, ಸಾಕಿದ ಖರ್ಚು, ಮದುವೆ, ವರದಕ್ಷಿಣೆ….”
ನಾನೆಂದೆ ” ಅವಳು ಹುಟ್ಟಿ ಇನ್ನೂ ದಿನಗಳಾಗಲಿಲ್ಲ. ಈ ರೀತಿ ಹೇಳುವುದು ಎಷ್ಟರಮಟ್ಟಿಗೆ ಸರಿ?. ನಮ್ಮ ಕುಟುಂಬದಲ್ಲಿ ತಲೆ ತಲಾಂತರದಿಂದ ಹೆಣ್ಣು-ಗಂಡು ಎಂಬ ಭೇದ ಭಾವವಿಲ್ಲ. ಮಗಳು ಇಷ್ಟ ಪಟ್ಟರೆ ಅವಳಿಗೆ ಕೊಡಬೇಕಾದ, ಅವಳು ಇಚ್ಚಿಸಿದ ಎಲ್ಲಾ ವಿದ್ಯೆಗೆ ಆಸ್ಪದಕೊಡಬೇಕು. ಹಾಗೆ ಕಲಿತ ಹೆಣ್ಣುಮಕ್ಕಳನ್ನು ಆಗಿನ ಕಾಲದಲ್ಲಿ ನಮ್ಮ ಪೂರ್ವಜರು “”ಆರ್ಚಾ” ಎನ್ನುತ್ತಿದ್ದರು. ಉಣ್ಣಿಯಾರ್ಚಾ, ತುಂಬೋಲಾರ್ಚ ಹೀಗೆ. ನಂತರ , ಮದುವೆಗೆ ವರ/ವಧು – ದಕ್ಷಿಣೆ ಎಂಬುವುದು ಇಲ್ಲ. ಮದುವೆಗೆ ಹೆಣ್ಣು ಹಾಗೂ ಗಂಡಿನ ಕಡೆಯವರು ಸರಿಸಮವಾಗಿ ಖರ್ಚು ಇರುತ್ತಿತ್ತು. ಹೆಣ್ಣಿನ ಕಡೆಯವರು ಹೆಣ್ಣಿಗೆ ಹಾಕುವ ಒಡವೆಯ ಮೊತ್ತದ ಅರ್ಧಭಾಗ ಗಂಡಿನ ಕಡೆಯವರು ಕೊಡಬೇಕು. ಮಂಟಪ, ಊಟ ಮೊದಲಾದ ಖರ್ಚುಗಳು, ಹೆರಿಗೆ-ಮಗುವಿನ ನಾಮಕರಣ ಎಲ್ಲದಕ್ಕೂ ಎರಡೂ ಕುಟುಂಬದವರು ಸಮ ಪಾಲು.

ಫೋಟೋ ಕೃಪೆ : pinterest
ಅದಕ್ಕೆ ನಮ್ಮ ಹಿರಿಯರು ಹೇಳುವುದು ಮದುವೆ ಅರ್ಧಾಂಗ – ಅರ್ಧಾಂಗಿ ಸೇರಿ ಸಮತೋಲನದ ಪೂರ್ಣತೆಯ ಕುಟುಂಬ – ಎಂದು. ಅದಕ್ಕೆ ನಮಗೆ ಹುಟ್ಟಿದ್ದು ಮಗುವಾದರೆ ಸಾಕು. ಆ ಮಗು ಮನುಷ್ಯನಾಗಿ ಜೀವನ ಸಾಗಿಸುವಂತೆ ನೋಡಿ ಕೊಳ್ಳುವ ಕರ್ತವ್ಯ ಪಡೆದ ದಿನ ಎಂಬ ಸಂತೋಷಕ್ಕೆ ಈ ಸಿಹಿ. ಅದನ್ನು ಸಂತೋಷದಿಂದ, ಅಸ್ವಾಧನೆಯಿಂದ ತಿನ್ನುವಿರಂತೆ”
ಎಂದು ಹೇಳಿದ್ದು ಇಂದೂ ನನ್ನ ಸಹೋದ್ಯೋಗಿಗಳು ಹೇಳುತ್ತಿರುತ್ತಾರೆ.
ವರದಕ್ಷಿಣೆ ನಿಜವಾಗಿ, ಜನ್ಮ ಕೊಡುವ, ಪ್ರಕೃತಿಯ ಪುಣ್ಯ ವರ ಪಡೆದ ಒಂದು ಹೆಣ್ಣಿಗೆ ಮಾನವ ಸೃಷ್ಟಿಸಿದ ದುರಂತ ಎನ್ನಬಹುದು.
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)
