‘ನಾನೇ’ ಅಹಃನ್ನು ಬಿಟ್ಟು ನನ್ನೊಳಗೆ ನಾನು ಹುಡುಕುತ್ತಿರುವೆ ಎನ್ನುತ್ತಾ ಅಹಂನ ಕುರಿತಾಗಿ ಕವಿ ಶ್ರೇಯಸ್ ಪರಿಚರಣ್ ಅವರು ಬೆರೆದ ಕವನವಿದು, ಓದಿ ಪ್ರೋತ್ಸಾಹಿಸಿ…
ಇಗೋ… ಈ ದರಿದ್ರ ಫೋನ್ ಇಟ್ಟೇ ಬಿಟ್ಟೆ!!!
ಬಾಗಿಲ ತೆರೆದೆ ಕೂಡಲೇ ಹೊರಗೆ ಬಂದೆ ;
ಬಿಸಿಲೇರ್ತಿದೆ ಇರ್ಲಿ ಆಯಿತು ಪರವಾಗಿಲ್ಲ
ಕಾದರೆ ಮಳೆ- ನೆರಳು- ನೆಲೆ ತಂಪು ಸಿಗತ್ತಲ್ಲ
ಗುಹೆಯಲ್ಲೇ ನನ್ನಾತ್ಮದ ಪ್ರತಿಷ್ಠಾಪನೆಯಿಲ್ಲ!!
ವರ್ಷಗಳು ಬಿಸಿಲಿನ ತಂಗಾಳಿಯ ಮಳೆಯ
ನೆರಳ ಬೆಳಕಿನ ಅಳುವಿನ ನಗುವಿನ
ಛಾಯಾಚಿತ್ರಗಳೇ ಬರೀ ‘ನೆರಳುಗಳೇ’!
ಸಲ್ಲಲಿಲ್ಲ ಅಸ್ಲಿಗೆ ಗೌರವ ನನಗೇ ಪ್ರಕೃತಿಗೆ
ಇಗೋ… ನೋಡಿ ಕಾಣೋಲ್ಲ ಈ EGO
‘ನಾನೇ’ ಗೆಲ್ಲುವುದಿಲ್ಲ ಸದಾ ಎಂದಿಗೂ
ತಗ್ಗಿಸಬೇಕು ತಲೆ ಹಿರಿದಾದ ಶಕ್ತಿಗೆ
ನನ್ನ ಸೃಷ್ಟಿ ನನ್ನೇ ಕಟ್ಟಿಹಾಕಿದ ಬಗೆಗೆ
ಅನಿಕೇತನನಾಗಲಾರದ ನೋವಿಗೆ
ಯಾವ ಗೆಲುವು ನನ್ನದಾಗದ ಬೇಗುದಿಗೆ
ನನ್ನೊಳಗೆ ನಾನೇ ಹೊಗಲಾರದ ನ್ಯೂನತೆಗೆ
am lost to myself ನನಗೆ ಗೊತ್ತಿದೆ
ನಮಿಸುವೆ ವಿನಯದಿ ಇದೇ ಈ ಗಳಿಗೆ
ಈ ಮುಂದೆ ಹುಡುಕುತ್ತೇನೆ ಆ ಎಲ್ಲವನ್ನೂ
ಇಡೀ ‘ನನ್ನತ್ವ’ ದ ಬಿಡಿಬಿಡಿ ಭಾಗಗಳನ್ನು
ನನ್ನಿದಾಗ್ಲಿ ಸಮಗ್ರ ನನ್ನಾತ್ಮ ವಿಮರ್ಶೆಯು
- ಶ್ರೇಯಸ್ ಪರಿಚರಣ್