ಅಗಲಿದ ಹಿರಿಯ ಖ್ಯಾತ ಕವಿ ಡಾ. ಎಚ್ ಎಸ್ ವೆಂಕಟೇಶಮೂರ್ತಿ ಅವರಿಗೆ ಕವಿಯತ್ರಿ ಸುಜಾತಾ ರವೀಶ್ ಅವರ ಕವನದ ಮೂಲಕ ಅಕ್ಷರ ನಮನಗಳು…
ಮೂವತ್ತು ಮಳೆಗಾಲಗಳ ರೋಚಕ ಅನುಭವ
ಇಂದುಮುಖಿ ಸಾಹಿತ್ಯ ಸಂಭ್ರಮದ ಸಿರಿ ವಿಭವ
ಒಣಮರದ ಗಿಳಿಗಳು ಹಾಡಿರಲು ಮೈಮರೆತು
ಮೂಡಿದವಾಗ ಹಸಿರಿನ ಎಲೆಗಳು ನೂರಾರು
ಕನ್ನಡ ಸಾಹಿತ್ಯ ಶರಧಿಗೆ ಇವರೇ ಹರಿಗೋಲು
ಮೊಖ್ತಾ ಬಂದು ಜನತೆಯೊಡನೆ ಸಂವಾದಿಸಿರಲು
ವಿಸರ್ಗವಾದವು ಋಣಾತ್ಮಕ ನಕಾರಾತ್ಮಕತೆಗಳು
ವಿಮುಕ್ತಿಯಾದವು ಮನದೆಲ್ಲ ಅಶಾಂತಿ ಗೊಂದಲಗಳು
ಅಮೆರಿಕಾದಲ್ಲಿ ಬಿಲ್ಲುಹಬ್ಬ ನೋಡಲು ತೆರಳಿರಲು
ಭೂಮಿಯೂ ಒಂದು ಆಕಾಶವೆಂದು ಹೇಳಿದರು
ಸಿಂದಾಬಾದನ ಆತ್ಮಕಥೆಯನ್ನು ಬರೆಯುತಲಿ
ಅಗ್ನಿಸ್ತಂಭ ಮರೆತ ಸಾಲುಗಳ ಪ್ರಸ್ತಾಪ ಮಾಡಿದರು
ಬಾಗಿಲು ಬಡಿವ ಜನಗಳ ಗೋಳಿಗೆ ಕಿವಿಯಾಗಿ
ಎಷ್ಟೊಂದು ಮುಖ ತೋರುವವರ ಕನ್ನಡಿಯಾಗಿ
ಆತ್ಮೀಯತೆ ಸ್ನೇಹಗಳ ಸುಂದರ ಪರಿವೃತ್ತವಾಗಿ
ಸಿಕ್ಕಿಹರು ಕನ್ನಡಿಗರ ಸುಕೃತ ಸೌಗಂಧಿಕವಾಗಿ
- ಸುಜಾತಾ ರವೀಶ್ – ಮೈಸೂರು
