ಡಾ.ಗಜಾನನ ಶರ್ಮಾ ಅವರ ಪುನರ್ವಸು ಕಾದಂಬರಿ ಕುರಿತು ರತ್ನಾಕರ ಗಡಿಗೇಶ್ವರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ …
ಪುಸ್ತಕ: ಪುನರ್ವಸು
ಲೇಖಕರು : ಡಾ.ಗಜಾನನ ಶರ್ಮಾ
ಪ್ರಕಾರ : ಕಾದಂಬರಿ
ಪ್ರಕಾಶಕರು : ಅಂಕಿತ ಪುಸ್ತಕ
ಪುಟ : 544
ಬೆಲೆ : 450.00
ಪುಸ್ತಕದ ಪುಟ ಪುಟವೂ ಕಣ್ಣಂಚಲ್ಲಿ ನೀರು ಜಿನುಗಿಸಬಲ್ಲದು ಎಂಬುದಕ್ಕೆ ಶ್ರೇಷ್ಠ ಉದಾಹರಣೆ ಪುನರ್ವಸು ಕಾದಂಬರಿ. ತುಂಬಾ ಅಸ್ಥೆಯಿಂದ ಹುಡುಕಿ ತರಿಸಿ ಓದಲೇ ಬೇಕು ಹಂಬಲದಿಂದ ಓದಿದ ಪುಸ್ತಕ. 544 ಪುಟಗಳ ಪುಸ್ತಕ ಒಮ್ಮೆ ಮಲೆನಾಡನ್ನು ದರ್ಶನ ಮಾಡಿಸಿ ಬಿಟ್ಟಿತ್ತು.
‘ಪ್ರಭುತ್ವದ ಎದುರು ಪ್ರಜೆಗಳ ಬದುಕಿಗೆ ಬೆಲೆ ಎಲ್ಲಿ.’ ಇಡೀ ‘ಭಾರತಕ್ಕೆ ಮಲೆನಾಡು ಎಂಬುದು ದಿನಪತ್ರಿಕೆಯ ತುಣುಕು’ , ‘ಜಗತ್ತು ಬೆಳಗುವ ದೀಪ ಭತ್ತಿಯನ್ನು ಸುಟ್ಟಿರುತ್ತದೆ ‘ ಎನ್ನುವ ಮಾತುಗಳು ಎದೆಯೊಳಗೆ ಸೀದಾ ಸಾದಾ ಇಳಿದು ಬಿಡುತ್ತವೆ.

ಸದಾ ಜೋಗವೆಂದರೆ ಸ್ವರ್ಗ ಎನ್ನುವುದನ್ನೇ ಓದಿದ ನಮೆಗೆಲ್ಲ, ಸ್ವರ್ಗದ ಹಿಂದೆ ನರಕ ಕಂಡವರ ಬದುಕಿನ ಮಗ್ಗುಲುಗಳು ಅನಾವರಣ ಗೊಳ್ಳುತ್ತಾ ಸಾಗುತ್ತದೆ. ಭಾರತಕ್ಕೆ ಬೆಳಕು ನೀಡಲು ಹೊರಟ ಶರಾವತಿ ನದಿ, ತನ್ನೊಡಲ ಮಕ್ಕಳನ್ನು ನದಿಯೊಳಗೆ ಇಳಿಸಿ ಬಿಟ್ಟಿದ್ದು ಸಂಕಟ ಪಡಿಸಿ ಬಿಡುತ್ತದೆ.
ಪುನರ್ವಸು ಕಾದಂಬರಿಯ ನಿಜ ಜೀವನದ ಕಥಾನಕವ ಗೊತ್ತಿಲ್ಲ, ಆದರೆ ಮಳೆ ಸುರಿದ ಮೇಲೆ ಬೀಳುವ ಹನಿಯಂತೆ ,ಕಣ್ಣಿನಿಂದ ಕಣ್ಣೀರು ತೊಟ್ಟಿಕಿಸುತ್ತದೆ. ಲೇಖಕರು ನೆಮ್ಮದಿಯನ್ನು ಅರಸುವ ಪ್ರಕ್ರಿಯೆಗೆ ಕಾದಂಬರಿಯನ್ನು ಒಡ್ಡಿದ್ದಾರೆ. ಯಾರ್ಯಾರ ನೆಮ್ಮದಿ ಎಲ್ಲಿದೆ ಎನ್ನುವುದಕ್ಕೆ ಉತ್ತರ ಕೂಡ ಕೊಟ್ಟಿದ್ದಾರೆ.
ಅಭಿವೃದ್ದಿಯ ಅತ್ಯಾಚಾರದ ಮಗ್ಗುಲುಗಳು ಕಾಲಿಗೆ ಚುಚ್ಚಿದ ಕಾರೆ ಮರದ ಮುಳ್ಳಿನಂತೆ ಆಳಕ್ಕೆ ಇಳಿಸುತ್ತದೆ. ಸುರಿಯದ ನೆತ್ತರು. ಅಸಾಧ್ಯ ನೋವು ಎರಡು ಸದೃಶ್ಯವಾಗುತ್ತದೆ.
ದತ್ತಪ್ಪ ಹೆಗ್ಗಡೆ, ತುಂಗಕ್ಕ, ದೋಣಿ ಗಣಪ,ಮುರಾರಿ ಭಟ್ಟ, ಭವಾನಿ, ಗಣೇಶ್, ಕೃಷ್ಣರಾವ್, ವಸುಧ, ಎಲ್ಲರ ಪಾತ್ರವೂ ಒಂದೊಂದು ಬಗೆಯ ಬದುಕಿನ ಚಿತ್ರಣವನ್ನು ದಾಖಲಿಸುತ್ತಾ, ಆಯಾ ಕಾಲದ ಜೀವನ ಶೈಲಿಯ ಅನಾವರಣ ಮಾಡಿಸುತ್ತದೆ.

ತುಂಗಕ್ಕನ ಬಾಯಿ ಬಾರದ ಕಿವಿ ಕೇಳದ ಮಗಳು ಶರಾವತಿ, ಶರಾವತಿಯ ಮೇಲಾದ ಅತ್ಯಾಚಾರ. ಗರ್ಭಪಾತದೊಂದಿಗೆ ಅಂತ್ಯ ಆಗುವ ಕಾದಂಬರಿ,,, ಇಂದಿಗೂ ಶರಾವತಿ ಹಿನ್ನೀರಿನಲ್ಲಿ ಮುಳುಗಿದ ಬದುಕು ಭರವಸೆಗಳ ಉಪಮೆ ಕೂಡ. ಅಭಿವೃದ್ದಿ ನೆಮ್ಮದಿ ಎರಡು ಸ್ಥರದಲ್ಲಿ ನಿಂತು ಕಾದಂಬರಿ ವಾದವನ್ನು ಸಮರ್ಥವಾಗಿ ಮಂಡಿಸುತ್ತದೆ. ಕೊನೆಗೆ ಉತ್ತರ ಶೂನ್ಯ,,, ತುಂಗಕ್ಕನ ಸುಟ್ಟ ಚಿತೆಯಂತೆ. ಅಭಿವೃದ್ದಿಯ ಫಲ ಉಂಡವರು ಯಾರೋ,ಕಣ್ಣೀರು ಹರಿಸಿದವರು ಯಾರೋ. ಇಂದಿಗೂ ಶರಾವತಿ ಹಿನ್ನೀರಿನ ಪರಿಹಾರಕ್ಕಾಗಿ ,ಮುಳುಗಿದ ಕಾಡು ಮರದ,ಮುರಿಯದ ಬೇರಿನಂತೆ ಜೀವಂತಿಕೆ ಪಡೆದುಕೊಂಡಿದೆ.
ಒಮ್ಮೆ ಅಭಿವೃದ್ಧಿಗೆ ಮೈ ಚಾಚಿಕೊಂಡ ಮೇಲೆ, ಏಳುವ ಕಿಚ್ಚಿನ ಜ್ವಾಲೆ ನಿಧಾನಕ್ಕೆ ಒಡಲನ್ನು ಸುಡುತ್ತ ಸಾಗುತ್ತದೆ. ಒಮ್ಮೆ ಮತ್ತೊಮ್ಮೆ ಓದಲೇ ಬೇಕಾದ ಪುಸ್ತಕ ಪುನರ್ವಸು. ನಾನಂತೂ ಓದಿ ಮುಗಿಸಿದ ನಂತರ, ಎದೆಯೊಳಗೆ ನೆನಪಿನ ಜಿಗಣೆ ಬಿಟ್ಟುಕೊಂಡು ನೋವು ಅನುಭವಿಸಿದ್ದೇನೆ.
ಆಳುವವರು ಯಾರು ಇಂತಹವನು ಓದುವುದೇ ಇಲ್ಲಾ, ಓದಿದರೆ ಮಲೆನಾಡಿನ ಬಗ್ಗೆ ಇಂತಹ ನಿರ್ಲಕ್ಷ್ಯ ಧೋರಣೆ ತಳೆಯುವುದು ಇಲ್ಲಾ. ಒಮ್ಮೆ ಓದಿ.
- ರತ್ನಾಕರ ಗಡಿಗೇಶ್ವರ
