ನೈರಾಶ್ಯದ ಕಾರ್ಮೋಡಗಳ ನಡುವೆಯೇ ಭರವಸೆಯ ಸೂರ್ಯೋದಯವಾಗಬೇಕು ಅದಕಾದರು ಕಾವ್ಯ ಬರೆಯಬೇಕು. ಬರೆಯುತ್ತಲೇ ಬದುಕಬೇಕು. ಬದುಕುತ್ತಲೇ ಬರೆಯಬೇಕು. ಹೀಗೆ ಬದುಕಿ ಬರೆವ, ಬರೆಯುತ್ತ ಬದುಕುವ ಛಲವ ಬಲವ ಸದಾ ಒಲವಿಂದ ನನ್ನ ಈ ಜೋಗಿ ಜಂಗಮನ ಜೋಳಿಗೆ ತುಂಬುವವಳಿಗಾಗಿಯಾದರೂ..!!!
(ಮತ್ತೆ ಮತ್ತೆ ನನ್ನ ಬರಹಕ್ಕೆಳೆಸುವ ಅಕ್ಷರಗಳಕ್ಕರೆಯ ಎಲ್ಲ ಸಕ್ಕರೆಯ ಮನಸುಗಳಿಗೆ)
ಕವಿತೆ ಬರೆಯುವುದೇಕೆ
ನಿಲ್ಲಿಸಿದೆ ಎಂದೇಕೆ ಕೇಳಿದೆ?
ಎದೆಯ ಗೂಡ ನಿಗೂಢ
ದುಗುಡ ನಿನಗಿಂದು ಕೇಳದೆ?
***
ಖಾಲಿ ಹಾಳೆಗಳ ತುಂಬೆಲ್ಲ
ಮತ್ತದೇ ನಿಶ್ಯಬ್ಧ ಪದಗಳು
ತನಿಯೊಡೆಯದ ಭಾವಗಳಲಿ
ನಿಷ್ಪ್ರಂಪಚದ ಪಲುಕುಗಳು
***
ಉಡುಗಿಹೋದ ದನಿಯ ಜಾಡಲಿ
ನಿನಗೊಂದು ಮರೆಯದಾ ಹಾಡು
ಹೇಳು ಎಲ್ಲಿಂದ ಎರವಲು ತರಲಿ
ಚೈತ್ರ ಚಿಗುರದ ಕನಸಿನ ಪಾಡು
***
ಪರಾಗವಿರದ ಹೂವಿನೆದೆಯ ಬಗೆದು
ಒಲವ ರಾಗ ಸುಧೆಯ ಕಾಣಲಹುದೆ
ಮಾನುಷತೆಯೇ ಮರಣಿಸಿದ ಕಾಲಕೆ
ಕವಿತೆ ಜೀವಂತಿಕೆಯ ಸಾರಬಲ್ಲದೆ
***
ಕವಿಗಣ್ಣಿನ ಸೌಂದರ್ಯ ನೋಟಕೆ
ನೈರಾಶ್ಯದ ಕಡುಗತ್ತಲು ಕವಿದಂತಿದೆ
ಬರಿದೆ ಬರೆಯದೆ ನನಗೇ ನಾನೇ
ಹೇಳದೆ-ಕೇಳದೆ ಹೀಗೆಯೇ ಸುಮ್ಮನಾದೆ
- ರಾಜ್ ಆಚಾರ್ಯ
