ಊಟ ಮಾಡುವಾಗ ಒಂದು ಅನ್ನ ತಟ್ಟೆಯಿಂದ ಹೊರಗೆ ಬಿದ್ದರೆ ಅಪ್ಪನ ಹೊಡೆತ ಸಿಗುತ್ತಿತ್ತು. ಅಪ್ಪನೂ ಅಷ್ಟೇ , ಎಷ್ಟೇ ಚಿಕ್ಕ ಪಾತ್ರೆಯಲ್ಲಿ ಆಹಾರ ಕೊಟ್ಟರೂ ಇಂದಿನವರೆಗೂ ಒಂದು ತುತ್ತೂ ಹೊರಗೆ ಬೀಳದಂತೆ ತಿನ್ನುತ್ತಾರೆ.
ಮನೆಯಲ್ಲಿ ವಿದ್ಯುತ್ತ್ ಬಂದಿದ್ದು / ತಂದೆ ಎಲ್ಲಿಂದಲೋ ಸಾಲ ಮಾಡಿ ಕಂಬಕ್ಕೆ ದುಡ್ಡು ಕೊಟ್ಟು , ನನ್ನ #SSLC ಪರೀಕ್ಷೆಯ ಸಮಯದಲ್ಲಿ ತರಸಿದ್ದರು. ಮನೆಯೊಳಗೆ ನಾವು ಇರುವ ಕೊಠಡಿ ಬಿಟ್ಟರೆ ಬೇರೆಲ್ಲೂ ಅನಾವಶ್ಯಕ (ಲೈಟ್ ಹಾಕುವಂತಿಲ್ಲ) ದೀಪ ಬೆಳೆಗಿಸುವಂತಿಲ್ಲ. ನೀರು ಅನಾವಶ್ಯಕವಾಗಿ ಚೆಲ್ಲುವಂತಿಲ್ಲ.
ಪೇಟೆಗೆ ಹೋಗುವಾಗ ಹಾಕುವ ಬಟ್ಟೆ ಬೇರೆ, ಸಮಾರಂಭಕ್ಕೆ ಹೋಗಬೇಕಾದಾಗ ಹಾಕುವ ಬಟ್ಟೆ ಬೇರೆ, ಶಾಲೆಗೆ ಹೋಗುವಾಗ ಹಾಕುವ ಬಟ್ಟೆ ಬೇರೆ… ಈ ಬೇರೆ ಬಟ್ಟೆ ಅಂದಂದು ಉಪಯೋಗಿಸಿದ ನಂತರ ಕೂಡಲೇ ಬದಲಾಯಿಸಬೇಕು. ಈ ಬೇರೆ ಬಟ್ಟೆ ಹಳೆಯದಾದಾಗ ಮನೆಯೊಳಗೆ ಹಾಕಲು ಸಿಗುತ್ತಿತ್ತು. ಯಾವುದೇ ಹೊಸಾ ಬಟ್ಟೆ ಹೊಲಿಸಿದ ಕೂಡಲೇ ಮನೆಯೊಳಗೆ ಹಾಕುವಂತಿರಲಿಲ್ಲ.
ಹವಾಯಿ ಚಪ್ಪಲಿ, ಅದು ರಾತ್ರಿ ಮಲಗುವ ಮೊದಲು ತೊಳೆದು, ನೆಲದ ಗೋಡೆಗೆ ಲಂಬವಾಗಿ ಇಡಬೇಕು. ಹೀಗೆ ಹಲವು ರೂಢಿಯನ್ನು ನನ್ನ ತಂದೆ ತಾಯಿ ನನ್ನೊಳಗೆ ಸೇರಿಸಿ ಸಮಾಜಕ್ಕೆ ಅರ್ಪಿಸಿದರು.
ಇಂದೂ ನಾನು ತಿನ್ನುವಾಗ ಆಹಾರ ಹೊರಗಡೆ ಬಿದ್ದರೂ ಹೆಕ್ಕಿ ತಿನ್ನುತ್ತೇನೆ. ಲೈಟು ನಾನಿರುವ ಕೋಣೆಯಲ್ಲಿ ರಾತ್ರಿ ಆವಶ್ಯಕವಿದ್ದರೆ ಉರಿಸುತ್ತೇನೆ. ಬಟ್ಟೆಗಳನ್ನು ಸೂಕ್ಷ್ಮ ವಾಗಿಡುತ್ತೇನೆ. #ಕೊರೋನಾ ಕಾಲದಲ್ಲಿ ಸಂಬಳ ಇಲ್ಲದೇ ಇದ್ದಾಗ, ತಿಂಗಳಾನುಗಟ್ಟಲೆ … ಇನ್ನು ಯಾವಾಗ ಸಂಬಳ ಸಿಗಬಹುದು? ಕೆಲಸ ಸಿಗಬಹುದೇ? ಎಂಬ ಹಲವು ಆತಂಕಗಳೊಳಗೂ, ಸಂಪಾದಿಸಿದ ದುಡ್ಡಿನಲ್ಲಿ ಖುಷಿಯಾಗಿದ್ದೆ.
ಹಿಂದೆ ನನ್ನಜ್ಜ ಬೆಳಿಗ್ಗೆಯಿಂದ ಮಟಮಟ ಮಧ್ಯಾಹ್ನ ನೆಗಿಲಿನಿಂದ, ತನ್ನದೂ ಪರರದೂ ಗದ್ದೆ ಉತ್ತು, ಶ್ರಮಿಸಿ ಜೀವಿಸುತ್ತಿದ್ದರು, ಉಳುಮೆಗೆ ಕೂಲಿಯಾಗಿ ಕೊಡುತ್ತಿದ್ದ ಹುಲ್ಲು (ಮೂಕ ಪ್ರಾಣಿಗೂ), ಮತ್ತು ಭತ್ತ ಶೇಖರಿಸಿಡುತ್ತಿದ್ದರು. ಕಷ್ಟ ಕಾಲಕ್ಕೆ ಎಲ್ಲೂ ಕೆಲಸ ಇಲ್ಲದ ಅತಿ/ಅನಾವೃಷ್ಟಿ ಸಮಯದಲ್ಲಿ ಮನೆಯವರಿಗೆ, ಎತ್ತು ಕೋಣ ಹಸು ದನಗಳಿಗೆ ಆಹಾರದ ಸಮಸ್ಯೆ ನಿಯಂತ್ರಣದಲ್ಲಿಡುತ್ತಿದ್ದರು.
“ಬೆಲೆ” ಅದು ಜೀವನದಲ್ಲಿ ಒಂದಲ್ಲಾ ಒಂದು ತಿರುವಿನಲ್ಲಿ ನಾವು ಕೊಡಬೇಕಾಗುತ್ತದೆ. ಜೀವನದ ಸಮುದ್ರವನ್ನು ಜಾಗರೂಕತೆಯಿಂದ ನಯಿಸಬೇಕು. ಅಲೆಗಳಿಗೆ ಅದರದೇ ಆದ ಎತ್ತರಗಳಿರುತ್ತದೆ. ನಾವು ಅಂತಹಾ ಎತ್ತರದ ಅಲೆಗಳ ಕೆಳಗಿನಿಂದ ಬಗ್ಗಿ ಮುನ್ನಡೆಯಬೇಕು.
ನಿಮ್ಮವ ನಲ್ಲ
ರೂಪು
- ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು) ಬೆಂಗಳೂರು
