ಸಿಲ್ಲಿ ಲಲ್ಲಿ ಹಾಸ್ಯ ಧಾರವಾಹಿಯಲ್ಲಿ ಕಾಂಪೌಂಡರ್ ಗೋವಿಂದ ಪಾತ್ರದ ಮೂಲಕ ಎಲ್ಲರನ್ನು ನಕ್ಕು ನಲಿಸಿದ ಸಂಗಮೇಶ್ ಉಪಾಸೆ ಅವರು ವೃತ್ತಿಯಲ್ಲಿ ಸರ್ಕಾರಿ ಟ್ಯಾಕ್ಸ್ ಕಮಿಷನರ್. ತಮ್ಮ ಒತ್ತಡದ ಬದುಕಿನಲ್ಲಿಯೂ ಬರವಣಿಗೆಯ ಮೂಲಕ ಸಾಹಿತ್ಯಲೋಕದಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿದವರು. ಇತ್ತೀಚೆಗಷ್ಟೇ ಅವರ ಬರೆದ ‘ದೇವರುಗಳಿವೆ ಎಚ್ಚರಿಕೆ!’ ಕೃತಿ ಬಿಡುಗಡೆಯಾಗಿದ್ದು, ಸಾಹಿತ್ಯ ಆಸಕ್ತರ ಗಮನ ಸೆಳೆಯುತ್ತಿದೆ.
ನಾನು ೧೯೯೭ರಲ್ಲಿ ಬೆಂಗಳೂರಿಗೆ ಅಲೆಮಾರಿಯಾಗಿ ಬಂದಾಗ ಕಲಾಕ್ಷೇತ್ರ ಕಟ್ಟೆಯಲ್ಲಿ ಸಿಜಿಕೆ, ಹೂಲಿಶೇಖರ್, ಸಿ. ಕೆ. ಗುಂಡಣ್ಣ, ನಾಗರಾಜಮೂರ್ತಿ, ಕಪ್ಪಣ್ಣ, ಮಾಲತೇಶ ಬಡಿಗೇರ, ಆನಂದ ಕಳಸ, ಮಿಟ್ಟಿಕೃಷ್ಣ, ಲಲಿತ, ಕುಳ್ಳಿ ಮಂಜುಳ, ನಾಗೇಶ್, ಚಾಂಗ್, ಶಾಸ್ತ್ರಿ, ಶೆಟ್ಟಿ, ಕೃಷ್ಣ ರಾಯಚೂರ, ಉದಯ ಪ್ರಕಾಶ್, ನಾಗರಾಜ, ಕುರಿ ಪ್ರಕಾಶ್, ಕುವೆಂಪು ಪ್ರಕಾಶ್, ವಿಜಯಕುಮಾರ, ಜಿತೂರಿ, ಭೀಮೇಶಪ್ಪ, ಬಾರಿಘಾಟ್, ಜಿಪಿಓ ಚಂದ್ರು, ರೇವಣ್ಣ, ಚನ್ನಕೇಶವ, ಗೋವಿಂದಸ್ವಾಮಿ, ಮೈಕೊ ಶಿವಶಂಕರ, ಮೈಕೊ ಶಿವಣ್ಣ, ಜೋಶಿ, ಶ್ರೀಧರ್, ಹಾಲ್ಕುರಿಕೆ ಶಿವಶಂಕರ, ಹನುಮಕ್ಕ, ರಂಗೋತ್ರಿ ಕುಮಾರ, ಜೋತಿ, ಕುಮಾರ, ಕವಿತಾ, ಕುಲಕರ್ಣಿ, ನರೇಶ್, ಮುಂತಾದವರು ಸಿಕ್ಕವರು.

(ಸಂಗಮೇಶ್ ಉಪಾಸೆ ಅವರ “ದೇವರುಗಳಿವೆ ಎಚ್ಚರಿಕೆ!” ಕೃತಿಯನ್ನು ಹೂಲಿಶೇಖರ್ ಅವರಿಗೆ ನೀಡಿ ಗೌರವಿಸಿದ ಚಿತ್ರವಿದು)
ನಾನು “ಐಶ್ವರ್ಯ ಕಲಾನಿಕೇತನ”ಕ್ಕೆ “ಅಳಿಯ ದೇವರು”, “ಚಂದ್ರಗುಪ್ತ ಮೌರ್ಯ” ನಾಟಕಗಳನ್ನು ನಿರ್ದೇಶನ ಮಾಡಿ ನಟಿಸಿದಾಗ ಕೈ ಹಿಡಿದವರು. ಇದೇ ಸಂದರ್ಭದಲ್ಲಿ ಮಾಲತೇಶ ಬಡಿಗೇರ ಮತ್ತು ನಾವು ಸೇರಿ “ಬಹುರೂಪಿ” ತಂಡ ಕಟ್ಟಿ ಹೂಲಿ ಶೇಖರವರ “ರಾಕ್ಷಸ” ನಾಟಕ ಆಡಿ ಹಂಪಿ ಉತ್ಸವ ಸೇರಿದಂತೆ ಹಲವಾರು ಕಡೆ ನಾಟಕ ಪ್ರದರ್ಶನ ಮಾಡಿದಾಗಿನಿಂದಲೂ ಹೂಲಿಶೇಖರ್ ಮತ್ತು ನಮ್ಮ ಒಡನಾಟ ಹಸಿರಾಗಿದೆ. ಮೂಡಲಮನೆ, ಗಂಗಾ ಸೇರಿದಂತೆ ಹಲವಾರು ಧಾರಾವಾಹಿಗಳಿಗೆ ಸಂಭಾಷಣೆ ಬರೆದು, ದಫನ್, ರಾಕ್ಷಸ, ಅರಗಿನ ಬೆಟ್ಟ, ‘ಕರಿಯು ಕನ್ನಡಿಯೊಳಗೆ’ ಸೇರಿದಂತೆ ಹಲವಾರು ನಾಟಕಗಳನ್ನು ಬರೆದು, ನಟಿಸಿ, ನಿರ್ದೇಶಿಸಿ ಜನಮನ್ನಣೆ ಗಳಿಸಿದವರು. ಹಲವಾರು ಸನ್ಮಾನ, ಪ್ರಶಸ್ತಿಗಳಿಗೆ ಭಾಜನರಾದವರು. ಇವರು ನನ್ನ ಮೂರನೆಯ ಹೊಸ “ದೇವರುಗಳಿವೆ ಎಚ್ಚರಿಕೆ!” ನಾಟಕಕ್ಕೆ ಆಶಯ ನುಡಿ ಬರೆದು ಹರಸಿ ಹಾರೈಸಿದ್ದಾರೆ.
ಸರಕಾರಿ ಕೆಲಸದಲ್ಲಿದ್ದುಕೊಂಡು ಇದೆಲ್ಲ ಮಾಡಿದ್ದು ಅದು ಅವರ ನಿಜವಾದ ಪರಿಶ್ರಮವನ್ನು ಎತ್ತಿ ತೋರಿಸುತ್ತದೆ. ಒಂದು ವೃತ್ತಿಯಲ್ಲಿದ್ದು ಇದೆಲ್ಲ ಮಾಡುವುದು ತುಂಬಾ ಕಷ್ಟದ ಕೆಲಸ. ಹೆರಿಗೆ ನೋವು ಹಡೆದವಳಿಗೇ ಗೊತ್ತು ಎನ್ನುವ ರೀತಿಯ ನೋವು ಅದು. ಅನುಭವಿಸಿದವರಿಗೇ ಗೊತ್ತು. ‘ಸುಳಿವಾತ್ಮ ಎನ್ನೊಳಗೆ’ ನಾಟಕಕ್ಕೆ ಈಗ ಅವರು ೨೦೧೯ ನೆಯ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆಯುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಗೌರವಿಸಿ ನನ್ನ ಗೌರವ ಹೆಚ್ಚಿಸಿಕೊಂಡ ಸಂದರ್ಭವಿದು.
- ಸಂಗಮೇಶ್ ಉಪಾಸೆ (ವೃತ್ತಿಯಲ್ಲಿ ಸರ್ಕಾರಿ ಟ್ಯಾಕ್ಸ್ ಕಮಿಷನರ್, ಬರಹಗಾರರು, ನಟರು) ಬೆಂಗಳೂರು
