ಕವಿ ಬೆಂಗಳೂರು ಶ್ರೀನಿವಾಸ್ ರವೀಂದ್ರ ಅವರು ಕವಿತೆಯೊಂದರಲ್ಲಿ ‘ಭಾರತವೆಂದರೆ’ ಏನು? ಇಲ್ಲಿಯ ವಿಶೇಷತೆಯೇನು? ಎನ್ನುವುದನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ, ಮುಂದೆ ಓದಿ…
ಇಹುದೇನು ಭಾರತವು
ಗಡಿಯ ತಂತಿಬೇಲಿಯೊಳಗೆ
ಹಿಮಾಲಯದ ಕೋಡಿನಿಂದ
ಹಿಂದೂ ಸಾಗರದ ತಳದವರೆಗೆ
ದ್ವಾರಕೆಯ ಅಂಚಿನಿಂದ
ಮಣಿಪುರದ ಬಾಚಿನವರೆಗೆ
ಗಂಗೆ ಯಮುನೆಯರ ಹರಿವಿನಲಿ
ಕಾವೇರಿಯ ಜಳಜಳದೊಳಗೆ
ಅರಾವಳಿ ವಿಂಧ್ಯ ಪಶ್ಚಿಮ
ಪೂರ್ವ ಘಟ್ಟಗಳ ಶಿಖರಗಳೊಳಗೆ
ಥಾರ್ ಮರುಭೂಮಿಯಲಿ
ಗಂಗೆ ಯಮುನಾ ಬಯಲಿನೊಳಗೆ
ದಕ್ಷಿಣ ಪ್ರಸ್ಥಭೂಮಿಯಲಿ
ಪರ್ಯಾಯದ್ವೀಪ ತೀರದೊಳಗೆ
ದಟ್ಟಕಾಡುಗಳು ವನ್ಯರ ತಾಣದಲಿ
ಊರು ಕೇರಿ ಹೊಲ ಮನೆಯೊಳಗೆ
ಮಂದಿರ ಇಗರ್ಜಿ ಮಸೀದಿಗಳಲಿ
ಸರಸ್ವತಿಯ ಬಯಲಿನೊಳಗೆ
ಹರಪ್ಪಾ ಮಹಂಜೋದಾರೊ
ತಕ್ಷಶಿಲೆ ನಳಂದ ಗೌರಿಶಂಕರದೊಳಗೆ
ರಾಮಾಯಣ #ಮಹಾಭಾರತ
ಭಾಗವತ ವೇದ ಉಪನಿಷತ್ತುಗಳೊಳಗೆ
ಸೂಫಿ ಪದಗಳಲಿ ದಾಸರ ನುಡಿಗಳಲಿ
ಅಶೋಕ ಅಕ್ಬರ್ ಶಿವಾಜಿ ಕೃಷ್ಣದೇವರೊಳಗೆ
ಅಳಿದುಳಿದ ಚಕ್ರವರ್ತಿ ರಾಜ
ಸಾಮಂತ ಪಾಳೆಯಪಟ್ಟಗಳೊಳಗೆ
ಶಂಕರ ಮಧ್ವ ರಾಮಾನುಜರಲಿ
ರಾಮಕೃಷ್ಣ ವಿವೇಕರಂತಹ ಸಂತರೊಳಗೆ
ಸಾಮಾನ್ಯನಲೋ ಅಸಾಮಾನ್ಯನಲಿ
ಎಲ್ಲಿ ಅಡಗಿಹೆ ನೀ ಭಾರತವೇ
ಭಾರತವು ನಾನೆ ಆಗಿಹೆನೇನು
ಮನದ ಚಿಂತನೆ ಆಲೋಚನೆಗಳಲಿ
ಆನಂತ ಕಾಲದ ಆವರಣದಲಿ
ಯಾರ ಎಣಿಕೆಗೂ ನಿಲುಕದಿಹೆನೇನು
ಎಲ್ಲೆಲ್ಲೂ ಅಡರಿದ ಚೈತನ್ಯೇನು
ಹುಟ್ಟು ಸಾವಿರದ ಚಿರಂತನವೇನು.
- ಬೆಂಶ್ರೀ ರವೀಂದ್ರ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು
