ಆಸ್ಪತ್ರೆಯಲ್ಲಿ ಇದ್ದಾಗ ಅನಿಶ್ಚಿತ ಬದುಕು ಅನಿಸಿಬಿಟ್ಟಿತ್ತು. ಮೂರು ದಿನದ ಬದುಕಿನಲ್ಲಿ ಬರೀ ಕ್ರೋಧ, ಈರ್ಷ್ಯೆ, ಅನಾರೋಗ್ಯಕರ ಸ್ಪರ್ಧೆ ಯಾಕೆ ಬೇಕೆನಿಸಿತು. ಮುಂದೇನಾಯಿತು ತಪ್ಪದೆ ಓದಿ ಆಪ್ತಸಮಾಲೋಚಕಿ ಚಂಪಾ ಚಿನಿವಾರ್ ಅವರ ಜೀವನದ ಒಂದು ಅನುಭವ…
ಇದೇ ದಿನ ಒಂದು ವರ್ಷದ ಹಿಂದೆ ಆಸ್ಪತ್ರೆಯಲ್ಲಿ ಇದ್ದೆ. ಎರಡೂ ಮಂಡಿಗಳು ಆಪರೇಷನ್ ಆಯ್ತು. Knee replacement surgery. ಇದು major operation ಆಗಿತ್ತು. ಏಪ್ರಿಲ್ 3 ನೇ ತಾರೀಖು ಬಲ ಮಂಡಿ, 5 ನೇ ತಾರೀಖು ಎಡ ಮಂಡಿ ಒಟ್ಟಿಗೆ ಆಯಿತು.
ಇದು ನನ್ನ ಮರುಜನ್ಮವೇ ನನಗೆ. ಮಂಡಿ ನೋವಿಗೆ High blood pressure ಹಾಗು high diabeties ಎರಡೂ ಹಿಡಿತಕ್ಕೆ ಬರುತ್ತಿರಲಿಲ್ಲ. ನಾನು ಮದುವೆಯಾಗಿ ಬಂದಾಗಿನಿಂದ ಒಬ್ಬರೇ ಡಾಕ್ಟರ್ ಬಳಿ ಏನಾದರೂ ಹುಷಾರು ತಪ್ಪಿದಾಗ ಅವರಿಗೆ ತೋರಿಸುತಿದ್ದೆ. ಆದ ಕಾರಣ ನನಗೆ ಅವರು ಮಂಡಿ ನೋವಿನ ಬಗ್ಗೆ ಎಲ್ಲಾ ಪರೀಕ್ಷೆಗಳು ಮಾಡಿಸಿ ಕೊನೆಗೆ ಆಪರೇಷನ್ ಆಗಲೇಬೇಕು ಎಂದು ಹೇಳಿದರು. ಅವರ ಅಣತಿಯ ಮೇರೆಗೆ ಮತ್ತೂ ಇಬ್ಬರು ಆರ್ಥೋಪೆಡಿಕ್ ಡಾಕ್ಟರ್ ಬಳಿ ಸೆಕೆಂಡ್ ಅಂಡ್ ಥರ್ಡ್ opinion ತಗೊಂಡಾಗ, ಅವರೂ ಸಹ ಆಪರೇಷನ್ ಆಗಬೇಕು ಎಂದು ಹೇಳಿದರು.
ಬೆಂಗಳೂರಿನ ಹೆಸರಾಂತ ಸ್ಪೆಷಲಿಸ್ಟ್ ಬಳಿ ಆಪರೇಷನ್ ಮಾಡಿಸಿಕೊಳ್ಳುವುದಾಗಿ ಮನೆಯಲ್ಲಿ ತೀರ್ಮಾನ ಮಾಡಿಕೊಂಡೆವು. ಇದಕ್ಕೆ ನಾನು ಆರು ತಿಂಗಳಿಂದಲೂ mentally prepare ಆಗುತ್ತಾ ಬಂದೆ. ಕೆಲವರು ಧೈರ್ಯ ಹೇಳಿದರು, ಮತ್ತೂ ಕೆಲವರು ಉಚಿತ ಸಲಹೆಗಳನ್ನು ಕೊಡಲು ಮುಂದಾದರು, ಮತ್ತೂ ಕೆಲವರು ಬಹಳ ನೆಗಟೀವ್ ಹೇಳಲಿಕ್ಕೆ ಶುರುಮಾಡಿದರು. ಅಂಥವರಿಂದ ಬಹಳ ದೂರವಿದ್ದೆ. ಸ್ವಲ್ಪ ನೆಗಟೀವ್ ಅಂತ ತಿಳೀತಿದ್ದ ಹಾಗೆ ಮತ್ತೊಮ್ಮೆ ಕಾಲ್ ಮಾಡ್ತೀನಿ ಯಾರೋ ಬಂದರು ಎಂದು ಹೇಳಿ ಕಾಲ್ disconnect ಮಾಡ್ತಿದ್ದೆ. ದೇವರ ಮುಂದೆ ಕುಳಿತು ಅಳುವುದಷ್ಟೇ ಕೆಲಸವಾಗಿತ್ತು.

ಫೋಟೋ ಕೃಪೆ : ಗೂಗಲ್
ನನ್ನ ಆಪರೇಷನ್ ಮುಂಚೆ ಮಗಳು ಆಸ್ಟ್ರೇಲಿಯಾದಿಂದ ಬಂದಿದ್ದಳು, ಎಲ್ಲರ ಉಪದೇಶ ಮಗಳಿದ್ದಾಗಲೇ ಆಪರೇಷನ್ ಮಾಡಿಸಿಕೋ ಅನುಕೂಲ ಆಗುತ್ತದೆ ಎಂದರು. ಅವಳು ಅವರ ಅತ್ತೆ ಮನೆಯ function ಗೆ ಬಂದಿದ್ದಳು. ನನಗೆ ಅವಳಿಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. ಅವಳು ಹೊರಟಮೇಲೆ ಆಪರೇಷನ್ date fix ಮಾಡಿಸಿಕೊಂಡು ಬಂದಾಯ್ತು.
ಏಪ್ರಿಲ್ 2 ಅಡ್ಮಿಟ್ ಆದೆ, ಎಲ್ಲಾ formalities ಮುಗಿಸಿ ಮಾರನೇ ದಿನವೇ ಆಪರೇಷನ್ ಮಾಡುವುದಾಗಿ ಹೇಳಿದರು. ಸುಸೂತ್ರವಾಗಿ ಆಯಿತು. 24 ಗಂಟೆಗಳ ಕಾಲ ICU ವಾಸ ನಂತರ ವಾರ್ಡ್ ಗೆ ಬಂದಿದ್ದು ಮತ್ತೆ ಮರು ದಿನ ಮತ್ತೊಂದು ಮಂಡಿ ಆಪರೇಷನ್ ಆಯಿತು. ನನಗೆ ಪುನರ್ಜನ್ಮವಾಗಿತ್ತು. ನನ್ನ ಯಜಮಾನರು ಜೊತೆಯಲ್ಲಿಯೇ ಇದ್ದರು. ಮೂರು ವಾರಗಳು ಕೆಲಸಕ್ಕೆ ರಜಾ ಹಾಕಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಡಾಕ್ಟರ್ ಮನೆಯಲ್ಲಿ ನೋಡಿಕೊಳ್ಳಲು ಯಾರಿದ್ದಾರೆ ಎಂದು ಕೇಳಿದರು. ನನ್ನ ಕಣ್ಣಲ್ಲಿ ನೀರು ಬಂದಿತ್ತು, ಯಾರಿಲ್ಲ, ಭಗವಂತನೊಬ್ಬನೇ ಎಂದೆ. ಮನೆಗೆ ಬಂದ ಮೇಲೆ ದೇವರಿಗೆ ಕರುಣೆ ಬಂದಿರಬೇಕು ನನ್ನ ಮೇಲೆ ನನ್ನ ವಾರ್ಗಿತ್ತಿ ತಾಯಿಯಂತೆ ಬಂದು ನೋಡಿಕೊಂಡರು. ತೀರಿಸಲಾಗದ ಋಣ. ಆತ್ಮೀಯ ಗೆಳತಿಯರು ಸಾಂತ್ವಾನ ಹೇಳಿದರು. ಇನ್ನೂ ಕೆಲವು ಗೆಳತಿಯರು ಅಡುಗೆ, ತಿಂಡಿ ಮಾಡಿ ಬಡಿಸಿದರು. ಆಗ ಅನಿಸಿದ್ದು ನಾನೇ ಧನ್ಯೇ ಎಷ್ಟು ಜನರ ಸ್ನೇಹ ಸಂಪಾದಿಸಿರುವೆ ಎಂದು.
ನನ್ನ ಕುಟುಂಬದವರೂ, ಆತ್ಮೀಯರು, ಸ್ನೇಹಿತರು ಎಲ್ಲರೂ ಬಂದು ವಿಚಾರಿಸಿಕೊಂಡು ಹೋದರು. ಈ ಪಟ್ಟಿ ತುಂಬಾ ದೊಡ್ಡದಿದೆ. ಹಾಗಾಗಿ ಅವರೆಲ್ಲರಿಗೂ ನನ್ನ ಅನಂತಾನಂತ ಧನ್ಯವಾದಗಳು.

ಫೋಟೋ ಕೃಪೆ : ಗೂಗಲ್
ಈಗ ಹುಷಾರಾಗಿ ಓಡಾಡಿಕೊಂಡಿರುವೆ. ಮನುಷ್ಯನಿಗೆ ಕಣ್ಣು, ಕಾಲುಗಳು ಬಹಳ ಮುಖ್ಯ. ಇಲ್ಲದಿದ್ದರೆ ಅವಲಂಬನೆಯ ಬದುಕಾಗಿಬಿಡುತ್ತದೆ. ಆ ಭಗವಂತನನ್ನು ಜೀವ ಇರುವವರೆಗೂ ಸ್ಮರಿಸಬೇಕು. ಅವನ ನಿಯಮವಿಲ್ಲದೇ ಏನೂ ಸಾಗದು. ನನಗೂ ಅವನೇ ಪರೀಕ್ಷೆ ಕೊಟ್ಟು ಅವನೇ ತೇರ್ಗಡೆ ಮಾಡಿದ್ದ.
ನನ್ನ ಬದುಕಿನ ಪುಟಗಳಲ್ಲಿ ಈ ಸಂಗತಿ ನಿಮ್ಮ ಬಳಿ ಹಂಚಿಕೊಳ್ಳಬೇಕೆನಿಸಿತು. ಆಸ್ಪತ್ರೆಯಲ್ಲಿ ಇದ್ದಾಗ ಅನಿಶ್ಚಿತ ಬದುಕು ಅನಿಸಿಬಿಟ್ಟಿತ್ತು. ಮೂರು ದಿನದ ಬದುಕಿನಲ್ಲಿ ಬರೀ ಕ್ರೋಧ, ಈರ್ಷ್ಯೆ, ಅನಾರೋಗ್ಯಕರ ಸ್ಪರ್ಧೆ ಯಾಕೆ ಬೇಕೆನಿಸಿತು. ನನ್ನ ಗಂಭೀರ ನಿಲುವು ಕೆಲವರಿಗೆ ನಾನು ಅಹಂಕಾರಿ ಎಂದು ತೋರಿಸುತ್ತದೆ. ಆದರೆ ನನ್ನ ಹತ್ತಿರದಲ್ಲಿ ಕಂಡವರು ನನ್ನ ಬಗ್ಗೆ ಗೊತ್ತಿದೆ. ನಾನು ಯಾರಿಗೂ ಸ್ಪರ್ಧಿಯಾಗಿಲ್ಲ.
ಇದನ್ನು ಬರೆಯುವಾಗ ಮನಸಿನ ಭಾವನೆಗಳು ಕಣ್ಣೀರಾಗಿ ಹರಿಯಿತು. ನಿಮ್ಮೆಲ್ಲರ ಸ್ನೇಹ ವಿಶ್ವಾಸಕ್ಕೆ ಸದಾ ಚಿರಋಣಿಯಾಗಿರುವೆ. ನನ್ನ ಬರಹದ ಮೂಲಕ ನಿಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿರುವೆ.
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
