ಅಮರಗಿರಿ ಶ್ರೀ ಗುಡ್ಡದ ರಂಗನಾಥಸ್ವಾಮಿ ದೇವಸ್ಥಾನ ವಿಶೇಷತೆ ಬಗ್ಗೆ ಒಂದು ಲೇಖನ. ಇದು ಚಿಕ್ಕೋನಹಳ್ಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆಯಲ್ಲಿದೆ. ಮುಂದೆ ಓದಿ…
#ಅಮರಗಿರಿ ಶ್ರೀ ಗುಡ್ಡದ ರಂಗನಾಥಸ್ವಾಮಿ ದೇವಸ್ಥಾನ ಹನ್ನೆರಡನೆ ಶತಮಾನದಲ್ಲಿ ಸ್ಥಾಪನೆಯಾಗಿದ್ದು, ತಮಿಳುನಾಡಿನಿಂದ #ಶ್ರೀರಾಮಾನುಜಾಚಾರ್ಯರು ಉಚ್ಛಾಟನೆಕೊಂಡು ಮೇಲುಕೋಟೆಯನ್ನು ಮೂಲ ಸ್ಥಾನವಾಗಿಸಿಕೊಂಡರು. ಒಂದು ಸಾರಿ ಅವರು ತಮ್ಮ ಸಹಚರರೊಂದಿಗೆ ಸಂಚಾರ ಮಾಡುವಾಗ ಚನ್ನರಾಯ ಪಟ್ಟಣ ತಾಲ್ಲೂಕಿನ ಚಿಕ್ಕೋನಹಳ್ಳಿಯಲ್ಲಿ ತಂಗಿದ್ದರಂತೆ.
ಆ ರಾತ್ರಿ ರಾಮಾನುಜಾಚಾರ್ಯರು ಮಲಗಿದ್ದಾಗ ಅವರಿಗೆ ವಿಶೇಷವಾದ ಅನುಭವವಾಯಿತು.ಅದನ್ನು ಮರುದಿನ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಕರೆದು ಈ ಸ್ಥಳ ಬಹಳ ವಿಶೇಷವಾಗಿದೆ,ಇದು ಮುಂದೆ ಪ್ರಸಿದ್ಧವಾದ ವಿಷ್ಣು ಸ್ಥಳವಾಗುತ್ತದೆ. ನೀವೆಲ್ಲ ಸೇರಿ ಇಲ್ಲಿ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪ್ರತಿ ನಿತ್ಯ ಪೂಜೆ ಪುನಸ್ಕಾರ ಮತ್ತು ಆರಾಧನೆ ನಡೆಯುವಂತೆ ನೋಡಿ ಕೊಳ್ಳಬೇಕೆಂದು ಹೇಳುತ್ತಾರೆ. ಆಗ ಅವರ ಮಾತಿನಂತೆ ಹಳ್ಳಿಯ ಜನರೆಲ್ಲ ಸೇರಿ ಬಿಲ್ಲು ಬಾಣ ಹಿಡಿದಿರುವ ಮೂಲ ಶ್ರೀ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.
ಪರಕೀಯರಿಂದ ನಾಶವಾಗುತ್ತಿದ್ದ ದೇವಸ್ಥಾನಗಳನ್ನು ಉಳಿಸಲು ಗ್ರಾಮಸ್ಥರು ರಾಮನ ದೇವಸ್ಥಾನವನ್ನು ರಂಗನಾಥಸ್ವಾಮಿ ದೇವಸ್ಥಾನವೆಂದು ಹೇಳಿ ಕಾಪಾಡುತ್ತಿದ್ದರಂತೆ, ಕಾರಣ ರಂಗನಾಥಸ್ವಾಮಿಯ ಮೇಲಿದ್ದ ನಂಬಿಕೆ, ಭಕ್ತಿ ಪರಕೀಯರಿಗೆ ಹಾಗಿತ್ತಂತೆ. ಈ ರೀತಿಯಿಂದ ಗ್ರಾಮಸ್ಥರು ಎಷ್ಟೋ #ದೇವಸ್ಥಾನಗಳು ನಾಶವಾಗದಂತೆ ಉಳಿಸಿಕೊಂಡಿದ್ದಾರೆ ಎನ್ನುವ ಮಾತಿದೆ ಎಂದು ದೇವಸ್ಥಾನದ ಮುಖ್ಯಹಿರಿಯ ಅರ್ಚಕರಾದ ಪಾರ್ಥಸಾರಥಿಯವರು ಹೇಳುತ್ತಾರೆ.
2016ರ ಫೆಬ್ರವರಿಯಲ್ಲಿ 5 ದಿನ ವಿಶೇಷ ಪೂಜೆ ಮತ್ತು ಉತ್ಸವಗಳೊಂದಿಗೆ ಮಲಗಿರುವ ರಂಗನಾಥಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.
ರಾಮಾನುಜಾಚಾರ್ಯರು ಆ ಸ್ಥಳದಲ್ಲಿದ್ದಾಗ ತಲೆಗೆ ಇಟ್ಟುಕೊಂಡು ಮಲಗಿದ್ದ ಸಣ್ಣಕಲ್ಲು ಇಂದು ಸಾವಿರಾರು ಜನರ ಮನಸ್ಸಿನಲ್ಲಿರುವ ಗೊಂದಲಕ್ಕೆ ಉತ್ತರ ನೀಡುತ್ತಿದೆ. ಜನರು ಬೇಡಿಕೊಂಡ ಕೆಲಸವಾಗುವುದಾದರೆ ಜನರು ಆ ಕಲ್ಲಿನ ಮೇಲೆ ಕುಳಿತ ತಕ್ಷಣ ಕಲ್ಲು ಬಲಕ್ಕೆ ತಿರುಗುತ್ತದೆ ಇದು ನೋಡಲು ಬಹಳ ವಿಸ್ಮಯಕಾರಿಯಾಗಿದ್ದು, ನೋಡುವವರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಆ ಕ್ಷೇತ್ರವನ್ನು ‘#ದೊಣ್ಣಪ್ಪ‘ ಎಂಬ ದೇವರು ರಕ್ಷಕರಾಗಿ ಕಾಯುತ್ತಿದ್ದಾರೆ ಎಂದು ಅರ್ಚಕರಾದ ಪಾರ್ಥಸಾರಥಿಯವರು ತಿಳಿಸಿದ್ದಾರೆ.
ಒಂದು ಸಣ್ಣ ಗುಡಿಯು ಇಂದು ರಾಮಾನುಜಾಚಾರ್ಯರು ಹೇಳಿದಂತೆ ಇಂದು ಪ್ರಸಿದ್ಧವಾದ ರಂಗನಾಥಸ್ವಾಮಿ ದೇವಸ್ಥಾನವಾಗಿದ್ದು, ಪ್ರತಿ ಶನಿವಾರವೂ ದಾಸೋಹ ಕಾರ್ಯಕ್ರಮ ನಡೆಯುತ್ತದೆ. ಉತ್ಸವ ದೇವರು ಊರು ಒಳಗಿದ್ದು ರಾಮನವಮಿಯ ದಿನ ರಥೋತ್ಸವ ನಡೆಯುತ್ತದೆ. ಪಂಚರಾತ್ರಾಗಮದ ರೀತಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3ರವರೆಗೆ ತೆರೆದಿರುತ್ತದೆ. ಜನಜಂಗುಳಿ ಜಾಸ್ತಿ ಇದ್ದಲ್ಲಿ ಸಂಜೆ 5.30ರವರೆಗೂ ತೆರೆದಿರಲಾಗುತ್ತದೆ.
- ಕಾವ್ಯ ದೇವರಾಜ್ (ಕತೆಗಾರ್ತಿ, ಬರಹಗಾರರು), ಬೆಂಗಳೂರು