ಪ್ರಾಣಿಗಳಲ್ಲಿ ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ರವಿ ಕುಮಾರ್ ಬೈಯಪ್ಪನಹಳ್ಳಿ ಅವರ ಮನೆಯಲ್ಲಿ ಸಾಕಿದ ನಾಯಿಯ ಕತೆಯಿದು. ಅದರ ಹೆಸರು ‘ನೆರಳು’. ಆ ಹೆಸರು ಹೇಗೆ ಬಂತು ಎನ್ನುವುದಕ್ಕೆ ಮಿನಿ ಕತೆಯಿದೆ.ನಿಮ್ಮ ನಾಯಿ ಹೆಸರಿನ ಹಿಂದೆ ಏನಾದರೂ ಕತೆ ಇದೆಯೇ? ಹಾಗಿದ್ದರೆ ಬರೆದು ಕಳುಹಿಸಿ…
ನೆರಳನ್ನು ನಾವು ಚಿಕ್ಕ ಮರಿ ಇದ್ದಾಗ ತಂದು ಸಾಕಲಿಲ್ಲ. ಅದು ತಾನಾಗಿಯೇ ನಮ್ಮ ಜಮೀನಿಗೆ ಒಂದು ಸೇರಿತು. ನಮ್ಮ ಜಮೀನು ಇರುವುದು ಊರಾಚೆ. ನಾವು ಮನೆ ಕಟ್ಟಲು ಅಲ್ಲಿ ತೀರ್ಮಾನ ಮಾಡಿದಾಗ,ನಮ್ಮ ತಂದೆ ಒಬ್ಬರೇ ಒಬ್ಬಂಟಿಯಾಗಿ ಇರಬೇಕಾಯಿತು. ವೃತ್ತಿಯನ್ನು ಅರಸಿ ಬೆಂಗಳೂರಿಗೆ ಬಂದ ನಾವುಗಳು ಅಲ್ಲಿಗೆ ಹೋಗಿ ಅವರ ಜೊತೆ ಇರಲು ಸಾಧ್ಯವಾಗಲಿಲ್ಲ. ನಮ್ಮ ತಂದೆ ಒಬ್ಬರೇ ಅಲ್ಲೇ ಇದ್ದು ಮನೆ ಕಟ್ಟಿಸುತ್ತಿದ್ದರು. ಕೆಲಸದ ಒತ್ತಡ ಒಂದೆಡೆಯಾದರೆ, ಇನ್ನೊಂದೆಡೆ ಅಪ್ಪ ಒಬ್ಬರೇ ಇರುವ ಭಯ ಕಾಡುತ್ತಿತ್ತು.

ಆ ಸಂದರ್ಭದಲ್ಲಿ ದೇವರ ರೂಪದಲ್ಲಿ ಎಲ್ಲಿಂದಲೋ ಒಂದು ಕಪ್ಪು ನಾಯಿ ನಮ್ಮ ತಂದೆಯ ಇದ್ದ ಸ್ಥಳದಲ್ಲಿ ಬಂದು ಸೇರಿತು. ಅಪ್ಪ ಒಂದೇ ದಿನ ಅದಕ್ಕೆ ಊಟ ಹಾಕಿದ್ದಷ್ಟೇ, ಅದು ಅವರನ್ನು ಬಿಟ್ಟಿ ಹೋಗಲೇ ಇಲ್ಲ. ಮನೆ ಪಾಯ ತೆಗೆಯುವಾಗ ಅಪ್ಪನ ಹಿಂದಿದೆ ಓಡಾಡಿಕೊಂಡು ಮನೆ ವಸ್ತುಗಳನ್ನು ಕಳ್ಳಕಾಕರಿಂದ ಕಾಪಾಡುತ್ತಾ, ಯಾವುದೇ ರೀತಿಯ ಹುಳ ಅವಟೆ ಮನೆ ಪ್ರವೇಶಿಸದಂತೆ ನನ್ನ ಅಪ್ಪನನ್ನು ಕಾಪಾಡುತ್ತಾ ಬಂದಿತು.
ಅವನು ಅಪ್ಪನಿಗೆ ನೆರಳಾಗಿ ಕಾಪಾಡುತ್ತಿದ್ದರಿಂದ ಅವನಿಗೆ ‘ನೆರಳು’ ಎಂದು ಹೆಸರಿಟ್ಟೆವು. ಮುಂದೆ ನಮ್ಮ ಮನೆಯ ಸದಸ್ಯನಾಗಿ ಹೋದ. ನಮ್ಮ ಮನೆಯ ಚಿಕ್ಕ ಚಿಕ್ಕ ಮಕ್ಕಳು ಅವನಿಗೆ ಕಾಟ ಕೊಟ್ಟರು, ಇಲ್ಲಿವರೆಗೂ ಯಾರನ್ನೂ ಕಚ್ಚಿಲ್ಲ, ಈವರೆಗೂ ಅದು ಬೊಗಳಿದ್ದು ಕೂಡಾ ನೋಡಿಲ್ಲ. ಆದರೆ ಅಪರಿಚಿತರು, ಹುಳ ಅವಟೆ ಬಂದರೆ ಮಾತ್ರ ತನ್ನ ಉಗ್ರ ಸ್ವರೂಪ ತೋರಿಸುತ್ತಾನೆ.
ಈವರೆಗೂ ಸಹ ನಮ್ಮ ತಂದೆಯ ಬಲಗೈ ಬಂಟನಂತೆ, ತೋಟದ ರಕ್ಷಣೆನಾಗಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ. ರಕ್ತಹಂಚಿಕೊಂಡು ಹುಟ್ಟಿದ ಮಕ್ಕಳಾದ ನಾವುಗಳು ಅಪ್ಪನ ಜೊತೆಗೆ ಇಲ್ಲ, ಆದರೆ ಸಂಬಂಧವೇ ಇಲ್ಲದೆ ಮನೆ ಬಂದು, ಹಾಕಿದ ಒಂದು ಹೊತ್ತಿನ ಊಟಕ್ಕೆ ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿ ತೋರಿಸುವ ಗಾಂಧಿ ಮುಂದೆ ನಾವು ಮೂಕವಿಸ್ಮಿತರು.
ಪ್ರಪಂಚದಲ್ಲಿ ಪ್ರಾಣಿಗೆ ಇರುವ ನಿಯತ್ತಿನ ಮುಂದೆ ಯಾವ ಮನುಷ್ಯನೂ ಇಲ್ಲ. ಆಸ್ತಿಗಾಗಿ ಸ್ವಂತ ತಂದೆ ತಾಯಿಯನ್ನೇ ಅನಾಥಾಶ್ರಮಕ್ಕೆ ಸೇರಿಸುವ ಇಂದಿನ ಸಮಾಜದಲ್ಲಿ ನಮ್ಮ ನೆರಳು ಎಲ್ಲರಿಗೂ ಮಾದರಿಯಾಗಿದ್ದಾನೆ.
ಅವನ ಪ್ರೀತಿಗೆ ನನ್ನದೊಂದು ಸಲಾಂ…
- ರವಿ ಕುಮಾರ್ ಬೈಯಪ್ಪನಹಳ್ಳಿ
