ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ತಾರೆಗಳ ತೋಟದಲ್ಲಿ
ಚಂದಿರನರಸ
ನೀರೆಯರ ಮೋರೆಯಂತೆ
ಹುಣ್ಣಿಮೆ ದಿವಸ
ಕಾರಿರುಳ ಕತ್ತಲಲ್ಲು
ಮಿನುಗುವನೀತ
ಬೀರುತಲಿ ಬೆಳಕಿನಲೆಯ
ಬೆಳೆಸುವನೀತ
ಮಬ್ಬಿರಲು ಹಬ್ಬಿಬೆಳಕ
ಕತ್ತಲು ಕಳೆವ
ಕಬ್ಬಿಗರ ಮನದೊಳಿಳಿದು
ಭಾವವನೆರೆವ
ತಂಬೆಲರು ಬೀಸುವಾಗ
ತೇಲುತಲಿರುವ
ಅಂಬರದ ನಕ್ಷೆಯೊಳಗೆ
ತೂಗುತಲಿರುವ
ಕೈಬೀಸಿ ಕರೆವ ಮಗುವ
ಬೆಣ್ಣೆಯ ಉಂಡೆ
ಮೈ ಬಣ್ಣ ನೋಡುತಿರಲು
ಮುತ್ತಿನ ಚೆಂಡೆ
ಸಂಗಾತಿ ನೆನಪು ತರುವ
ಸುಂದರ ಶಶಿಯು
ಅಂಗಳದೊಳಿಳಿದರಿವನೆ
ಬಾನಿಗು ಖುಷಿಯು.
- ಚನ್ನಕೇಶವ ಜಿ ಲಾಳನಕಟ್ಟೆ
