ಬಿಂದು ಹೆಗಡೆ ಅವರ ‘ಸಿಂಧುವಿನೊಳಗಿನ ಬಿಂದು’ ಕಥಾಸಂಕಲನ ಕುರಿತು ಕವಯತ್ರಿ ಶೋಭಾ ನಾರಾಯಣ ಹೆಗಡೆ ಅವರು ಬರೆದ ಪುಸ್ತಕ ಪರಿಚಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪುಸ್ತಕ : ಸಿಂಧುವಿನೊಳಗಿನ ಬಿಂದು
ಲೇಖಕರು: ಬಿಂದು ಹೆಗಡೆ
ಪ್ರಕಾರ : ಕಥಾಸಂಕಲನ
ಕಥಾಸಂಕಲನ ವಿದ್ಯಾಧರ ಕನ್ನಡ ಪ್ರತಿಷ್ಠಾನ ಮುಂಬಯಿ ಧಾರವಾಡ ಆಯೋಜಿತ ಕಥಾಸಂಕಲನ 2022ರ ಸ್ಫರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಕೃತಿ. ಈಗಾಗಲೇ ಗೊತ್ತಾಗಿರಬೇಕು ಅಲ್ವಾ? ಯಾರದಿರಬಹುದು? ಎಂದು..ಸೌಮ್ಯತೆಯ ಒಡತಿ, ನಿಶ್ಕಲ್ಮಶ ಮನದ ಕೆಚ್ಚೆದೆಯ ಗೃಹಿಣಿ , ನನಗೆ ಆಪ್ತಳಾದ ಶ್ರೀಮತಿ ಬಿಂಧು ಹೆಗಡೆ ಅವರು ಬರೆದ ಚೊಚ್ಚಲ ಕೃತಿ.
ನಿಜಕ್ಕೂ ತುಂಬಾ ಸುಂದರ ಕೃತಿ.. ಚಂದದ ಹೆಸರಿನೊಂದಿಗೆ ಅಷ್ಟೇ ಅರ್ಥ ಪೂರ್ಣವಾದ ಮುಖಪುಟದೊಂದಿಗೆ ಗುರು ಸ್ಥಾನದಲ್ಲಿ ಇರುವ ಮೌನಿ ಅಪ್ಪ ಅವರ ಆಶೀರ್ವಾದದ ಸಹಯೋಗದಲ್ಲಿ ಸಿಂಧುವಿನೊಳಗಿನ ಬಿಂದು ಮುತ್ತಾಗಿ ಹೊಳೆದಿದೆ.
ಒಟ್ಟೂ ಹತ್ತು ಕಥೆಗಳನ್ನು ಒಳಗೊಂಡ ಈ ಕೃತಿ ಅದ್ಭುತವಾಗಿ ಸಮಾಜದ ವಾಸ್ತವ ಸತ್ಯಗಳನ್ನು ಅರುಹುತ್ತಾ,ಓದುಗರಿಗೂ ಅವರಿಗಾದ ಅನುಭವಾಮೃತವನ್ನು ನೆನಪಿಸುತ್ತಾ ,ಇನಿತೂ ಬೇಸರ ತರದಂತೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ..
“ಅಣ್ಣನೆಂಬ ಮಾಯೆ “ಮೊದಲ ಕಥೆ. ಭಾವುಕತೆಯ ಭಾವದಲ್ಲಿ ಮಿಂದೇಳಿಸುತ್ತದಲ್ಲದೇ ಭಾವುಕತೆಯ ಮನಗಳು ಜಾಗರೂಕತೆಯ ನಡೆಯಿಂದ ನಡೆಯಲು ಎಚ್ಚರಿಕೆ ನೀಡುವ ಅದ್ಭುತವಾದ ಸಂದೇಶವಿದೆ..
ಮೊದಲ ಕಥೆಯಿಂದ ಕೊನೆಯ ಕಥೆಯವರೆಗೂ ಬಹುತರದ ಬದುಕಿನ ಮಜಲನ್ನು ಕಥೆ ಬಿಚ್ಚಿಡುವ ಮೂಲಕ ಓ ಹೀಗೂ ಇರಬಹುದಾ ಜಗತ್ತು?ಎಂದು ಮನಸ್ಸು ಒಮ್ಮೆ ತಾರ್ಕಿಕ ಪಯಣದೆಡೆಗೆ ಓಡಬಲ್ಲುದು.
‘ಸಿಂಧುವಿನೊಳಗಿನ ಬಿಂದು’ ಕಥಾಸಂಕಲನ ಲೇಖಕಿ ಬಿಂದು ಹೆಗಡೆ
ಬಿಂದು ಎಂದರೆ ಒಂದು ಚುಕ್ಕಿ ಎನಿಸಿದರೂ..ಒಂದು ಸಾಲು ಪೂರ್ಣಗೊಳಿಸಲು ಆ ಬಿಂದು ಇರಲೇಬೇಕು. ಹಾಗೇ ನಮ್ಮ ಬಿಂಧು ಕೂಡ ಎಲ್ಲಾ ರಂಗಗಳಲ್ಲೂ ಸೈ..ಅಷ್ಟೇ ಉತ್ಸಾಹದಿಂದ ಕಲಿತು , ಭಾಗವಹಿಸುವ ಧೈರ್ಯಗಾತಿ..ಬರಹ ಕೂಡ ಅಷ್ಟೇ ಚಂದ..ಇವತ್ತು ನನ್ನ ಕೈ ಸೇರಿದ ಈ ಹೊತ್ತಿಗೆ ಕುತೂಹಲ ತಡೆಯಲಾರದೇ ಓದಿಸಿಕೊಂಡಿತು.
ಸಹಸ್ರಾರು ಓದುಗರ ಮಡಿಲಿಗೆ ಸೇರಲಿ ಈ ಕೃತಿ ಮತ್ತು ಇನ್ನೂ ಹತ್ತಾರು ಕೃತಿಗಳು ಹೊರ ಬರಲಿ ಎಂಬ ಮನದುಂಬಿದ ಹಾರೈಸುತ್ತೇನೆ, ಬಿಂದು ಅವರಿಗೆ ಶುಭವಾಗಲಿ. ಪುಸ್ತಕವನ್ನು ಕೊಂಡು ಓದಿ. ಕನ್ನಡದ ಇಂಪು ಮನಮನೆಗಳಲ್ಲಿ ಸದಾ ಪಸರಿಸುತಿರಲಿ…
- ಶೋಭಾ ನಾರಾಯಣ ಹೆಗಡೆ – ಕವಿಯತ್ರಿ, ಬೆಂಗಳೂರು