ಒಂದು ದೀಪದಿ ಸಾಲು… ದೀಪಗಳ ಉರಿಸುತ ಜ್ಞಾನದ ಪರಿಧಿಯ ಹರಡಿಸ ಬನ್ನಿ…ವಿಶ್ವ ಪುಸ್ತಕ ದಿನಾಚರಣೆ ಪ್ರಯುಕ್ತ ಶಿಕ್ಷಕರು, ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರು ಬರೆದ ಈ ಕವನವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ ಓದಿ
ಅರಿವಿನ ಬೆಳಕಲಿ
ಮಸ್ತಕ ಬೆಳಗುವ ಬನ್ನಿ
ಒಂದು ದೀಪದಿ ಸಾಲು
ದೀಪಗಳ ಉರಿಸುತ
ಜ್ಞಾನದ ಪರಿಧಿಯ ಹರಡಿಸಬನ್ನಿ
ಹಗಲಿನಲೂ
ದಾರಿ ತೋರುವ
ಅರಿವೇ ನಮ್ಮ ಸಂಪತ್ತು
ನಿಶೆಯೊಡಲಲೂ
ಕೈದೀವಿಗೆಯಾಗಿ
ದಿಕ್ಕು ತಪ್ಪಿಸದ ಮಹತ್ತು
ಪುಸ್ತಕ ಪೂಜೆಗೆ
ಮಿಗಿಲಹುದೇನು
ಆಡಂಬರದ ಉಪಾಸನೆ
ಓದುತ ಒದಗುವ
ಧ್ಯಾನದ ಸುಖವ
ಮೀರಿಸಬಲ್ಲುದೆ ಇತರ ಸಾಧನೆ
ಪುಸ್ತಕ ಸದಾ ತಾ
ಹಸ್ತಕೆ ಭೂಷಣ
ಬೌದ್ಧಿಕತೆಯ ಕೇತನ
ಬಾಳ ಹಾದಿಯಲಿ
ಖತಿಗೊಳ್ಳದಂತೆ
ತಲೆ ಕಾಯುವ ಶಿರಸ್ತ್ರಾಣ
ಪುಸ್ತಕದೊಂದಿಗೆ
ಬೆಸೆಯುವ ಮೈತ್ರಿಗೆ
ಸಾಟಿ ಯಾವುದಿದೆ ಲೋಕದಲಿ
ಮೌಢ್ಯದ ತಮಸಿಗೆ
ಉತ್ತರವಿಹುದು
ಇದರ ಸಖ್ಯವಿರೆ ಚಿಂತಿಸಲು ಬಿಡುವೆಲ್ಲಿ
ಪುಸ್ತಕ ಲೋಕವು
ಮನಕಿಳಿಸಲು
ಅರಿವಿನ ಸುಧೆಯ
ಕುಡಿದವನಿಗೆ ಸಾವಿನ ಭಯವೆಲ್ಲಿ
ಸ್ನೇಹ ದ್ವೇಷಗಳ ಪ್ರೀತಿ
ಒಡಕುಗಳ ಆಚರಣೆಗೆ
ಪುರುಸೊತ್ತೆಲ್ಲಿ
ಓದಿನ ಬೀಜವ
ಬಿತ್ತುವ ನಾವು ಹರಡಲಿ
ವಿಹಾರಧಾಮದ ಹರವು
ಜೀವನೋಲ್ಲಾಸವ
ತುಂಬಿ ಬಾಳಿಗೆ
ಪರಿಮಳಿಸಲಿ ಎದೆಯ ಹೂಬನವು..
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
