ಕರುನಾಡ ಕಲಾವಿದರನ್ನೂ ಪ್ರೀತಿಸೋಣ, ಬೆಳೆಸೋಣ

ಚಂದನವನದಲ್ಲಿ ಹೊರ ರಾಜ್ಯದ ಕಲಾವಿದರಿಗೆ ಮಣೆ ಹಾಕುತ್ತಿರುವುದು ಸರ್ವೇ ಸಾಮಾನ್ಯದ

ವಿಷಯ. ಇಂದಿನ ಪ್ರತಿ ಸಿನಿಮಾದ ಹಾಡಿನಲ್ಲಿ, ನಟನೆಯಲ್ಲಿ ಹೊರ ರಾಜ್ಯದ ಗಾಯಕರು, ನಟಿಯರನ್ನು ಕರೆ ತರುವುತ್ತಿರುವುದನ್ನು ನೋಡುತ್ತಿದ್ದೇವೆ. ಕನ್ನಡ ಸಿನಿಮಾದಲ್ಲಿ ಕನಿಷ್ಠ ಪಕ್ಷ ಐಟ೦ ಹಾಡಿಗೆ ಅವರುಗಳು ಹೆಜ್ಜೆಯಾದರೂ ಹಾಕಬೇಕು. ಅವರು ಹಾಕುವ ಹೆಜ್ಜೆಗೆ ಕೋಟಿ ಕೋಟಿ ದುಡ್ಡಾಗಲಿ ನಿರ್ಮಾಪಕರು ಯೋಚಿಸುವುದಿಲ್ಲ. ಆದರೆ ನಮ್ಮ ಕನ್ನಡದ ಕಲಾವಿದನೊಬ್ಬ ಸಿನಿಮಾದಲ್ಲಿ ಆರಂಭದಿಂದ ಕೊನೆವರೆಗೂ ಬಣ್ಣ ಹಚ್ಚಿರಲಿ ಅವರಿಗೆ ಸಂಭಾವನೆ ನೀಡಲು ಮೀನಾ- ಮೇಷ ಎಣಿಸುವ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರಿದ್ದಾರೆ.

ಆದರೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಒಂದು ಸಂತೋಷವೇನೆಂದರೆ ಕನ್ನಡದ ನಾಯಕ ನಟರುಗಳು ಮಾತ್ರ ತಮ್ಮ ಖುರ್ಚಿಯನ್ನು ಬೇರೆ ರಾಜ್ಯದ ನಾಯಕರಿಗೆ ಬಿಟ್ಟುಕೊಡದೆ ಭದ್ರವಾಗಿ ಹಿಡಿದುಕೊಂಡಿದ್ದಾರೆ.

ನೀನಾಸಂ ಸತೀಶ ಅವರ ಅಯೋಗ್ಯ ಸಿನಿಮಾಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಹರಿಬಿಟ್ಟಿದ್ದರು. ಅಯೋಗ್ಯ ಸಿನಿಮಾ ಕರ್ನಾಟಕಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದರಲ್ಲಿ ಇನ್ನೊಂದು ಮಾತಿಲ್ಲ. ಅದೇ ಈ ಸಿನಿಮಾವನ್ನು ನಮ್ಮ ಪಕ್ಕದ ರಾಜ್ಯದಲ್ಲಿ ಬಿಡುಗಡೆ ಮಾಡಲು ಮುಂದಾದಾಗ, ಅಲ್ಲಿನ ಚಿತ್ರ ಮಂದಿರಗಳು ಅಡ್ಡಿಪಡಿಸಿದವು. ಇದರ ಕಹಿ ಅನುಭವವನ್ನು ಸತೀಶವರು ಹೇಳಿಕೊಂಡಾಗ ನಮ್ಮೆಲ್ಲರ ಮನಸ್ಸು ತಲ್ಲಣಗೊಂಡಿತು. ನಮ್ಮ ರಾಜ್ಯದಲ್ಲಿ ತಮಿಳು, ತೆಲುಗು ಸೇರಿದಂತೆ ಸಾಕಷ್ಟು ಬೇರೆ ಭಾಷೆಗಳಿಗೆ ಸ್ವಾಗತಿಸಿದ್ದೇವೆ ಮತ್ತು ಪ್ರೋತ್ಸಾಹಿಸಿದ್ದೇವೆ. ಅದೇ ನಿರೀಕ್ಷೆಯನ್ನು ಹೊರ ರಾಜ್ಯದಲ್ಲಿ ಆಸೆ ಪಡುವುದು ತಪ್ಪಲ್ಲ.

ಇದೆ ರೀತಿ ನಮ್ಮ ಕನ್ನಡದ ಕಲಾವಿದನೊಬ್ಬನ ನ್ನು ತಮಿಳು ಚಿತ್ರರಂಗ ಹೊರ ಹಾಕಿದ್ದು ಕನ್ನಡಿಗರಿಗೆ ಇನ್ನೊಂದು ಆಕ್ರೋಶದ ವಿಷಯವಾಯಿತು. ಹೀಗೆ ಒಂದರ ಮೇಲೆ ಒಂದರಂತೆ ಹೊರ ರಾಜ್ಯದ ದಬ್ಬಾಳಿಕೆಗೆ ಕನ್ನಡ ಚಿತ್ರರಂಗ ನಿರಂತರವಾಗಿ ನಲುಗುತ್ತಿದೆ. ಇದಕ್ಕೆ ಕಾರಣ ಪರೋಕ್ಷವಾಗಿ ನಾವೇ ಎಂದೆನ್ನಿಸುತ್ತದೆ. ಹೊರಗಿನ ಕಲಾವಿದರಿಗೆ ಕೊಡುವ ಸಂಭಾವನೆ, ಗೌರವ ನಮ್ಮ ತವರಿನ ಕಲಾವಿದರಿಗೆ ಕೊಟ್ಟರೆ ನಮ್ಮ ಕನ್ನಡ ಚಿತ್ರೋದ್ಯಮ ಇನ್ನಷ್ಟು ಬೆಳೆಸಬಹುದು.

ಕನ್ನಡ ಸಿನಿಮಾಗಳ ಯಶಸ್ಸಿಗೆ ಕೇವಲ ಚಿತ್ರರಂಗದವರಷ್ಟೇ ಅಲ್ಲ. ನಮ್ಮ ಮಾಧ್ಯಮ ಮಿತ್ರರು ಕೈ ಜೋಡಿಸುವ ಕೆಲಸ ಮಾಡಬೇಕಿದೆ. ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮದಲ್ಲಿ ಹೊರಗಿನ ಸಿನಿಮಾಗಳ ಬಣ್ಣ-ಬಣ್ಣದ ವರ್ಣನೆಗಳು ಪ್ರೇಕ್ಷಕನನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಬಾರದು. ಬದಲಾಗಿ ನಮ್ಮ ಕನ್ನಡ ಸಿನಿಮಾಗಳ ಸೋಲು-ಗೆಲುವುಗಳ ಅರಿವು ಪ್ರೇಕ್ಷಕರಲ್ಲಿ ಮೂಡಿಸುವ ಪ್ರಯತ್ನ ನಮ್ಮ ಮಾಧ್ಯಮ ಮಿತ್ರರಿಂದ ಆದರೆ ಉತ್ತಮ.

ಇನ್ನೂ ಮಲ್ಟಿಪ್ಲೆಸ್ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ನಿರಂತರ ಪ್ರಸಾರವಾಗಬೇಕು. ಮಲ್ಟಿಪ್ಲೆಸ್ ಗಳಲ್ಲಿ ಸಿನಿಮಾ ಟಿಕೆಟ್ ಗಳಿಗಿಂತ ಅಲ್ಲಿನ ಪಾಪ್ ಕಾರ್ನ್,ಕೂಲ್ ಡ್ರಿಂಕ್ಸ್ ವೆಚ್ಚ ಹೆಚ್ಚಾಗಿದ್ದು, ಅದು ಕಮ್ಮಿಯಾದರೆ ಕನ್ನಡಿಗರು ಕುಟುಂಬದ ಸಮೇತ ಕನ್ನಡ ಸಿನಿಮಾಗಳನ್ನು ಹೆಚ್ಚು ಹೆಚ್ಚು ನೋಡಲು ಮುಂದಾಗುತ್ತಾರೆ. ಆದರೆ ಮಲ್ಟಿಫ್ಲೆಸ್ ಗಳಲ್ಲಿ ಕನ್ನಡ ಸಿನಿಮಾಗಳಿಗಿಂತ ಬೇರೆ ಭಾಷೆ ಸಿನಿಮಾಗಳ ಪ್ರದರ್ಶನ ಹೆಚ್ಚು. ಇದು ಹೀಗೆ ಮುಂದೊರೆದರೆ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿಯೇ

ಕನ್ನಡ ಸಿನಿಮಾ ತೆರೆಕಾಣಲು ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದರೂ ಬರಬಹುದು.

ಅಷ್ಟೇ ಅಲ್ಲದೆ ಈಗ ಹೊರಗಿನ ನಾಯಕರು ಕನ್ನಡದಲ್ಲಿ ಹಾಡುವುದರ ಮೂಲಕ ನಮ್ಮ ಬೆಳ್ಳೆತೆರೆಯನ್ನು ಈಗಾಗಲೇ ಪ್ರವೇಶಿಸಿದ್ದಾರೆ. ಕನ್ನಡದ ನಾಯಕರೇ ನಿಮ್ಮ ಉದಾರತೆ, ಒಳ್ಳೆಯತನ ನಮಗೇಲ್ಲರಿಗೂ ಗೊತ್ತಿದೆ. ಆದರೆ ಚಂದನವನದಲ್ಲಿ ಉಳಿದಿರುವುದು ನಾಯಕನ ಸ್ಥಾನವೊಂದೇ ಅದನ್ನು ಭದ್ರಪಡಿಸಿ ಕೊಳ್ಳಬೇಕಿದೆ.

ಪ್ರೇಕ್ಷಕರು ಹೊಸ ನಿರ್ದೇಶಕ, ನಾಯಕ, ನಾಯಕಿ ಎಂದು ಮೂಗು ಮುರಿಯದೆ, ಒಳ್ಳೆಯ ಸಿನಿಮಾಗಳು ಬಂದಾಗ ಅದಕ್ಕೆ ನ್ಯಾಯ ಕೊಟ್ಟಿದ್ದಾರೆ ಮತ್ತು ಹೊಸ ಕಲಾವಿದರನ್ನು ಬೆಳೆಸಿದ್ದಾರೆ. ಹೀಗಿರುವಾಗ ಹೊರಗಿನ ಕಲಾವಿದರಿಗೆ ಮಣೆ ಹಾಕುವುದರಲ್ಲಿ ಅರ್ಥವಿಲ್ಲ. ಅವರಿಗೆ ಮಣೆ ಹಾಕುವುದು ಎಲ್ಲಿಯವರೆಗೂ ನಮ್ಮಲ್ಲಿ ನಿಲ್ಲುವುದಿಲ್ಲವೋ… ಅಲ್ಲಿಯವರೆಗೂ ನಮ್ಮ ಕರುನಾಡ ಕಲಾವಿದರಿಗೆ ಉಜ್ವಲ ಭವಿಷ್ಯ ಸಿಗದು. ಮೊದಲು ನಮ್ಮ ಕಲಾವಿದರನ್ನು ಪ್ರೀತಿಸೋಣ, ಬೆಳೆಸೋಣ…

#ಸನಮ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading