ಬಿಳಿಗಿರಿರಂಗನ ಬೆಟ್ಟವು ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನಲ್ಲಿ ಇದ್ದು, ಯಳಂದೂರು ತಾಲೂಕು ಕೇಂದ್ರದಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಸುಮಾರು 43 ಕಿಲೋ ಮೀಟರ್ ದೂರದಲ್ಲಿದೆ. ದೇವರಾಜ ಚಾರ್ ಅವರ ಅನುಭವ ಕಥನವನ್ನು ತಪ್ಪದೆ ಮುಂದೆ ಓದಿ…
ದಿನಾಂಕ ಏಪ್ರಿಲ್ 12, 2026 ರಂದು ಮೈಸೂರಿನಿಂದ ಹೊರಟು ಟಿ. ನರಸೀಪುರ – ಯಳಂದೂರು ಮಾರ್ಗವಾಗಿ ಬಿಳಿಗಿರಿ ರಂಗನ ಬೆಟ್ಟ ತಲುಪಿದೆವು. ಒಟ್ಟು ದೂರ ಸುಮಾರು 84 ಕಿಲೋಮೀಟರ್. 2 ಗಂಟೆಯ ಪ್ರಯಾಣ. ಯಳಂದೂರಿನಿಂದ ಎಂಟು ಕಿಲೋಮೀಟರ್ ದೂರದಲ್ಲಿ ಫಾರೆಸ್ಟ್ ಗೇಟ್ ಇದೆ. ಈ ಫಾರೆಸ್ಟ್ ಗೇಟ್ ಅನ್ನು ದಾಟಿ ಮುಂದಕ್ಕೆ ಸಾಗಬೇಕಾಗುತ್ತದೆ. ಹಾಗೆ ಸಂಜೆ 6 ಗಂಟೆಯಿಂದ ಬೆಳಗಿನ ಆರು ಗಂಟೆಯವರೆಗೆ ಪ್ರಯಾಣಿಕರನ್ನು ಬಿಡುವುದಿಲ್ಲ. ಕಾರಣ ಬೆಟ್ಟದ ಹಾದಿ ಅಭಯಾರಣ್ಯವಾದ್ದರಿಂದ ಮತ್ತು ಪ್ರಾಣಿಗಳಿಗೆ ಅನಾನುಕೂಲವಾಗುತ್ತದೆ ಅಂತ.

ಯಳಂದೂರು ಸಮುದ್ರ ಮಟ್ಟದಿಂದ ಸುಮಾರು 555 ಮೀಟರ್ ಎತ್ತರದಲ್ಲಿದೆ. ಬೆಟ್ಟವು 1, 550 ಮೀಟರ್ ಎತ್ತರದಲ್ಲಿದೆ. ಸುಮಾರು ಒಂದು ಸಾವಿರ ಮೀಟರ್ ಎತ್ತರ ಹತ್ತಬೇಕು. ಯಳಂದೂರಿನಿಂದ ಬೆಟ್ಟವು ಸುಮಾರು 24 ಕಿಲೋಮೀಟರ್ ದೂರವಿದ್ದು, ಅದರಲ್ಲಿ ಎಂಟು ಕಿಲೋ ಮೀಟರ್ ಸಮ ತಟ್ಟಾದ ರಸ್ತೆಯಾಗಿದ್ದು, ಉಳಿದ 16 ಕಿಲೋಮೀಟರ್ ಗಳ ಘಟ್ಟ ಪ್ರದೇಶವಾಗಿರುತ್ತೆ. ಕೆಲವು ಕಡೆ ಕಡಿದಾದ ಮತ್ತು ತಿರುವುಗಳು ಕೂಡಿದಂತ ರಸ್ತೆ ಇದೆ.
ಕಾರಿನಲ್ಲಿ ಹೋಗುವವರು ನಿಧಾನವಾಗಿ ಸಾಗಬೇಕಾಗುತ್ತದೆ. 24 ಕಿಲೋಮೀಟರ್ ದೂರವನ್ನು ಸುಮಾರು 40 ನಿಮಿಷದಲ್ಲಿ ತಲುಪಬಹುದು. ರಸ್ತೆಯ ಪಕ್ಕದಲ್ಲಿ ಕೊಳವಿತ್ತು. ಅಲ್ಲಿ ಆನೆಗಳು ನೀರು ಕುಡಿದು ನಿಂತಿದ್ದವು. ಅವುಗಳ ದರ್ಶನವಾಯಿತು . ಹೋಗುವ ರಸ್ತೆಯಲ್ಲಿ ನವಿಲುಗಳು, ಜಿಂಕೆಗಳು ಸಹ ಸಿಕ್ಕಿದವು.
ಸಂಜೆ ಆರು ಮೂವತ್ತಕ್ಕೆ ಮೊದಲೇ ಗೊತ್ತು ಮಾಡಿದ್ದ ವಸತಿಗೃಹ ಗಿರಿದರ್ಶಿನಿ ಎಂಬ ಹೋಂಸ್ಟೆಗೆ ತಲುಪಿದೆವು. ಎರಡು ರೂಮ್ ಬುಕ್ ಮಾಡಿದ್ದೆವು . ತಲುಪಿದ ತಕ್ಷಣ ನಮಗೆ ಸ್ನಾಕ್ಸ್ ಮತ್ತು ಕಾಫಿ ಕೊಟ್ಟು ಬರಮಾಡಿಕೊಂಡರು.
ಅದೊಂದು ಕಾಫಿ ಪ್ಲಾಂಟೇಶನ್ ಆಗಿತ್ತು. ರಸ್ತೆಗೆ ಹೊಂದಿಕೊಂಡಂತೆ ಅತಿಥಿಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ನಾಲ್ಕು ರೂಮಿನ ಕೆಳ ಹಂತಸ್ತು ಮತ್ತು ನಾಲ್ಕು ರೂಮಿನ ಮೇಲ ಅಂತಸ್ತು, ಇರುವ ವಸತಿಗೃಹ ಆದಾಗಿತ್ತು. ರೂಮಿನ ಬಾಗಿಲುಗಳು ವಿವಿಧ ದಿಕ್ಕಿನಲ್ಲಿ ಇದ್ದವು. ಅಡುಗೆ ಕೋಣೆ ಮತ್ತು ಊಟದ ವ್ಯವಸ್ಥೆಗೆ ಕೆಳಗಡೆ ಇದೆ.
ಶ್ರೀಬಿಳಿಗಿರಿರಂಗನ ಬೆಟ್ಟ ಮತ್ತು ಶ್ರೀಮಲೈ ಮಹದೇಶ್ವರ ಬೆಟ್ಟ, ಉತ್ತರ- ದಕ್ಷಿಣ ಅಭಿಮುಖವಾಗಿ ಹಬ್ಬಿರುವ ಬೆಟ್ಟದ ಸಾಲಿನಲ್ಲಿ ಇದೆ. ಈ ಬೆಟ್ಟದಲ್ಲಿ ಸುಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ದೇವಾಲಯ ಇರುವುದು ವಿಶೇಷ. ದೇವಸ್ಥಾನದವರೆಗೆ ರಸ್ತೆ ಇದೆ. ಮೆಟ್ಟಿಲುಗಳು ಸಹ ಇವೆ.
ಶ್ರೀ ರಂಗನಾಥ ಸ್ವಾಮಿ ವಿಗ್ರಹವನ್ನು ಈ ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ಒಂದು ಖಾಲಿ ಬಂಡೆಯ ಅಂಚಿನ ಮೇಲೆ, ಅಭಯಾರಣ್ಯದ ಉತ್ತರದ ಭಾಗದ ತುದಿಯಲ್ಲಿ ನೆಲೆಗೊಂಡಿದೆ. ಶ್ರೀ ರಂಗನಾಥ ಸ್ವಾಮಿಯ ವಿಗ್ರಹವನ್ನು ನಿಂತ ಬಂಗಿಯಲ್ಲಿ ಸ್ಥಾಪಿಸಲಾಗಿದೆ.ಏಪ್ರಿಲ್ ತಿಂಗಳಲ್ಲಿ ರಥೋತ್ಸವ ಮತ್ತು ಜಾತ್ರೆ ಇರುತ್ತದೆ. ಅಡವಿಯ ಉತ್ಪನ್ನಗಳು ಇಲ್ಲಿ ಸಿಗುತ್ತವೆ. ಇಲ್ಲಿನ view ಪಾಯಿಂಟ್ ಗಳಿಂದ ಸುಂದರವಾದ ದೃಶ್ಯಗಳನ್ನು ನೋಡಬಹುದು. ಬೆಟ್ಟದಲ್ಲಿ ತೆಗೆದ ಫೋಟೋ ಮತ್ತು ವಿಡಿಯೋಗಳನ್ನು ಕೆಳಗಡೆ ಕೊಡಲಾಗಿದೆ.
- ದೇವರಾಜ ಚಾರ್ – ಮೈಸೂರು.
