ನೀನಾಸಂ ಸಂಸ್ಥೆಯ ಸಂಸ್ಥಾಪಕರಾದ ಕೆ.ವಿ.ಸುಬ್ಬಣ್ಣ ನಮ್ಮ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಹೆಗ್ಗೋಡಿನವರು. ಅವರ ಜನ್ಮ ಫೆಬ್ರುವರಿ 20, 1932 ರಲ್ಲಿ ಆಯಿತು. ಇಂದು ಅವರ 93ನೇ ಹುಟ್ಟು ಹಬ್ಬದ ಸ್ಥರಣೆ ಈ ಸಂದರ್ಭದಲ್ಲಿ ಅರುಣ್ ಪ್ರಸಾದ್ ಅವರ ನೆನಪುಗಳನ್ನು ದಾಖಲಿಸಿದ್ದಾರೆ. ತಪ್ಪದೆ ಮುಂದೆ ಓದಿ…
1983ರಲ್ಲಿ ನಮ್ಮ ಊರಿಂದ ನಾವೆಲ್ಲ ಗೆಳೆಯರು ಸೈಕಲ್ ಮೇಲೆ ಹೆಗೋಡಿಗೆ ಹೋಗಿ ಅಲ್ಲಿ ‘ಸಣದ ಬಟ್ಟೆ’ ಎಂಬ ನಾಟಕ ನೋಡಿದ ನೆನಪು. ಸಾಗರದಲ್ಲಿ ಚಿನ್ನದ ಗಣಿ ವಿರೋಧಿ ಹೋರಾಟ, ಸ್ವತಃ ಅಡಿಕೆ ಬೆಳೆಗಾರರಾದರೂ ಕ್ಯಾನ್ಸರ್ ಮಾರಿ ಗುಟ್ಕಾ ರದ್ದು ಮಾಡುವ ವಿಚಾರಗಳು ಅವರ ಸಾರ್ಜನಿಕ ಹಿತಾಸಕ್ತಿಗಳು ಹೀಗೆ ಅವರ ಹತ್ತಾರು ವಿಚಾರಗಳು ನನಗೆ ಕಿ.ವಿ. ಸುಬ್ಬಣ್ಣರ ಬಗ್ಗೆ ಅಭಿಮಾನಕ್ಕೆ ಕಾರಣವಾಯಿತು.
ಹಾಗಾಗಿ ಅವರ ಹೆಸರಲ್ಲಿ ರಂಗ ಮಂದಿರ ನಿಮಿ೯ಸಲು ಯೋಚಿಸಿ, ಆನಂದಪುರಂ ಸಮೀಪದ ಮುರುಘಾಮಠದ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ರಂಗ ಮಂದಿರ ನಿಮಿ೯ಸಿದೆವು. ಆಗ ಹಣ ಮಂಜೂರಾಗದಿದ್ದರೂ ಆನಂದಪುರದ ಜೆ ಸಿ ಬಿ ಚಂದ್ರಶೇಖರ್ ಅಂಬಲಿಗೋಳ ಅವರು ನಮ್ಮ ಒಳ್ಳೆಯ ಉದ್ದೇಶ ಅರಿತು ಕಾಮಗಾರಿ ಮುಗಿಸಿ, ನಂತರ ಹಣ ಪಡೆದರು.

ಕೆ ವಿ ಸುಬ್ಬಣ್ಣ ಜೊತೆ ಲೇಖಕರಾದ ಅರುಣ್ ಪ್ರಸಾದ್ ಅವರು
ಉದ್ಘಾಟನೆಗಾಗಿ ಕೆ.ವಿ.ಸುಬ್ಬಣ್ಣರ ಭೇಟಿ ಮಾಡಿದೆ. ತಮ್ಮ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿದ್ದೇನೆ ಅ೦ದಾಗ ಸ್ವಲ್ಪ ಗಂಭೀರವಾದರು. ಅವರು ಹೆಗ್ಗೋಡಿನಲ್ಲಿ ನಿಮಿ೯ಸಿದ ರಂಗಮಂದಿರಕ್ಕೆ ಶಿವರಾಮ ಕಾರಂತ ರಂಗಮಂದಿರ ಎಂದು ನಾಮಕರಣ ಮಾಡಲು ಶಿವರಾಮ ಕಾರಂತರ ಜೊತೆ ಪತ್ರದ ಮೂಲಕ ಚರ್ಚಿಸಿದ್ದು ನೆನಪಿಸಿದೆ, ಆಗ ಅವರು ನನ್ನ ಓದಿನ ಹವ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತು ಅವರ ಹೆಸರನ್ನ ನಮ್ಮ ಮುರುಘಾ ಮಠದ ರಂಗ ಮಂದಿರಕ್ಕೆ ಇಡಲು ಒಪ್ಪಿಕೊಂಡರು.ನಾನೇನೋ ಲಿಖಿತ ಅನುಮತಿ ಪಡೆದೆ. ಆದರೆ ಅವರು ಅವರ ಹೆಸರಿನ ರಂಗಮಂದಿರ ಉದ್ಘಾಟನೆಗೆ ಭಾಗವಹಿಸಲು ಇಷ್ಟಪಡಲಿಲ್ಲ.
ಅವತ್ತು ನಾವೆಲ್ಲ ಸೇರಿ ಉದ್ಘಾಟಿಸಿದ ‘ಕೆ.ವಿ.ಸುಬ್ಬಣ್ಣ ರಂಗ ಮಂದಿರ’ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಮುರುಘಾಮಠದ ಸಕಾ೯ರಿ ಶಾಲಾ ಆವರಣದಲ್ಲಿರುವುದು ನಾವೆಲ್ಲ ಆ ಮಹಾನ್ ಸಾಧಕರಿಗೆ ನೀಡಿದ ಗೌರವ ಮಾತ್ರ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು
