ಧಾರ್ಮಿಕ ಅಸಹಿಷ್ಣುತೆಯು ಅಳಿಯಲಿ … ಸೌಹಾರ್ದತೆಯ ವಾತಾವರಣ ಬೆಳೆಯಲಿ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮೂರು ದಿನಗಳ ನಮ್ಮೆಲ್ಲರ ಈ ಬಾಳು
ಇದ್ದದ್ದೇ ಮುಗಿಯಲಾರದ ನೂರು ಗೋಳು
ಎಲ್ಲವ ಮರೆತು ಮುಗುಳ್ನಗೆಯನ್ನು ಬೀರು
ರಾಗ ದ್ವೇಷವಮರೆತು ಪ್ರೀತಿಯ ತೋರು
ಬರುವಾಗ ನಾವು ಬರಿಗೈಯಲ್ಲಿ ಬಂದಿದ್ದೇವೆ
ಇರುವಷ್ಟು ದಿನ ಕಚ್ಚಾಟದಿ ಕಳೆದಿದ್ದೇವೆ
ಅಸೂಯೆಯಲ್ಲಿ ವಾಸ್ತವವ ಮರೆತಿದ್ದೇವೆ
ಹೋಗುವಾಗ ಬಳಲಿ ಬೆಂಡಾಗಿದ್ದೇವೆ
ಇರುವ ಮೂರು ದಿನ ತಾಳ್ಮೆ ಇರಲಿ
ಕೋಪ ತಾಪ ಎಲ್ಲವನ್ನೂ ಕೆಡಿಸದಿರಲಿ
ನಮ್ಮವರ ನಡುವೆ ಪ್ರೀತಿ ವಿಶ್ವಾಸವಿರಲಿ
ಭಾಂದವ್ಯ ತೋಟದಿ ಹೂಗಳು ಅರಳಲಿ
ಧಾರ್ಮಿಕ ಅಸಹಿಷ್ಣುತೆಯು ಅಳಿಯಲಿ
ಸೌಹಾರ್ದತೆಯ ವಾತಾವರಣ ಬೆಳೆಯಲಿ
ಶಾಂತಿ ಸಹನೆ ಮನೆ ಮನಗಳಲ್ಲಿ ನೆಲೆಸಲಿ
ಮಾನವೀಯ ಮೌಲ್ಯಗಳು ಎಲ್ಲೆಡೆ ವೃದ್ಧಿಸಲಿ
ದ್ವೇಷ ರೋಷದ ಕಿಡಿಗಳ ಸುಟ್ಟುಹಾಕಿ
ಭಯೋತ್ಪಾದಕ ವಿಷ ಬೀಜಗಳ ಹೊಸಕಿಹಾಕಿ
ಮುಗ್ಧ ಬದುಕಿಗೆ ಕೊಳ್ಳೆ ಇಡುವವರ ಅಳಿಸಿಹಾಕಿ
ಸಮಾಜ ಘಾತುಕ ಶಕ್ತಿಯ ಬೇರು ಸಹಿತ ಕಿತ್ತುಹಾಕಿ
- ನಾಗರಾಜ ಜಿ. ಎನ್. ಬಾಡ – ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್, ವಾಣಿಜ್ಯ ತೆರಿಗೆ ಅಧಿಕಾರಿಗಳ ಕಚೇರಿ, ಕುಮಟ, ಉತ್ತರ ಕನ್ನಡ.
