ಮನುಷ್ಯ ಒಂಟಿಯಾಗಿರಲು ಎಷ್ಟೇ ಬಯಸಿದರು ಅದು ಸಾಧ್ಯವಾಗುವುದಿಲ್ಲ. ಅವನಲ್ಲಿನ ಭಾವನೆಗಳು ಹೇಗೆ ಕಾಡುತ್ತವೆ ಎನ್ನುವ ಸುಂದರ ಕವನವನ್ನು ಕವಿ ಮೇಗರವಳ್ಳಿ ರಮೇಶ್ ಅವರು ಓದುಗರಿಗೆ ನೀಡಿದ್ದಾರೆ.
ನಾನು ಒಂಟಿಯಾಗಿರ ಬೇಕೆಂದು ಬಯಸಿದರೂ
ಒಂಟಿಯಾಗಿರಲಾರೆ!
ತೊರೆಯ ಬಹುದು
ಬಂಧು ಬಾಂಧವರನ್ನು, ಸ್ನೇಹಿತರನ್ನು, ಸಂಸಾರವನ್ನು
ಜಗದ ಜಂಜಡಗಳನ್ನೆಲ್ಲ ತೊರೆದು
ಅಲಖ್ ನಿರಂಜನ್
ತೆರಳ ಬಹುದು ಹಿಮಾಲಯಕ್ಕೆ
ಸಲ್ಲ ಬಹುದು ಧ್ಯಾನಕ್ಕೆ!
ಆದರೆ,
ನಾನೆಲ್ಲಿಗೇ ಹೊದರೂ
ನನ್ನ ಬೆಂಬತ್ತಿ ಬರುತ್ತವೆ ನನ್ನೊಳಗಿರುವ
ಭಾವಗಳು, ಪದಗಳು, ಅಕ್ಷರಗಳು
ಎಲ್ಲಕ್ಕಿಂತ ಮಿಗಿಲಾಗಿ ವರ್ಣಮಯ
ಅನುಭವಗಳು, ಅನುಭೂತಿಗಳು.
ಮತ್ತಿವೆಲ್ಲವನ್ನೂ ಒಳಗೊಳ್ಳುವ ಕವಿತೆಗಳು.
ಇಷ್ಟೆಲ್ಲ ಒಡಲೊಳಗಿಟ್ಟು ಕೊಂಡಿರುವ ನಾನು
ಹೋಗಲೇ ಬೇಕಲ್ಲವೇ ಮತ್ತೆ
ಸ್ಪಂದಿಸುವ ಹೃದಯಗಳೆಡೆಗೆ!
ತಟ್ಟಲೇ ಬೇಕಲ್ಲವೇ ಮತ್ತೆ
ಆ ಹೃದಯಗಳನ್ನು
ತುಂಬಿ ಭಾವಗಳನ್ನು, ಪದಗಳನ್ನು ವರ್ಣಮಯ ಅನುಭವಗಳನ್ನು
ಕವಿತೆಗಳೊಳಗೆ!
ಹೇಗೆ ಸಾಧ್ಯ ಹೇಳಿ
ನಾ ಒಂಟಿಯಾಗಿರಲು?
- ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)
