ಕವಿ, ಲೇಖಕರಾದ ಅಜಿತ್ ಹರೀಶಿ ಅವರ ಒಂದು ಕವನವನ್ನು ತಪ್ಪದೆ ಮುಂದೆ ಓದಿ…
ಇದಾಕೇಳ್ರೀ ನಮ್ಮೂರ ಜಾತ್ರಿ ಕತಿ ಕೇಳ್ರೀ
ಕಾಳೇನಳ್ಳಿ ತೇರಿನ ಮಜಕೂರು ತಿಳಿರೀ
ದೆವ್ವಗಳು ಓಡಾಡು ಹೊತ್ನಾಗ
ಮಧ್ಯರಾತ್ರಿ ಹತ್ರಾದಂಗ ಅಮ್ಮ
ಚಪ್ಪರಕ್ಕೆ ಬಂದರ ಅದರ ಖದರSS ಬ್ಯಾರೀ
ಮುಂದಿನ ಸೊಗಸ ಕೇಳ್ರೀ
ಅರಿಷಿಣ ಕುಂಕುಮ ಹೂವು ಹಣ್ಣು ಕಾಯಿ
ರೂಢಿಹಂಗ ತಗೂಳೂದೇ
ಗದ್ದುಗೆ ಏರಿದ ಅಮ್ಮಗ ಕೈಮುಗೀಯದಟೆ
ಖೂಬಿ ಅದಾ ಇಲ್ಲಿ
ಕಾಯಿ ಮಂಗಳಾರತಿ ಹಿಡಿಯಾಂವ ಎಲ್ರಿಗೂ
‘ರೊಕ್ಕ’ ಆಮೇಲೆ ಬತ್ತಿನೇಳು
ಬೆಂಡು ಬತ್ತಾಸು ರಂಗಾಣಿ ಪೀಪಿ
ಬಾವ್ಯಾಗ ಬೈಕು ಕಾರು
ರುಮಾಲಿ ರೋಟಿ ಸಕ್ಕರೆ ಮಿಠಾಯಿ
ಎಲ್ಲಾ ಅನುಭವಿಸಿ ಆಮೇಲೆ ಕೊಡ್ತಿನೇಳ್ರೀ
ಸುತ್ತಾಡಿ ಬಳಿಪ್ಯಾಟಿ, ಹತ್ತಾಡಿ ಜಯಂಟು ವೀಲು
ರೋಕಡಾ ಕೇಳದಾಗೆಲ್ಲ ಒಂದೇ ಮಾತು
ಆಮೇಲೆ ಕೊಡಾನೇಳ್ರೀ ನಾವೇನು ಓಡಿ ಹೋಕ್ಯಾವ?
ಮಕ್ಕಳ ಆಕಳಿಕೆ ತೂಕಡಿಕೆ
ಹೆಂಡ್ರ ಸುಸ್ತು ನೋಡಿಕ್ಯಸಿಂದ
ಅಲ್ಲೆ ಪಕ್ಕದವನ ಹಾಸಿದ ಹುಲ್ಲೆಳೆದು
ನಮ್ ಎತ್ತಿನ ಗಾಡಿಗೆ ಹರವಿ
ಕೂಸುಗಳ ಅಡ್ಡಮಾಡಿಸಿ
‘ಬರ್ತೀನಿ ಇರಬೇ…’
ಗೊರಕೆ ಕೆಮ್ಮು ದಮ್ಮು ಸೀನವರ
ನಡಬರಗೆ ನಮ್ ಮಂದಿ ನಿದ್ದಿ
ತೊಂದ್ರಿ ಕಾಲುಸೋತ ಕೂಸು ಹೆಂಡ್ರಿಗೆಲ್ಲಿ?
ಅದೇಟಾರ ಕಂಟ್ರಿ ಕುಡಿಲಿ ಹೆಜ್ಜೆ ತಪ್ಪಾಂಗಿಲ್ಲ
ವೇಗ ತಗ್ಗಾಂಗಿಲ್ಲ
ಜಾತ್ರಿ ಕಳೆಯೂದ್ರಾಗ ಬುದ್ನಿ, ಚಿಮ್ಮಡಾಕ ಹೋಗಿ
ಕ್ಯೂನಾಗ ನಿಂತು ಗಣಮಗ ಅಂತ ಸಿದ್ದ ಮಾಡಿ
ಥೂ ಗುಡಿಸೆಟ್ಟಿ
ನಾಳೆ ಕೊಟ್ಟಿನೇಳು
ಅವಸರವಿಲ್ಲಿನ್ನು ಹೊರಬಿದ್ದಾತು
ಜಾತ್ರೆ ಮಾಯಾಗಲಿ ಅಂತ ತೇರೆಳೆದು
ಗಾಡಿ ಕಟಗಂಡು ಊರಿಗೆ ಬಂದು
ದಿಂಬಿಗೆ ತಲಿಕೊಟ್ಟು ಹಗಲು ಸಲೂಪು ಮಲಗಿಲ್ಲ
ದೂರಲೇ ಸೆಟ್ಟಿ ಕಂಡು ಸುದ್ದಾತು
‘ಭಂಡ ಸಿದ್ದ ಬಡ್ಡಿಮಗನೇ ಇವತ್ತಾರಾ
ಬಡ್ಡಿ ಕಟ್ಟತೀಯೋ ಹೊಲ ಬರಕೊಡ್ತೀಯೋ’
ಗಡಸು ಧ್ವನಿಯಾಗ ಬಾಗಿಲು ತಟ್ಟಿ
ಗಟ್ಟಿ ಕೂಗಾತಿದ್ದ ಕರಿಯನ್ ಸೆಟ್ಟಿ
ಹಗಲು ಬಾಳಾ ಕೆಟ್ಟದು
ರಾತ್ರಿ ಮಟ ಮೂರಾಸಲ ಆದು ಇದು ತಿಂತಾ
ಸುಮೀ ಜೊತಿ ಬೇಜಾನ್ ಸುರತ ಮಾಡಿ
ಹೊತ್ತು ಕಂತಿರತದಾ
ಇಲ್ಲಿ ನಮ್ಮೂರಲ್ಲಿ ರಾತ್ರಿ ಖರ್ಚು ಹೊಂದಿಸಾಬಕಂದ್ರೆ
ಕಾಳೇನಳ್ಳಿ ಜಾತ್ರಿ ದಿನದಾಂಗೆ ನಡೆಯೂದಿಲ್ಲ. ಓಡಬಕು, ಸುಳ್ಳ ಹೇಳಬಕು, ಮೈ ಬಗ್ಸಿ ದುಡೀಬಕು.
ಸೆಟ್ಟಿ ಕಡೆ ಮನಮಾನಿ ಬೈಸಕಾಬಕು
ರಾತ್ರಿ ನನ್ನ ಹತ್ರ ವಸೂಲಿಗೆ ಬರತಾನೋ
ಹೆಣತಿ ಕಡಿ ಕಣ್ಣ ಹಾಕಾಕೋ
ಥತ್! ಈ ಜಲುಮಕ್ಕಿಷ್ಟು
- ಅಜಿತ್ ಹರೀಶಿ
