2011ರಲ್ಲಿ ‘ಚದುರಿದ ಚಿತ್ರಗಳು-ಚಿಗುರಿದ ಕನಸುಗಳು’ ಎಂಬ ಹೆಸರಿನಲ್ಲಿ ಪ್ರಕಟವಾದ ಈ ಪುಸ್ತಕಕ್ಕೆ ಕರ್ನಾಟಕ ಸರ್ಕಾರದ ‘ಸಿನಿಮಾ ಪುಸ್ತಕ ಸಾಹಿತ್ಯ ಪ್ರಶಸ್ತಿ’ ಅದರ ಸವಿನೆನಪನ್ನು ಖ್ಯಾತ ಸಿನಿ ಬರಹಗಾರ ಗಣೇಶ ಕಾಸರಗೋಡು ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…
ಭರ್ತಿ ಹತ್ತು ವರ್ಷ! ನಾನು ಬರೆದಿರುವ ‘ಚದುರಿದ ಚಿತ್ರಗಳು’ ಪುಸ್ತಕಕ್ಕೆ ರಾಜ್ಯ ಸರ್ಕಾರದ ಪ್ರಶಸ್ತಿ ಘೋಷಣೆಯಾದದ್ದು 2011ರಲ್ಲಿ. ಮೈಸೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಕೈಯಿಂದ ಈ ಪ್ರಶಸ್ತಿಯನ್ನು ಪಡೆದದ್ದು ಒಂದು ಸವಿ ನೆನಪು. ‘ಚದುರಿದ ಚಿತ್ರಗಳು’ ಪುಸ್ತಕದ ಕರ್ತೃ ನನಗೆ ಮತ್ತು ಅದನ್ನು ಪ್ರಕಾಶಿಸಿದ ‘ಅಮ್ಮ ಪ್ರಕಾಶನ’ದ ಪರವಾಗಿ ನನ್ನ ಶ್ರೀಮತಿ ಗಾಯತ್ರಿಗೆ ಈ ಪ್ರಶಸ್ತಿ ಸಂದಿದೆ. ಒಂದೇ ವೇದಿಕೆ ಮೇಲೆ ದಂಪತಿಗಳು ಸಂಭ್ರಮಿಸಿದ್ದು ಕನಸೋ ನನಸೋ ಕನ್ಫ್ಯೂಷನ್!
ಇರಲಿ, ಒಂದು ಸಣ್ಣ ಫ್ಲಾಶ್ ಬ್ಯಾಕ್ : ಅಂದಹಾಗೆ, ತಾರಾ ಪರಮೇಶ್ವರ ಮಧ್ಯಸ್ಥ ಎಂಬ ಹೆಸರಿನ ಹೆಣ್ಣು ಮಗಳೊಬ್ಬಳು ನಮ್ಮ ‘ವಿಜಯ ಕರ್ನಾಟಕ’ ಆಫೀಸಿಗೆ ಬಾರದಿರುತ್ತಿದ್ದರೆ ಬಹುಶಃ ‘ಚದುರಿದ ಚಿತ್ರಗಳು’ ಅಂಕಣ ಪ್ರಾರಂಭವಾಗುತ್ತಲೇ ಇರಲಿಲ್ಲ. ಹಾಗೆ ಬಂದ ತಾರಾ ಮಧ್ಯಸ್ಥ ಸುಮ್ಮನಿರಲಿಲ್ಲ. ತಮ್ಮ ಪತಿದೇವರ ದುರಾದೃಷ್ಟವನ್ನು ಹೇಳಿಕೊಂಡು ಅತ್ತರು. ಒಂದು ಕಾಲದಲ್ಲಿ ಹಿಂದಿ ನಟ ದೇವಾನಂದ್ ಅವರ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದುಕೊಂಡು ಮೆರೆದ ಈ ಪರಮೇಶ್ವರ ಮಧ್ಯಸ್ಥ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ದಯನೀಯ ಸ್ಥಿತಿಯನ್ನು ವಿವರಿಸಿದ್ದರು ತಾರಾ ಮೇಡಂ. ಈಯಮ್ಮ ಹೇಳುತ್ತಿರುವ ಪರಮೇಶ್ವರ ಮಧ್ಯಸ್ಥರು ಒಂದು ಕಾಲದಲ್ಲಿ ಸಂಪಾದಕ ವಿಶ್ವೇಶ್ವರ ಭಟ್ಟರ ರೂಮ್ ಮೇಟ್ ಆಗಿದ್ದವರಂತೆ!
ನನ್ನ ಕುತೂಹಲ ಗರಿಗೆದರಿತು. ಚೆಕ್ ಮಾಡಿಯೇ ಬಿಡೋಣ ಅಂತ ಮಾರನೇ ದಿನವೇ ಅವರ ಲೊಟ್ಟಗೊಲ್ಲಹಳ್ಳಿಯ ಗುಡಿಸಲಿನಂತಿರುವ ಮನೆಗೆ ಹೋಗಿ ಪರಮೇಶ್ವರ ಮಧ್ಯಸ್ಥರ ಜತೆ ಮಾತುಕತೆಯಾಡಿದೆ. ಅದು ಹೃದಯವಿದ್ರಾವಕ ವ್ಯಥೆಯ ಕಥೆ. ಈ ಕಥೆಯನ್ನು ಕಥಾಶೈಲಿಯಲ್ಲಿಯೇ ಬರೆಯುವ ಮನಸ್ಸಾಯಿತು. ಮುಂಜಾನೆ ನಾಲ್ಕು ಗಂಟೆಗೆ ಪೆನ್ನು ಹಿಡಿದವನು ಬರೆದು ಮುಗಿಸಿದಾಗ ಬೆಳಗ್ಗಿನ ಏಳು ಗಂಟೆ. ಪೆನ್ನು ಕೆಳಗಿಡುತ್ತಿರುವಂತೆಯೇ ಕಣ್ಣು ತೇವ ತೇವ! ಶುಕ್ರವಾರದ ‘ವಿಜಯ ಕರ್ನಾಟಕ’ದ ಈ ಸಿನಿಮಾ ಪುಟ ‘#ಸಿನಿ_ವಿಜಯ‘ ಮಾರುಕಟ್ಟೆಗೆ ಹೋಗುತ್ತಿರುವಂತೆಯೇ ಏನೋ ಸಂಚಲನ. ಈ ಶೈಲಿಯ ಬರಹ ಎಷ್ಟೊಂದು ಜನಪ್ರಿಯವಾಯಿತೆಂದರೆ ಒಂದು ಹೊಸ ವರ್ಗದ ಸಿನಿಮಾ ಓದುಗರು ಸೃಷ್ಟಿಯಾಗಿ ಬಿಟ್ಟಿದ್ದರು! ನನ್ನ ಮುಂದೆ ಹೊಸದೊಂದು ಲೋಕ ತೆರೆದುಕೊಂಡಿತ್ತು!
ನಿಜ ಹೇಳಬೇಕೆಂದರೆ, ನಾನು ಬರೆದ ಈ ಶೈಲಿಯ ಬರಹಕ್ಕೊಂದು ಅಂಕಣದ ಹೆಸರಿರಲಿಲ್ಲ. ಈ ಹೆಸರನ್ನು ನನಗೆ ಸೂಚಿಸಿದವರು ‘ಶಂಖನಾದ’ ಚಿತ್ರದ ನಿರ್ಮಾಪಕರೂ ಆದ ನಿರ್ದೇಶಕ ಉಮೇಶ್ ಕುಲಕರ್ಣಿ! ಇವರು ದೂರದರ್ಶನದ ಕಾರ್ಯಕ್ರಮವೊಂದನ್ನು ಚಿತ್ರೀಕರಿಸಲೆಂದು ‘ವಿಜಯ ಕರ್ನಾಟಕ’ ಆಫೀಸಿಗೆ ಬಂದು ವ್ಯಂಗ್ಯಚಿತ್ರಕಾರರನ್ನು ಸಂದರ್ಶಿಸುತ್ತಿದ್ದಾಗ ನಾನು ಇವರ ಕಣ್ಣಿಗೆ ಬಿದ್ದೆ. ಹತ್ತಿರ ಬಂದು ನನ್ನ ಬರಹಗಳಿಗಾಗಿ ಅಭಿನಂದಿಸಿದರು ಉಮೇಶ್ ಕುಲಕರ್ಣಿ. ನಂತರ ಹೇಳಿದರು : ‘ಇದು ಮೂಲೆಗೆ ತಳ್ಳುವಂಥಾ ಬರಹಗಳಲ್ಲ. ದಯವಿಟ್ಟು ಈ ಬರಹವನ್ನು ಧಾರಾವಾಹಿಯಾಗಿ ಪ್ರಕಟಿಸಿ ಮತ್ತು ಇದಕ್ಕೆ ‘ಚದುರಿದ ಚಿತ್ರಗಳು’ ಎಂಬ ಹೆಸರನ್ನಿಟ್ಟು ಅಂಕಣ ಮುಂದುವರಿಸಿ…’ – ಇಷ್ಟು ಹೇಳಿ ಹೊರಟು ಹೋದರು ಕುಲಕರ್ಣಿ ಸಾರ್. ಮಾರನೇ ಶುಕ್ರವಾರದಿಂದಲೇ ಆರಂಭವಾಯಿತು ನೋಡಿ : ‘ಚದುರಿದ ಚಿತ್ರಗಳು’ ಅಂಕಣ. ಈ ಅಂಕಣ ಪ್ರಕಟಣೆ ಆರಂಭಿಸಿದ ನಂತರ ನಮ್ಮ ಬಾಸ್ ವಿಜಯ ಸಂಕೇಶ್ವರ ಅವರು ಪತ್ರವೊಂದನ್ನು ಬರೆದು ನನ್ನನ್ನು ಅಭಿನಂದಿಸಿದರು. ಆ ಪತ್ರವನ್ನು ಒಂದು ಅಮೂಲ್ಯ ಸರ್ಟಿಫಿಕೇಟ್’ನಂತೆ ಈಗಲೂ ಜೋಪಾನವಾಗಿಟ್ಟು ಕೊಂಡಿದ್ದೇನೆ…
ಹೀಗೆ ಬರೆದ ಅಂಕಣ ವೈಯಕ್ತಿಕವಾಗಿ ನನಗೆ ಹೆಸರು ತಂದು ಕೊಟ್ಟಂತೆಯೇ ಪತ್ರಿಕೆಗೂ, ಸಂಸ್ಥೆಗೂ ಭರಪೂರ ಹೆಸರು ತಂದುಕೊಟ್ಟಿತು. ಇವುಗಳಲ್ಲಿ ಆಯ್ಕೆ ಮಾಡಿಕೊಂಡ ಕೆಲವು ಲೇಖನಗಳ ಸಂಗ್ರಹವನ್ನು ಇಂದ್ರಜಿತ್ ಲಂಕೇಶ್ ತಮ್ಮ ‘ಲಂಕೇಶ್ ಪತ್ರಿಕೆ ಪ್ರಕಾಶನ’ ಮೂಲಕ ಪುಸ್ತಕ ಪ್ರಿಂಟ್ ಮಾಡಿಸಿ ಉಪಕರಿಸಿದರು. ‘ಚದುರಿದ ಚಿತ್ರಗಳು-ಚಿಗುರಿದ ಕನಸುಗಳು’ ಎಂಬ ಹೆಸರಿನಲ್ಲಿ ಪ್ರಕಟವಾದ ಈ ಪುಸ್ತಕಕ್ಕೆ ಕರ್ನಾಟಕ ಸರ್ಕಾರದ ‘#ಸಿನಿಮಾ_ಪುಸ್ತಕ_ಸಾಹಿತ್ಯ_ಪ್ರಶಸ್ತಿ‘ ಲಭ್ಯವಾಯಿತು…
– ಈ ಖುಷಿಯ ನೆನಪುಗಳನ್ನು ಹತ್ತು ವರ್ಷಗಳ ನಂತರ ನಿಮ್ಮ ಜತೆ ಹಂಚಿಕೊಳ್ಳಬೇಕೆಂದೆನಿಸಿತು, ಹಂಚಿಕೊಂಡಿದ್ದೇನೆ…ಸ್ವೀಕರಿಸಿ…
- ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)