‘ಅಡಿಗೆ ಮನೆಯಲಿ ಕಲ್ಲುಸಕ್ಕರೆ ಹಾಲನುಕ್ಕಿಸಿ, ದೇವರಮನೆಯಲಿ ದೀಪ ಬೆಳಗಿಸಿದವಳು’….ಮುಂದೆ ಓದಿ ಕವಿ ಬೆಂಶ್ರೀ ರವೀಂದ್ರ ಅವರ ಸುಂದರ ಕವನ…
ಮುಗಳು ನಗೆಯಲಿ ಮಂದಾರ ಚೆಲ್ಲಿದವಳು
ನಭದ ತಾರೆಗಳನಂಗಳದಿ ತೂಗಿಬಿಟ್ಟವಳು
ಮೆಲುನುಡಿಯಹಾಸಿನಲಿ ಹಸಿರಾದವಳು
ಹುಡುಗಾಟದ ಗಜ್ಜೆ ಘಲ್ ಎನಿಸಿದವಳು
ಬಣ್ಣಬಣ್ಣದ ರಂಗೋಲಿ ಹೊಸಿಲಲಿ ಬಿಡಿಸಿ
ಹೆಬ್ಬಾಗಿಲಿಗೆ ಮಾವಿನ ತೋರಣವ ಮುಡಿಸಿ
ಅಡಿಗೆಮನೆಯಲಿ ಕಲ್ಲುಸಕ್ಕರೆ ಹಾಲನುಕ್ಕಿಸಿ
ದೇವರಮನೆಯಲಿ ದೀಪ ಬೆಳಗಿಸಿದವಳು
ಒಡನಾಡಿ ಒಡಗೂಡಿ ನಡೆ ತಂಪು ನೆರಳಲಿ ಚಕ್ಕಡಿಯಗಾಲಿ ಉರುಳಲಿ ಹುರುಪಿನಲಿ
ಸ್ವರ್ಗಕ್ಕೆ ಕಿಚ್ಚುಹಚ್ಚುವ ಸುಖವಿರಲಿ ಸಖಿಯೆ
ಈ ಪರಿಯ ಮೋಹವೆಂದಣಕಿಪುದು ಸರಿಯೆ
ಹೆರವರು ಬಗೆಬಗೆಯಲಿ ಹರಿದು ತಿನ್ನಲಿ
ಹರಿವನೀರಿಗೆ ನದಿಯಪಾತ್ರವಲ್ಲವೆ ಅಂಕೆ
- ಬೆಂಶ್ರೀ ರವೀಂದ್ರ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು
