ಆಡಂಬರದ ಬದುಕು ಹಾಗು ಯಾಂತ್ರಿಕತೆಯ ಬದುಕಿಗೆ ಒಗ್ಗಿಕೊಂಡಿರುವ ಮನಸ್ಸುಗಳ ಮಧ್ಯೆ ಕುಗ್ಗಿಹೋದ ಮನಸ್ಸನ್ನು ಯಾರು ಅರ್ಥ ಮಾಡಿಕೊಳ್ಳಲಾರ. ಇದು ಮನಸ್ಸಿನ ಪಿಸುಮಾತು ಚಂದನ್ ಅವರ ಜೀವನದ ಸತ್ಯ ಲೇಖನವನ್ನು ತಪ್ಪದೆ ಓದಿ…
ಮನುಷ್ಯನ ಬದುಕು ಅನ್ನೋದು ಸಮುದ್ರದ ತೀರದಂತೆ. ಕೆಲವೊಮ್ಮೆ ಪ್ರಶಾಂತವಾಗಿ ಸಾಗುತ್ತಿದ್ದರೆ ಕೆಲವೊಮ್ಮೆ ಬೋರ್ಗೆರೆಯುವ ಅಲೆಗಳಿಂದ ಬದುಕು ಎದುರಿಸಬೇಕಾಗುತ್ತದೆ. ಯಾವಾಗ ಪ್ರಶಾಂತವಾಗಿ ಬದುಕು ಸಾಗುತ್ತದೆ, ಯಾವಾಗ ಪ್ರಶಾಂತವಾದ ಬದುಕಿಗೆ ವಿರುದ್ಧವಾಗಿ ಬದುಕು ದಿಕ್ಕನ್ನು ಬದಲಿಸಿಕೊಂಡು ಬಿಡುತ್ತೆ ಅಂತ ಯಾರಿಂದಲೂ ಊಹಿಸಲು ಸಾಧ್ಯವಾಗುವುದಿಲ್ಲ.
ಬಂದದ್ದನ್ನು ಬಂದಂತೆ ಎದುರಿಸಿ ಸ್ವೀಕರಿಸುವುದನ್ನು ಬಿಟ್ಟರೆ ಬದುಕಲ್ಲಿ ಬೇರೇನೂ ಮಾಡಲಾಗದ ನಿಸ್ಸಹಾಯಕ ಬದುಕು ನಮ್ಮೆಲ್ಲರದು. ಬದುಕೆಂಬ ಸಮುದ್ರದಲ್ಲಿದ್ದು ಎದುರಾಗುವ ಅಲೆಗಳ ವಿರುದ್ಧ ಎಂದಿಗೂ ಈಜಲು ಆಗದು. ಒಂದು ವೇಳೆ ಪ್ರಯತ್ನಿಸಿದರೂ ಅದು ವಿಧಿಯ ವಿರುದ್ಧ ಗೆಲ್ಲಲಾರದ ವ್ಯರ್ಥ ಪ್ರಯತ್ನ ಅಷ್ಟೇ.
ಮನುಷ್ಯನ ಜೀವನದಲ್ಲಿ ಕೆಲವೊಮ್ಮೆ ಕಷ್ಟಗಳು ಎದುರಾಗುತ್ತವೆ. ಕಷ್ಟಗಳು ಎಲ್ಲರ ಜೀವನದಲ್ಲಿಯೂ ಸಹಜವೇ ಆದರೂ ಕೆಲವರ ಜೀವನದಲ್ಲಿನ ಕೆಲವೊಂದು ಕಷ್ಟಗಳು ಸಮುದ್ರ ತೀರದಲ್ಲಿನ ಕಲ್ಲುಗಳಂತೆ ವ್ಯಕ್ತಪಡಿಸಲಾಗದೆ ಕೇವಲ ಮೌನವಾಗಿದ್ದು ಬದುಕಿನಲ್ಲಿ ಎದುರಾಗುವ ಕಷ್ಟ, ನೋವು, ದುಃಖಗಳೆಂಬ ಅಲೆಗಳನ್ನು ಸಹಿಸಿಕೊಂಡು ಅನುಭವಿಸಲು ಮಾತ್ರ ಸೀಮಿತವಾಗಿರುತ್ತೆ.
ಅದೇ ರೀತಿ ಮನುಷ್ಯನ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ವಿವರಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅದು ವ್ಯರ್ಥವಾಗಿ ಹೋದಂತೆಲ್ಲಾ ಆ ಮನುಷ್ಯನ ಮನಸ್ಥಿತಿ ಯಾವ ಮಟ್ಟಕ್ಕೆ ತಲುಪುತ್ತದೆ ಅಂದರೆ ತನ್ನ ಜೀವನದಲ್ಲಿ ಎದುರಾಗುವ ಹಾಗು ಅನುಭವಿಸುತ್ತಿರುವ ಕಷ್ಟವನ್ನಾಗಲೀ, ತನ್ನ ಜೀವನದಲ್ಲಿನ ನೋವು ಹಾಗು ದುಃಖಗಳನ್ನಾಗಲೀ ಯಾರೊಂದಿಗೂ ಹಂಚಿಕೊಳ್ಳಲಾರದೆ ತನ್ನಲ್ಲಿ ತಾನೇ ಅನುಭವಿಸುವಂತಾಗುತ್ತಾನೆ.
ಅಂತಹ ಕಷ್ಟ, ನೋವು, ದುಃಖಗಳಿಂದ ತುಂಬಿರುವ ವ್ಯಕ್ತಿಯ ಬದುಕಿನಲ್ಲಿ ಯಾವುದೇ ಕನಸುಗಳಾಗಲೀ ಅಥವಾ ಭರವಸೆಯ ಬೆಳಕಾಗಲೀ ಉಳಿದಿರಲ್ಲ. ಎಷ್ಟೇ ಕನಸುಗಳು ಹಾಗು ಭರವಸೆಯ ಬದುಕಿನ ಆಸೆಗಳಿದ್ದರೂ ಅದು ಎಂದಿಗೂ ಈಡೇರದ ಕನಸುಗಳಂತಾಗಿರುತ್ತವೆ.
ಅಂತಹ ವ್ಯಕ್ತಿಯ ಮನಸ್ಥಿತಿಯ ಪರಿಚಯ ಇಡೀ ಪ್ರಪಂಚದಲ್ಲಿ ತನ್ನನ್ನು ಬಿಟ್ಟು ಬೇರೆ ಯಾರಿಗೂ ಅರ್ಥವಾಗಲಾರದು. ಅರ್ಥ ಮಾಡಿಕೊಳ್ಳುವುದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರತೆಯ ಮನಸ್ಥಿತಿಯ ಪ್ರಪಂಚದಲ್ಲಿ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಅಥವಾ ಅದಕ್ಕಾಗಿ ಸಮಯ ನೀಡಿ ಆಲೋಚಿಸುವ ಮನಸ್ಥಿತಿ ಯಾರಲ್ಲಿಯೂ ಇರದು. ಕೇವಲ ಆಡಂಬರದ ಬದುಕು ಹಾಗು ಯಾಂತ್ರಿಕತೆಯ ಬದುಕಿಗೆ ಒಗ್ಗಿಕೊಂಡಿರುವ ಮನಸ್ಸುಗಳ ಮಧ್ಯೆ ಅಂತಹ ವ್ಯಕ್ತಿತ್ವವುಳ್ಳ ವ್ಯಕ್ತಿಯ ನಿರೀಕ್ಷೆ ಹಾಗು ಅನ್ವೇಷಣೆ ಅನ್ನೋದು ವ್ಯರ್ಥ ಪ್ರಯತ್ನ……
- ಚಂದನ್
