ನಿತ್ಯಪುಷ್ಪವನವಳು ಬಿಡಿಸಿ ದೇವರಿಗಾಗಿ ಮುಡಿಸುವಳು ಹೂಗಳಿಗು ಬಂತು ಜೀವ…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕವಿಭಾವದೆಡೆಯಿಂದ ಪುಟಿದೆದ್ದ ಪದಪುಂಜ
ಕಾವ್ಯವಾಗುತ ಮನವ ಸೆಳೆಯಿತಲ್ಲ
ಸವಿನಗುವ ಚೆಲ್ಲುತಲಿ ಮನದರಸಿ ಬರುವಾಗ
ಹೃದಯಾಳದೊಳಭಾವ ಚಿಮ್ಮಿತಲ್ಲ
ಹೊನ್ನಕಿರಣಗಳಿಳಿದು ಹೊಸ್ತಿಲನು ದಾಟಿರಲು
ನನ್ನವಳ ಪೂಜೆಯನು ಸವಿದ ರವಿಯು
ತನ್ನಿರುವ ಮರೆಯುತಲಿ ನಿಂತನಲ್ಲಿಯೆ ದಿನಪ
ಸ್ತಬ್ಧವಾಯಿತು ಕಾಲ ಕೆಲವು ಚಣವು
ನಿತ್ಯಪುಷ್ಪವನವಳು ಬಿಡಿಸಿ ದೇವರಿಗಾಗಿ
ಮುಡಿಸುವಳು ಹೂಗಳಿಗು ಬಂತು ಜೀವ
ಸತ್ಯವಂತರ ಮನೆಯ ಹೆಣ್ಣಾಗಿ ಬಂದಿಹಳು
ಕೊಟ್ಟ ಮನೆಯನು ಬೆಳಗಿ ಹೊಳೆಸೊ ಭಾವ
ಸಾಧಿಸುವ ಛಲದೊಳಗು ಬೆನ್ನೆಲುಬೆಯಾಗಿಹಳು
ಪಯಣದೊಳು ಹೆಗಲಾಗಿ ಬಂದ ವರವು
ಮೇದಿನಿಯ ರೂಪದಲಿ ಜೀವನಕೆ ಸಾರಥಿಯು
ಅವಳಿಂದ ಬಾಳೊಳಗೆ ಬಂತು ಬಲವು.
- ಚನ್ನಕೇಶವ ಜಿ ಲಾಳನಕಟ್ಟೆ
