ದಾರಿಯ ತೋರಿದ ಎಲ್ಲ ಗುರುವರ್ಯರಿಗೆ ಗುರು ಪೂರ್ಣಿಮೆಯ ಶುಭಾಶಯಗಳನ್ನು ಕೋರುತ್ತಾ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಸುಂದರ ಕವನ ನಿಮ್ಮೆಲ್ಲರ ಮುಂದೆ…
ಅರಿವನು ತೋರಿದ
ಗುರುವನು ನೆನೆಯುತ
ಮೊರೆಯಿಡೆ ಸಗ್ಗದ ಸಾರವಿದೆ
ನೆರವಿಗೆ ನಿಲ್ಲುತ
ಮಿರಮಿರ ಹೊಳೆಸುತ
ಪೊರೆದಿಹ ದೇವಗೆ ಶರಣೆಂದೆ
ಬಾರದ ಮನಸಿಗು
ಬೀರುತ ಕಂಪನು
ಧಾರೆಯನೆರೆಯುತ ಗುರುರಾಯ
ನೇರದಿ ನಡೆಯಲು
ತೀರವ ಸೇರಲು
ದಾರಿಯ ತೋರಿದ ಗುರುದೇವ
ಜೀವನವೆಲ್ಲವ
ಪಾವನಮಾಡುತ
ಭೂವನದೊಳಗಡೆ ಹೆಸರುಳಿಸಿ
ಬೇವನೆ ತಿನ್ನಿಸಿ
ಜೀವನ ಸೃಷ್ಟಿಸಿ
ನೋವನು ತಾಳುವ ಬಲಗೊಳಿಸಿ
ಕತ್ತಲು ಮುತ್ತಲು
ಸುತ್ತಲು ಬೆಳಕನು
ಮೆತ್ತಗೆ ಮನದಲಿ ಬೆಳಗಿದರು
ಕೆತ್ತುತ ಶಿಲೆಯನು
ಮೆತ್ತುತ ಬುದ್ದಿಯ
ಗತ್ತಲಿ ಬಾಳಲು ಕಲಿಸಿದರು
ಗುರಿಯನು ಮುಟ್ಟಲು
ಗುರುವಿನ ಶಕ್ತಿಯೆ
ಕರವನು ಮುಗಿಯುವೆ ಭಕ್ತಿಯಲಿ
ಅರಿವಿನ ಹೊತ್ತಗೆ
ಹರಿಸುತ ಬಾಳಲಿ
ಬೆರೆಸಿದ ಗುರುವಿಗೆ ಬಾಗುವೆನು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
