ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ (ಕಾರ್ಯಪ್ಪ), ನವರು ನಮ್ಮ ಹೆಮ್ಮೆಯ ಕನ್ನಡಿಗರು. ಬಾಣಾವರ ಶಿವಕುಮಾರ್ ಅವರ ಲೇಖನಿಯಲ್ಲಿ ಅರಳಿದ ಕೆ ಎಂ ಕಾರ್ಯಪ್ಪ .ಮುಂದೆ ಓದಿ…
ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪನವರು (೧೮೯೯-೧೯೯೩) ಭಾರತದ ಸೈನ್ಯದ ಮಹಾ ದಂಡನಾಯಕರಾಗಿದ್ದು, ಕನ್ನಡಿಗರಾಗಿದ್ದರು. ಅವರ ಪೂರ್ತಿ ಹೆಸರು ಕೊಡಂದೆರ ಮಾದಪ್ಪ ಕಾರಿಯಪ್ಪ (ಕಾರ್ಯಪ್ಪ). ಅವರು ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ೨೮ ಜನವರಿ ೧೮೯೯ ರಲ್ಲಿ ಜನಿಸಿದರು. ಅನೇಕ ಯುದ್ಧಗಳಲ್ಲಿ ಪಾಲ್ಗೊಂಡು ತಮ್ಮ ಶೌರ್ಯವನ್ನು ಪ್ರದರ್ಶಿಸಿದ ಅವರು ಶಿಸ್ತಿಗೆ ತುಂಬಾ ಬೆಲೆ ಕೊಡುತ್ತಿದ್ದರು.

ಫೋಟೋ ಕೃಪೆ : The Economics times
ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಅಯೂಬ್ ಖಾನರು ಸ್ವಾತಂತ್ರ್ಯ ಪೂರ್ವದಲ್ಲಿ ಕಾರ್ಯಪ್ಪ ನವಿರು ಅಡಿಯಲ್ಲಿ ಸೈನ್ಯಾಧಿಕಾರಿಯಾಗಿದ್ದವರು. ೧೯೫೩ ರಲ್ಲಿ ಕಾರ್ಯಪ್ಪನವರು ನಿವೃತ್ತರಾದ ಮೇಲೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿನಲ್ಲಿ ಭಾರತದ ಹೈಕಮಿಷನರ್ ಆಗಿದ್ದರು. ಸ್ವಾತಂತ್ರ್ಯಾನಂತರ ಭಾರತದಲ್ಲಿ ಸಂಭವಿಸಿದ ಗಲಬೆ, ಅಶಾಂತಿ ಇವುಗಳನ್ನು ನೋಡಿದ ಕಾರ್ಯಪ್ಪನವರು ನಮ್ಮ ಸೈನಿಕರು ಯುದ್ಧ ಭೂಮಿಯಲ್ಲೇ ಹೆಚ್ಚಿನ ಶಾಂತಿ ಪಡೆಯುತ್ತಾರೆ ಎಂದು ಯಾವಾಗಲೂ ಹೇಳುತ್ತಿದ್ದರು. ನಂತರ ಅವರು ತಮ್ಮ ವಿಶ್ರಾಂತ ಜೀವನವನ್ನು ಕನ್ನಡ ನೆಲದಲ್ಲೇ ಕಳೆದರು.

೧೯೬೫ರ ಯುದ್ಧವಾಗುತ್ತಿದೆ. ಆಗ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಅಯೂಬ್ ಖಾನರಿಗೆ ಹೇಗಾದರೂ ಮಾಡಿ ಭಾರತವನ್ನು ಮಣಿಸಲೇಬೇಕೆಂಬ ಛಲವಿತ್ತು. ಆಗ ಭಾರತೀಯ ವಾಯುಪಡೆಯಲ್ಲಿ ಕಾರ್ಯಪ್ಪನವರ ಪುತ್ರ ಕೆ. ಸಿ. ಕಾರ್ಯಪ್ಪ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ನಡೆಸುತ್ತಿದ್ದ ಯುದ್ಧ ವಿಮಾನ ಪಾಕಿಸ್ತಾನದ ಗಡಿ ದಾಟಿ ಬಾಂಬ್ ಸುರಿಸಲು ಪ್ರಾರಂಭಿಸಿತು. ಆದರೆ ಪಾಕಿಸ್ತಾನ ಸೇನೆಯ ಸೈನ್ಯಾಧಿಕಾರಿ ಮೇಜರ್ ಜನರಲ್ ಜೈದಿ ಕಾರ್ಯಪ್ಪನ ಯುದ್ಧ ವಿಮಾನವನ್ನು ಹೊಡೆದು ಉರುಳಿಸಿದ್ದೇ ಅಲ್ಲದೆ, ಕಾರ್ಯಪ್ಪನನ್ನು ಯುದ್ಧ ಖೈದಿಯನ್ನಾಗಿ ಬಂಧಿಸಿದ್ದ.

ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಮತ್ತು ಅವರ ಮಗ ಕೆಸಿ ಕಾರ್ಯಪ್ಪ ( ಫೋಟೋ ಕೃಪೆ : The Economics times)
ಇದನ್ನು ಅರಿತ ಜನರಲ್ ಕಾರ್ಯಪ್ಪ ಅವರಿಗೆ ಬೇಕಾಗಿದ್ದ ಅಧಿಕಾರಿಯೋರ್ವರು ಜ. ಕಾರ್ಯಪ್ಪನವರಿಗೆ ಸಂದೇಶ ಕಳುಹಿಸಿ ಅಲ್ಲಿ ಅವರ ಮಗನನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆಯೆಂದೂ, ಅಪೇಕ್ಷೆ ಪಟ್ಟರೆ ಬಿಡುಗಡೆಗೊಳಿಸಿ ಭಾರತಕ್ಕೆ ಹಿಂದಿರುಗಿ ಕಳುಹಿಸುವುದಾಗಿಯೂ ತಿಳಿಸಿದರು.
ಅದಕ್ಕೆ ಜ. #ಕಾರ್ಯಪ್ಪನವರ ಉತ್ತರ ತುಂಬಾ ಮಾರ್ಮಿಕವಾಗಿಯೂ ಅನುಕರಣೀಯವೂ ಆಗಿತ್ತು. ಅವರು ಉತ್ತರಿಸಿದ್ದು ಹೀಗೆ. “ನಿಮ್ಮ ಸದ್ಭಾವನೆಗೆ ಕೃತಜ್ಞತೆಗಳು. ನೀವು ಎಲ್ಲ ಭಾರತೀಯ ಸೈನಿಕರನ್ನು ಹೇಗೆ ನೋಡಿಕೊಳ್ಳುತ್ತೀರೋ ಅದೇ ರೀತಿ ನನ್ನ ಮಗನನ್ನೂ ನೋಡಿಕೊಳ್ಳಿ. ಅವನಿಗೆ ವಿಶೇಷ ಸವಲತ್ತುಗಳು ಬೇಡ. ಬೇರೆ ಸೈನಿಕರನ್ನು ಬಿಡುಗಡೆಗೊಳಿಸಿದಾಗಲೇ ನನ್ನ ಮಗನನ್ನೂ ಬಿಡುಗಡೆ ಮಾಡಿ. ‘ಭಾರತೀಯ ಸೈನಿಕರೆಲ್ಲರೂ ನನ್ನ ಮಕ್ಕಳೇ” ಇದು ಜ. ಕಾರ್ಯಪ್ಪನವರ ವ್ಯಕ್ತಿತ್ವ ಮತ್ತು ಸೈನಿಕ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.
- ಬಾಣಾವರ ಶಿವಕುಮಾರ್ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು)
