ರೇಖಾ ವಿ ಕಂಪ್ಲಿ ಅವರ ಲೇಖನಿಯಲ್ಲಿ ಮೂಡಿ ಬಂದ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ…
ಈ ಸೃಷ್ಟಿಯಲ್ಲಿ ಯಾವುದೊಂದು ದಂಡವೆ ಅಲ್ಲ
ದೇವರ ದೃಷ್ಟಿಯಂತೆ ನಡೆದಿದೆ ಮಾನದಂಡವೆಲ್ಲ
ಮಾನವ ಮೀರುತಿಹನು ತನ್ನ ಉದ್ದಂಡತನದಲ್ಲಿ
ಸ್ವಾರ್ಥ ಸಾಧನೆಯೊಳಗಾದ ದಂಡನಾಯಕನಿಲ್ಲಿ..
ದಂಡನೀತಿ ಜಾತಿಗಳ ಬೆಳಸಿಕೊಂಡ ಈ ಮನುಜ
ದಂಡನೆ ಪಡುತ್ತಲಿಂದು ತಾ ಸಾಗಿರುವುದು ಸಹಜ
ದಂಡಿಗೆಯೊಳಗಿಲ್ಲ ನ್ಯಾಯನೀತಿ ಮಂಡಿಗೆ ತಿಂದು
ದಂಡಾಗಿ ಪಾಪಕರ್ಮಗಳೆಚ್ಚು ಮಾಡಿದರು ಬಂದು…
ದಂಡೆಯ ಮೇಲಿನ ಮತ್ಸ್ಯದಂತೆ ಈ ಜೀವ ಜೀವನ
ದಂಡಾಸನದೊಳಗೆ ಸೇರಬೇಕು ನಾವೆಲ್ಲ ಆ ದೇವನ
ದಂಡಯಾತ್ರೆ ಮನದ ಮೇಲೆ ಇರಲಿ ಬೇಲಿ ಹಾಕಲು
ದಂಡಃ ದಶಗುಣಃ ವಿಧಿಸಿಕೋ ನಿಜ ಮನುಜನಾಗಲು..
ನೀಡು ಮಾನವಿಗೆ ಗೌರವ ಕಾಮವನ್ನು ದಂಡರಿಸುತ
ಲೋಕೋ ಅಭಿಪ್ರಾಯ ಭಿನ್ನಾಭಿರುಚಿಯ ದಂಡಮತ
ಎಷ್ಟೇ ನೀ ನಾಟಕವ ಆಡಿದರು ತಪ್ಪದು ಮೃತ್ಯುದಂಡ
ಸಹನೆ ಸಹಾನುಭೂತಿ ಒಳಗೆ ಆಗು ನೀನು ಗದಾದಂಡ..
- ರೇಖಾ ವಿ ಕಂಪ್ಲಿ
