ಮಲಯಾಳಂ ಸಿನಿಮಾಗಳು ಅವುಗಳ ಕಂಟೆಂಟ್ ನಿಂದಲೇ ಇಷ್ಟವಾಗುತ್ತವೆ. ʼನರಿವೇಟ್ಟಾʼ ಸಿನಿಮಾ ಕುರಿತು ರಂಗಚಿಂತಕರು,ರಂಗ ನಿರ್ದೇಶಕರಾದ ಕಿರಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ವೈವಿಧ್ಯಮಯ ಕಂಟೆಂಟ್ ನಿಂದ ಅವು ಹಲವು ಬಾರಿ ಚಕಿತಗೊಳಿಸಿದ್ದಿದೆ. ಅವುಗಳಾಚೆಗೂ ಬಂದು, ʼನರಿವೇಟ್ಟಾʼ ತನ್ನ ದಿಟ್ಟತನದಿಂದ ಇಷ್ಟವಾಗುತ್ತದೆ.ಇದು ಇಂಥ ವಿಷಯವನ್ನೆತ್ತಿಕೊಂಡು ಸಿನಿಮಾ ಮಾಡುವ ದಿಟ್ಟತನ.
ಎರಡು ದಶಕಗಳ ಹಿಂದಿನ ʼಮುತ್ತಂಗಾʼ ಹೋರಾಟವನ್ನು ಆಧರಿಸಿದ ಚಿತ್ರ ಇದು. ವಯನಾಡ್ ನ ಈ ಭಾಗದ ಆದಿವಾಸಿಗಳ ಭೂ ಹೋರಾಟದ ಹಿನ್ನೆಲೆಯದ್ದು. ಮಾನವೀಯತೆಯನ್ನು ಮರೆತ ಅಧಿಕಾರಶಾಹಿಯ ದರ್ಪದ್ದು. ಸಮಾಜೋ ರಾಜಕೀಯ ವಸ್ತುವಿನದು. ತಮ್ಮ ನೆಲಕ್ಕಾಗಿ ಜೀವವನ್ನೂ ಪಣಕ್ಕಿಟ್ಟು ಹೋರಾಡಿದ ಕಾಡಿನ ಜನಗಳದ್ದು. ಇಂಥ ಹೋರಾಟವನ್ನು ಹತ್ತಿಕ್ಕಲು ಪೋಲೀಸರು, ರಾಜಕಾರಣಿಗಳು ಮಾಡಿದ ಸಂಚು, ತೋರಿಸಿದ ಕ್ರೌರ್ಯ, ಸಾವು ನೋವುಗಳ ಕುರಿತು ಚಿತ್ರ ದಿಟ್ಟತನದಿಂದ ಹೇಳುತ್ತ ಹೋಗುತ್ತದೆ.
ವರ್ಗೀಸ್ ಎಂಬ ಬುದ್ಧಿವಂತ ಯುವಕ ದೊಡ್ಡ ಉದ್ಯೋಗದ ಕಡೆ ಮುಖಮಾಡಿಕೊಂಡವ. ಚಿಕ್ಕ ಪುಟ್ಟ ಉದ್ಯೋಗಗಳನ್ನು ನಿಕೃಷ್ಟ ಎಂದು ತಿರಸ್ಕರಿಸುತ್ತಿದ್ದವ. ಕೌಟುಂಬಿಕ ಕಾರಣಗಳಿಗಾಗಿ ಆತ ಅನಿವಾರ್ಯವಾಗಿ ಸಿ,ಅರ್.ಪಿ.ಎಫ್ ನ ಪೋಲೀಸ್ ಆಗಬೇಕಾಗಿ ಬರುತ್ತದೆ. ಬಿಸಿ ರಕ್ತದ, ತನ್ನ ಕೆಲಸದ ಬಗ್ಗೆ ಒಂಥರಾ ತಿರಸ್ಕಾರ ಬೆಳೆಸಿಕೊಂಡ ಆತ ಸಾರ್ವಜನಿಕ ವ್ಯಕ್ತಿಯ ಮೇಲೆ ನಡೆಸಿದ ಹಲ್ಲೆಯ ಕಾರಣಕ್ಕಾಗಿ ವಯನಾಡ್ ನ ಹೋರಾಟವನ್ನಡಗಿಸಲು ಕಳಿಸಿದ್ದ ಪೋಲೀಸ್ ತುಕಡಿಗೆ ಪನಿಷ್ಮೆಂಟ್ ಟ್ರಾನ್ಸಫರ್ ಆಗಬೇಕಾಗುತ್ತದೆ. ಆತನಿಗೋ ಇತ್ತ ಮನೆಯ ಸೆಳೆತ, ಅತ್ತ ಕಾಡ ನಡುವಿನ ಕಷ್ಟ. ಇಂಥ ಸನ್ನಿವೇಶದಲ್ಲಿ ಎಂದೂ ಮುಗಿಯದ ಆದಿವಾಸಿಗಳ ಹೋರಾಟವನ್ನ ಅಡಗಿಸಲು ಪೋಲೀಸರು ನಕ್ಸಲ್ ಹೊರಾಟದೊಂದಿಗೆ ಈ ಹೋರಾಟವನ್ನು ತಳಕು ಹಾಕತೊಡಗುತ್ತಾರೆ. ಈ ಪ್ರಕ್ರಿಯೆಯಲ್ಲಿ ವರ್ಗೀಸ್ ನ ಗೆಳೆಯ ಸಾವಿಗೀಡಾಗುತ್ತಾನೆ.ಈಗ ವರ್ಗೀಸ್ ನಿಧಾನಕ್ಕೆ ಪೋಲೀಸ್ ರ ಸಂಚಿನ ವಾಸನೆ ಹಿಡಿಯಹತ್ತುತ್ತಾನೆ. ಮುಂದೆ ಸಿನಿಮಾ ಅಚ್ಚರಿಯ ತಿರುವುಗಳನ್ನು ಪಡೆಯುತ್ತ ಸಾಗುತ್ತದೆ.
ಮೊದಲ ಕೆಲವು ನಿಮಿಷಗಳ ಕಾಲ ಲಾಂಚ್ ಆಗಲು ತುಂಬ ತಿಣುಕಾಡುವ ಸಿನೆಮಾ ಎರಡನೆಯ ಅರ್ಧದಲ್ಲಿ ಚುರುಕಾಗುತ್ತದೆ.ಅದರೆ ಕೊನೆ ಕೊನೆಯಲ್ಲಿ ಗಡಿಬಿಡಿ ಹೆಚಾಯಿತೇನೋ ಎನಿಸುತ್ತದೆ. ಆದರೆ ಚಿತ್ರದುದ್ದಕ್ಕೂನಿರ್ದೇಶಕ ಅನುರಾಜ್ ಮನೋಹರ್ ಪ್ರತಿ ಹಂತದ ವಿವರಗಳನ್ನೂ ಸೂಕ್ಷ್ಮವಾಗಿ ಕಟ್ಟಿಕೊಡುತ್ತ ನೇರವಾಗಿ ಕಥೆ ಹೆಳುತ್ತ ಹೋಗುತ್ತಾರೆ.
ಅಭಿನಯದಲ್ಲಂತೂ ಟೋವಿನೋ ಥಾಮಸ್ ಬೆರಗುಗೊಳಿಸುತ್ತಾರೆ. ಕಥೆಯ ಮೊದಲ ಭಾಗದಿಂದ ಎರಡನೆಯ ಭಾಗದಲ್ಲಿ ಸಂಫೂರ್ಣವಾಗಿ ಬದಲಾಗುವ ಅವರ ಅಭಿನಯದ ವೈರುಧ್ಯ ಅದ್ಭುತವಾದದ್ದು. ಆರ್ಯಾ ಸಲೀಂ ಆದಿವಾಸಿ ಹೋರಾಟಗಾರ್ತಿಯಾಗಿ ಗಮನಾರ್ಹವಾದ ಆಭಿನಯ ನೀಡಿದ್ದಾರೆ. ಸ್ವಲ್ಪ ಹಿಂಸೆ ಜಾಸ್ತಿಯಿದೆ. ಸಹಿಸಿಕೊಳ್ಳುವದಾದರೆ ತಪ್ಪದೇ ನೋಡಿ.
ಸಿನಿಮ SONILIV ನಲ್ಲಿದೆ.
- ಕಿರಣ ಭಟ್ – ಹೊನ್ನಾವರ
