ಕನ್ನಡದ ಭಾವಗೀತೆ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರು ‘ಸುಬ್ಭಾಭಟ್ಟರ ಮಗಳೇ’,‘ನಾನು ಚಿಕ್ಕವನಿದ್ದಾಗ ಅಪ್ಪಾ ಹೇಳುತ್ತಿದ್ದರು’, ‘ನೀ ನಿಂಬೆಯ ಗಿಡದಿಂದೊಳ್ಳೆಯ ಪಾಠವ ಕಲೀ ಮಗು’ ಅಂತಹ ಕವಿತೆಗಳು ಕೊಟ್ಟಂತಹ ಜನಪ್ರಿಯ ಕವಿ. ಇಂದು ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಹುಟ್ಟುಹಬ್ಬ, ಅವರಿಗೆ ಆಕೃತಿಕನ್ನಡದಿಂದ ಹುಟ್ಟುಹಬ್ಬದ ಶುಭಾಶಯಗಳು…
ನಂಬಲಿಕ್ಕಾಗಲ್ಲ ಬಿ ಆರ್ ಲಕ್ಷ್ಮಣರಾವ್ ಅವರಿಗೆ ಎಪ್ಪತ್ತೇಳು ವರ್ಷಗಳೇ, ಕವಿಗೆ ಮುಪ್ಪಿಲ್ಲ ಎನ್ನುವುದು ಇದಕ್ಕೇ ಇರಬೇಕು. ಎನ್ ಎಸ್ ಎಲ್ ಭಟ್ಟರು ಇತ್ತೀಚೆಗೆ ಅಗಲಿ ಹೋದರು. ಅವರ ಜೋಡಿ ಹೆಚ್ ಎಸ್ ವೆಂಕಟೇಶಮೂರ್ತಿ ಜತೆಜತೆಗೆ ಬಿಆರ್ ಎಲ್ಆರ್.
ಜಾಲಿಬಾರಿನಲ್ಲಿ ಅಶ್ವಥ್, ಶಿವಮೊಗ್ಗ ಸುಬ್ಬಣ್ಣ ಅವರೆಲ್ಲ ಬನಶಂಕರಿ ಕ್ಲಬ್ ಮಹಡಿಯಲ್ಲಿ ಟಿವಿ ಮುಂದಿನ ಟೇಬಲ್ ರಿಸರ್ವ್ ಮಾಡಿ ಕುಳಿತರೆಂದರೆ ಅವರವರ ಲೆಕ್ಕದ ಗುಂಡಿನೊಂದಿಗೆ ಧೂಮಲೀಲೆಯ ಸುರುಳಿಯಲ್ಲಿ ಕಾವ್ಯ ಕನ್ನಿಕೆಯ ಕನಸುವ ಕವಿಗೆಳೆಯರು ತಮ್ಮ ಕವಿತೆಗಳನ್ನು ವಿಮರ್ಶೆ ಮಾಡುತ್ತಾ ಹಾಡುತ್ತಾ ತಮ್ಮದೇ ಲೋಕ ಸೃಷ್ಟಿಸಿಕೊಂಡವರು.
ಬಹುತೇಕ ಇವರೆಲ್ಲ ಕ್ಯಾಸೆಟ್ ಕವಿಗಳೆಂದೇ ಪ್ರಸಿದ್ದಿ ಪಡೆದರಾದರೂ ಸುಗಮ ಸಂಗೀತವನ್ನು ಬೆಳೆಸಿದವರು.ಸ್ವತ: ಹಾಡುಗಾರರೂ ಆದ ಲಕ್ಷ್ಮಣರಾವ್ ಪ್ರತ್ಯೇಕ ಅಭಿಮಾನಿ ಸಂಘಗಳನ್ನೇ ಹೊಂದಿದ್ದಾರೆ.
ಸುಬ್ಬಾ ಭಟ್ಟರ ಮಗಳೇ ಎಲ್ಲಾ ನಿಂದೇ ತಗೊಳೇ, ಮನಸೇ ನನ್ನ ಮನಸೇ ಏನಾಗಿದೆ ನಿನಗೆ, ನಿನ್ನ ಕಹಿ ನೆನಪೇ ಜೇನಾಗಿದೆ ನನಗೆ, ಹೇಳಿ ಹೋಗು ಕಾರಣ ಹೋಗುವ ಮೊದಲು, ನನ್ನ ಬಾಳಿನಿಂದ ದೂರಾಗುವ ಮೊದಲು ಹೇಳಿ ಹೋಗು ಕಾರಣ, ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ, ಅಮ್ಮಾ ನಿನ್ನ ಎದೆಯಾಳದಲ್ಲಿ ಜೀವಕ್ಕೆ ಸಿಕ್ಕ ಮೀನು, ಮಿಡುಕಾಡುತ್ತಿರುವೆ ನಾನು, ಬಿಡಲಾರೆ ನಾ ಸಿಗರೇಟು, ಹೀಗೆ ಬದುಕಿಗೆ ಅಂಟಿಕೊಂಡು ಆವರಿಸುವ ವಾಸ್ತವ ಕಾವ್ಯ ಸ್ವರೂಪಕ್ಕೀಗ ಐವತ್ತು ವರ್ಷಗಳು.
ವರನಟ ಅನಂತನಾಗರಂತೆ ಕಾಣುವ ಲಕ್ಷ್ಮಣರಾವ್ ಮಾಮೂಲಿ ಮನುಷ್ಯರಾದರೂ ರಸಿಕತೆಯ ಮಹಾಪೂರವನ್ನೇ ನಮಗೆ ಉಣಬಡಿಸಿದ್ದಾರೆ. ಪ್ರೆಸ್ ಕ್ಲಬ್ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಅವರೊಂದಿಗಿನ ಬ್ಲಾಕ್ ಅಂಡ್ ವೈಟ್ ರಾಗ ಹಾಡುತ್ತಾ ಧೂಮಲೀಲೆಯಲ್ಲಿ ತೇಲಿ ಹೋದ ನೆನಪಿನಲ್ಲಿ ಹೇಳಿ ಹೋಗು ಕಾರಣ ಹೋಗುವಾ ಮೊದಲು….
ಯಾವಾಗಲೂ ಗುನು ಗುನಿಸುವ ಹತ್ತಿರ ಹತ್ತಿರದ ಗೀತೆ.
ಹೀಗೆ ಕವಿಗೆ ನೂರಾಗಲೀ ಕವಿತೆಗೆ ಎಪ್ಪತ್ತೈದಾಗಲಿ ಎಂಬುದು ಅವರ ಅಭಿಮಾನಿಗಳ ಕೋರಿಕೆ ಹಾರೈಕೆ.
- ವೈ ಜಿ ಅಶೋಕ್ ಕುಮಾರ್ – ಪತ್ರಕರ್ತರು, ಲೇಖಕರು