ಹೌದಲ್ಲವೇ ಕೂಡಿಕೊಂಡು ಬದುಕಬೇಕಾದ ಮನುಷ್ಯ ಹಣದ ಸುಖದ ಹಿಂದೆ ತಿರುಗಿ ತಿರುಗಿ ಬಸವಳಿದು ಸೋತು ಹೋಗುತ್ತಿದ್ದಾನೆ. ನಮ್ಮ ಅಜ್ಜಿಯ ಕಾಲಕ್ಕೂ ನಮ್ಮ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಬದುಕನ್ನು ಪ್ರೀತಿಸುವವರು ಕಮ್ಮಿ ಆಗಿ, ದುಡ್ಡಿನ ಹಿಂದೆ ಓಡುವರ ಬದುಕು ಮೂರಾಬಟ್ಟೆ ಆಗುವ ಕುರಿತು ಮಾರುತಿ ಗೋಪಿಕುಂಟೆ ಅವರ ಒಂದು ಚಿಂತನ ಲೇಖನ, ತಪ್ಪದೆ ಓದಿ…
ಬದುಕಿಗೆ ಯಾವ ಕಾಲವಾದರೇನು ಬದುಕಬೇಕು ಅಷ್ಟೇ ಎಂದು ನಮ್ಮಜ್ಜಿ ಯಾವಾಗಲೂ ಹೇಳುತ್ತಿದ್ದರು. ಬದುಕಬೇಕು ನಿಜ ಬದುಕಿಗೊಂದು ಕ್ರಮ ಬೇಡವೆ ಯಾವ ಅಳತೆಗೋಲಿಗು ಸಿಗದ ಅನಿರ್ಬಂಧಿತ ಗೆರೆಗಳ ಸಾಲು ಬದುಕು ಅಲ್ಲವೆ. ನಾನಿಂಗೆ ಬದುಕಬೇಕು ಎಂದುಕೊಂಡಿದ್ದವನು ನಿಯಮವನ್ನು ಒಂದಲ್ಲ ಒಂದು ಬಾರಿ ಮೀರಿಯೆ ಮೀರುತ್ತಾನೆ. ಚೆನ್ನಾಗಿ ಓಡಾಡಿಕೊಂಡಿದ್ದವನೊಬ್ಬ ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಾನೆ. ಸತ್ತೆ ಹೋಗುತ್ತಾನೆ ಎಂದುಕೊಂಡವನು ದಿಢೀರನೆ ಎದ್ದು ಓಡಾಡುತ್ತಾನೆ. ಇವುಗಳನ್ನು ಯಾವ ಕಾಲಕ್ಕೆ ಅಳೆಯಲು ಸಾಧ್ಯ. ನಾಗರೀಕತೆಯ ಉತ್ತುಂಗದ ಬದುಕನ್ನು ಕುರಿತು ಹೇಳುವಾಗೆಲ್ಲ ನನ್ನಜ್ಜಿ ಎಂತ ನಾಗರೀಕತೆ ಒಬ್ಬರೊಬ್ಬರನ್ನು ಅಳಿದು ಬದುಕುವುದು ಮಾನವೀಯತೆಯ ಹಂಗಿಲ್ಲದೆ ನಡೆದುಕೊಳ್ಳುವುದು ಮನುಷ್ಯರನ್ನು ಮನುಷ್ಯರಂತೆ ಕಾಣದೆ ಬದುಕುವುದು ಎಂತಕಾಲವೆಂದು ಆಗಾಗ ಹೇಳುತ್ತಿದ್ದಳು.

ಫೋಟೋ ಕೃಪೆ :google
ಅರೆ ನಿಮ್ಮ ಕಾಲದಲ್ಲಿ ಹೀಗೆ ಇರಲಿಲ್ಲವ ಎಂದು ಕೇಳಿದರೆ ಅವರವರ ಬದುಕನ್ನು ಪ್ರೀತಿಸಿ ಬದುಕುವ ಪರಿಪಾಠ ನಮ್ಮದು. ದುಡಿದು ತಿನ್ನುವ ಸಂಸ್ಕೃತಿ ಹಬ್ಬ ಹರಿದಿನಗಳೆಂದರೆ ಅದೊಂದು ಸಂಭ್ರಮ ಕೋಲು ಒಯ್ಯುವುದು ಹೆಂಗಳೆಯರೆಲ್ಲಾ ಒಟ್ಟಾಗಿ ಸೇರಿ ಪದಗಳನ್ನು ಹೇಳುವುದು ಅದೊಂತರಾ ಸಾಮೂಹಿಕವಾಗಿ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದ ಕಾಲ. ಒಂದು ಮನೆಯಲ್ಲಿ ಮಾಡಿದ ಅಡುಗೆ ಎಲ್ಲರಿಗೂ ತಿಳಿಯುತ್ತಿತ್ತು. ಅಂತದ್ದೊಂದು ಗೆಳೆತನ ಕೌಟುಂಬಿಕವಾಗಿ ಇತ್ತು ಈಗಿನ ಹಬ್ಬಗಳು ನಾಲ್ಕು ಗೋಡೆಗಳ ಮಧ್ಯೆ ನಡೆದುಹೋಗುತ್ತವೆ ಅನ್ನುವಾಗ ಅಜ್ಜಿಯ ಮುಖದಲ್ಲಿ ಬೇಸರದ ಛಾಯೆ ಎದ್ದು ಕಾಣುತ್ತಿತ್ತು.

ಫೋಟೋ ಕೃಪೆ :google
ಹೌದಲ್ಲವೇ ಕೂಡಿಕೊಂಡು ಬದುಕಬೇಕಾದ ಮನುಷ್ಯ ಹಣದ ಸುಖದ ಹಿಂದೆ ತಿರುಗಿ ತಿರುಗಿ ಬಸವಳಿದು ಸೋತು ಹೋಗುತ್ತಿದ್ದಾನೆ. ಗೆದ್ದವನು ಎಲ್ಲಾ ಬಂಧಗಳನ್ನು ಕಳಚಿ ಒಬ್ಬಂಟಿಯಾಗಿ ಪರಿತಪಿಸುತ್ತಿದ್ದಾನೆ. ತಾನು ಗಳಿಸಿದ ಹಣವಾಗಲಿ ಅವನನ್ನು ಸಂತೈಸುವುದಿಲ್ಲ ಜೊತೆಗಿರದ ಜೀವಿಗಳಿಗೆ ಪರಿತಪಿಸಿದರೂ ಅವರು ಸಿಗುವುದಿಲ್ಲ ಎನ್ನುವಂತಾಗುತ್ತದೆ. ಮನುಷ್ಯ ಮನುಷ್ಯ ಪ್ರೀತಿಯನ್ನಿಟ್ಟುಕೊಂಡು ಬದುಕಿದರೆ ಬದುಕು ಎಷ್ಟು ಚೆಂದ ಅಲ್ಲವೇ ಎಂದು ಯೋಚಿಸುವಾಗಲೆಲ್ಲಾ ಅಜ್ಜಿಯ ಇತ್ತೊಂದಿತ್ತು ಕಾಲ ಭಾವಬಂಧವ ಬೆಸುಗೆಯ ಸಮೃದ್ಧಿಯ ಕಾಲ ಎನ್ನುವಾಗೆಲ್ಲಾ ಬದಲಾದುದು ಕಾಲವೊ ಬದುಕೊ ಅಥವಾ ಬದುಕಿನ ರೀತಿಯೋ ಮನುಷ್ಯನ ನಡವಳಿಕೆಯೋ ಎಂದು ತಿಳಿಯದೆ ಇದ್ದರೂ ಆಗಾಗ ಅಜ್ಜಿಯ ಮಾತು ಕಿವಿಯಲ್ಲಿ ರಿಂಗಣಿಸುತ್ತಲೆ ಇರುತ್ತದೆ…
- ಮಾರುತಿ ಗೋಪಿಕುಂಟೆ – ಸಿರಾ ತಾಲ್ಲೂಕು ತುಮಕೂರು ಜಿಲ್ಲೆಯ ಗೋಪಿಕುಂಟೆ ಗ್ರಾಮ ನನ್ನ ಹುಟ್ಟೂರು. ಸಾಹಿತ್ಯವೆಂದರೆ ಬಲು ಪ್ರೀತಿ. ಕವಿತೆ ಬರೆಯುವ ಹಂಬಲ. ನನ್ನ ಅನೇಕ ಕವಿತೆಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ತೊಡಗಿಸಿ ಕೊಂಡಿದ್ದೇನೆ. ಕತೆ ಲಲಿತಪ್ರಬಂಧ ಬರೆಯುವ ಹವ್ಯಾಸವು ಇದೆ “ಎದೆಯ ನೆಲದ ಸಾಲು” ಕವಿತೆ ಸಂಕಲನ ಪ್ರಕಟಣೆಯ ಹಾದಿಯಲ್ಲಿದೆ.
