ಕೊರೊನ ಪಾಸಿಟಿವ್ ಬಂದವರ ಗೌಪ್ಯತೆ ಕಾಪಾಡಿ. ಸಾಧ್ಯವಾದರೆ ದೇವರಲ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ.
ಪೃಥ್ವಿಯಲ್ಲಿ ಪಾಪ ಹೆಚ್ಚಾದಾಗ ಕೃಷ್ಣ ಅದರ ಸರ್ವನಾಶಕ್ಕಾಗಿ ಹೊಸ ಅವತಾರವನ್ನು ತಾಳುತ್ತಾನೆ ಎಂದು ಪುರಾಣದಲ್ಲಿ ಓದಿದ್ದೆ. ಅದರಂತೆ ಭೂಮಿಯ ಮೇಲೆ ಪಾಪ ಹೆಚ್ಚಾಗಿ ಅದರ ನಾಶಕ್ಕಾಗಿ ಕರೋನ ಹುಟ್ಟಿ ಕೊಂಡಿತೇನೋ ಅನ್ನಿಸತೊಡಗಿದೆ. ಜೊತೆಗೆ ನಾವೆಲ್ಲ ಮುಳುಗುತ್ತಿರುವ ಟೈಟಾನಿಕ್ ಹಡುಗಿನಲ್ಲಿರುವಂತೆ ಭಾಸವಾಗುತ್ತಿದೆ. ಮುಳುಗುವ ಹಡುಗಿನಲ್ಲಿ ಒಂದೇ ಕಡೆ ಭಾರ ಹೆಚ್ಚಾದಲ್ಲಿ ಭಾರವಾದ ಕಡೆ ಬೇಗ ಮುಳುಗುತ್ತದೆ.ಆಗ ಸಾವು ಹೆಚ್ಚಾಗುತ್ತದೆ. ಹಾಗೆ ಗುಂಪು ಇದ್ದಲ್ಲಿ ಕರೋನ ಅಟ್ಟಹಾಸ ಹೆಚ್ಚುತ್ತಾ ಹೋಗುತ್ತಿದೆ.
ಕರೋನ ಮುಷ್ಟಿಯಿಂದ ಯಾರು ತಪ್ಪಿಸಿಕೊಳ್ಳುವರೋ, ಯಾರು ನಲುಗುವರೋ, ಯಾರ ಹಣೆಬರಹ ಎಲ್ಲಿದೆಯೋ ಯಾರಿಗೂ ತಿಳಿದಿಲ್ಲ. ದೊಡ್ಡದಾದ ಮನೆ, ಕೈ ತುಂಬಾ ಹಣ, ಓಡಾಡಲು ದೊಡ್ಡ ಕಾರೆಲ್ಲ ಇದ್ದರೂ ನೆಮ್ಮದಿ ಮಾತ್ರ ಯಾರ ಮನೆಯಲ್ಲಿ ಉಳಿದಿಲ್ಲ. ಉಳಿದಿರುವುದು ಹೆಜ್ಜೆ ಹೆಜ್ಜೆಗೂ ಜೀವದ ಭಯ. ಕರೋನದಿಂದ ಕೆಲವರು ಸತ್ತರೆ,ಇನ್ನು ಕೆಲವರು ಮಾನಸಿಕವಾಗಿ ಕುಗ್ಗಿ ಸಾಯುತ್ತಿದ್ದಾರೆ. ಕರೋನ ಇನ್ನು ಹೀಗೆ ಮುಂದೊರೆದರೆ ಮಾನಸಿಕವಾಗಿ ಸಾಯುವರ ಸಂಖ್ಯೆ ಹೆಚ್ಚಾಗಬಹುದು. ಭವಿಷ್ಯದ ಕನಸ್ಸನ್ನು ಬಿಟ್ಟು ವರ್ತಮಾನದಲ್ಲಿ ಹೇಗೆ ಬದುಕಬೇಕು ಎನ್ನುವ ಚಿಂತೆ ಹೆಚ್ಚಾಗಿದೆ.
ಈ ಕಷ್ಟದ ಪರಿಸ್ಥಿಯಲ್ಲಿ ಕೆಲವರ ಉಡಾಫೆಯಿಂದ ಎಲ್ಲೋ ಮನೆಯಲ್ಲಿ ಕೂತ ಗರ್ಭಿಣಿಗೆ, ವಯಸ್ಸಾದ ಅಪ್ಪ-ಅಮ್ಮನಿಗೆ, ಏನು ಅರಿಯದ ಮಕ್ಕಳಿಗೆ ಕರೋನ ಬಂದು ಅಂಟಿಕೊಳ್ಳುತ್ತಿದೆಯಲ್ಲಅದರ ಬಗ್ಗೆ ಬೇಸರವಾಗುತ್ತದೆ. ಸಣ್ಣ ಹುಡುಗ ತನ್ನ ಬಟ್ಟೆ ತುಂಬಿದ ಕೈಚೀಲವನ್ನು ಹಿಡಿದು ಆಂಬುಲೆನ್ಸ್ ಹತ್ತುವಾಗ, ವಯಸ್ಸಾದ ಹಣ್ಣು ಹಣ್ಣಾದ ಅಜ್ಜಿ ಆಂಬುಲೆನ್ಸ್ ನತ್ತ ನಡೆಯುವಾಗ, ಹೆರಿಗೆಯಾದ ಕೆಲವೇ ಕ್ಷಣದಲ್ಲಿ ಕೊರೊನ ಹಟ್ಟಹಾಸಕ್ಕೆ ತನ್ನ ಎಳೆ ಮಗುವಿನಿಂದ ದೂರವಾಗುವ ದೃಶ್ಯವನ್ನು ನೋಡುವಾಗ ಕರಳು ಕಿತ್ತು ಬರುತ್ತದೆ. ಅದರ ನಡುವೆ ಆಸ್ಪತ್ರೆಗಳ ಅವ್ಯವಸ್ಥೆ ಕರೋನಕ್ಕಿಂತ ಭಯಾನಕ ದೃಶ್ಯಗಳು ಕಣ್ಣ ಮುಂದೆ ಕಟ್ಟುತ್ತಿವೆ.
ಈ ಪರಿಸ್ಥಿತಿಯಲ್ಲಿ ಯಾರು ಉಡಾಫೆ ಮಾಡುವುದು ಸರಿಯಲ್ಲ. ಒಬ್ಬರ ಉಡಾಫೆ ಇನ್ನೊಬ್ಬರು ಜೀವದ ಬೆಲೆ ಕಟ್ಟಬೇಕಾಗುತ್ತದೆ ಎನ್ನುವುದೇ ನೋವು. ಉಡಾಫೆ ಇರುವವರೆಗೂ ಲಾಕ್ ಡೌನ್ ಮಾಡಿದರು ಅಷ್ಟೇ, ಬಿಟ್ಟರು ಅಷ್ಟೇ. ಲಾಕ್ ಡೌನ್ ಎನ್ನುವುದು ಕ್ಷಣಿಕ ಪರಿಹಾರವಷ್ಟೇ. ಏಕೆಂದರೆ ಲಾಕ್ ಡೌನ್ ಮುಗಿದ ಮೇಲೆ ಅದೇ ಗುಂಪು ಓಡಾಟ, ಮಾಸ್ಕ ಇಲ್ಲದೆ ತಿರುಗಾಟ. ಹೀಗಿರುವಾಗ ಈ ಕರೋನವನ್ನು ಬಗ್ಗಿ ಬಡಿಯಲು ಸಾಧ್ಯವೇ ?.
ಮುಂದೊಂದು ದಿನ ಕರೋನ ಪಾಸಿಟಿವ್ ಬಂದವರನ್ನು ಬಿಟ್ಟು, ಕರೋನ ನೆಗೆಟಿವ್ ಬಂದವರನ್ನು ಹುಡುಕಿ ಕ್ವಾರೆಂಟೇನ್ ಮಾಡುವ ಪರಿಸ್ಥಿತಿ ಬಂದರು ಬರಬಹುದು. ಪ್ರತಿಯೊಬ್ಬ ನಾಗರೀಕ ತನ್ನ ಮನೆಯಲ್ಲಿನ ಹಿರಿ ಜೀವ, ಮಕ್ಕಳು, ಕುಟುಂಬವನ್ನು ಒಮ್ಮೆ ನೆನೆದು ಮುಂಜಾಗ್ರತೆಯನ್ನು ತಗೆದುಕೊಳ್ಳಬೇಕು. ಆಗ ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು. ನಮ್ಮ ಸುರಕ್ಷತೆ ನಮ್ಮ ಅಂಗೈಯಲ್ಲಿದೆಯೇ ಹೊರತು ಡಾಕ್ಟರ್, ಪೊಲೀಸ್ ರ ಮೇಲಿಲ್ಲ.
ಕೊನೆಯದಾಗಿ ಕೊರೊನ ಪಾಸಿಟಿವ್ ಬಂದವರು ನಿಮ್ಮ ಮನೆಯ ಸದಸ್ಯೆನಂತೆಯೇ ನೋಡಿ. ಆಗ ಅವರ ಮೇಲೆ ಭೇದ-ಭಾವ ಮೂಡುವುದಿಲ್ಲ. ಮೊಬೈಲ್ ನಲ್ಲಿ ಕ್ಯಾಮೆರ ಇದೆ ಎನ್ನುವ ಕಾರಣಕ್ಕೆ ಕೊರೊನ ಪಾಸಿಟಿವ್ ಬಂದವರ ಫೋಟೋ ಕ್ಲಿಕ್ಕಿಸಿ, ಜಾಲತಾಣದಲ್ಲಿ ಹರಿ ಬಿಡಬೇಡಿ.
ಕರೋನ ರೋಗಿ ಎಂದಾಗ ಅವರಲ್ಲಿ ಸಾಕಷ್ಟು ಭಯ, ನೋವು ಆವರಿಸಿರುತ್ತದೆ. ತಮ್ಮವರನ್ನು ಬಿಟ್ಟು ಹೊರಟಾಗ ಬದುಕಿ ಬರುತ್ತೇನೋ ಇಲ್ಲವೋ ಎನ್ನುವ ಭಯಕ್ಕೆ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ತಮ್ಮವರನ್ನು ಕಳೆದುಕೊಳ್ಳುವ ಆತಂಕ ಅವರ ಕುಟುಂಬಕ್ಕೆ ಇರುತ್ತದೆ. ಆ ಸಂದರ್ಭದಲ್ಲಿ ಮೊಬೈಲ್ ಹಿಡಿದು ಅವರ ಮುಂದೆ ನಿಲ್ಲುವುದು ಸರಿಯಲ್ಲ. ಮುಂದೊಂದು ದಿನ ನಿಮ್ಮ ಫೋಟೋವನ್ನು ಇನ್ನೊಬ್ಬ ತಗೆಯುವ ಸಾಧ್ಯತೆಯಿರುತ್ತೆ ಎನ್ನುವುದು ತಲೆಯಲ್ಲಿ ಇರಲಿ. ಕೊರೊನ ಪಾಸಿಟಿವ್ ಬಂದವರ ಗೌಪ್ಯತೆ ಕಾಪಾಡಿ. ಅವರ ನೋವಿನಲ್ಲಿ ಸಾಧ್ಯವಾದರೆ ದೇವರಲ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ. ಅದನ್ನು ಬಿಟ್ಟು ನೋವಿನಲ್ಲಿಇನ್ನಷ್ಟು ತುಪ್ಪ ಸುರಿಯುವ ಕೆಲಸ ಮಾಡುವುದು ಬೇಡ. ಮತ್ತಷ್ಟು ಪಾಪ ಹೆಚ್ಚಿಸಿಕೊಳ್ಳಬೇಡಿ.
- ಶಾಲಿನಿ ಹೂಲಿ ಪ್ರದೀಪ್