ಬೆಲ್ಲದಂತ ಮಾತಿನಲ್ಲಿ ಬಲ್ಲೆ ಎನುತ ಕಪಟವಾಡಿ ಸಲ್ಲುವವರ ದೂರಿ ಜರಿದು ಸ್ಥೈರ್ಯಗೆಡೆಸಿತು … ಕವಿ ಅನಂತ ನಾಯ್ಕ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ದೋಷಪೂರ್ಣ ವಾಹದಲ್ಲಿ
ಆಶೆಗಳ ಸರಕು ತುಂಬಿ
ಕ್ಲೇಷಗಳಲಿ ಸಿಲುಕಿ ನೊಂದು
ಜೀವ ಪಯಣದಿ |
ಶೇಷವಾಗಿ ಉಳಿವ ಬಂಧ
ನಾಶವಾಗದಂತ ಅಘದ
ಪಾಶಗಳನು ಭಂಗಗೊಳಿಸು
ದೇವ ಕರುಣದಿ ||೧||
ಬಲ್ಲಿದರು ಬಂದ ವೇಳೆ
ಎಲ್ಲವಿದ್ದು ಸದನದೊಳಗೆ
ಇಲ್ಲವೆಂದು ಸಟೆಯನುಲಿದು
ಬರಿದೆ ಕಳುಹಿತು |
ಬೆಲ್ಲದಂತ ಮಾತಿನಲ್ಲಿ
ಬಲ್ಲೆ ಎನುತ ಕಪಟವಾಡಿ
ಸಲ್ಲುವವರ ದೂರಿ ಜರಿದು
ಸ್ಥೈರ್ಯಗೆಡೆಸಿತು ||೨||
ಸತ್ವಭಾವ ಬರಲೆ ಇಲ್ಲ
ತತ್ತ್ವವೆಂದೂ ಅರಿಯಲಿಲ್ಲ
ಮಿಥ್ಯ ಬದುಕು ಸಾಗಿಸುತ್ತ
ಪತಿತಗೊಂಡಿತು |
ಕೃತ್ಯದಲ್ಲಿ ಕಪಟತನವು
ಚಿತ್ತದಲ್ಲಿ ಕೀಳು ಭಾವ
ಸುತ್ತ ಜನರ ಕೂಡಿಸುತ್ತ
ಮೆರೆಯುತಿದ್ದಿತು ||೩||
ಸಂಗವೆಲ್ಲ ಕುಜನಕೂಟ
ಇಂಗದಿರುವ ಮೋಹದಾಟ
ಉಂಬುದೆಲ್ಲ ಪರರ ಊಟ
ಮಿಥ್ಯವೆಲ್ಲೆಡೆ |
ಅಂತರಂಗ ನೋಡಲಿಲ್ಲ
ಸಂತರೊಡನೆ ಕೂಡಲಿಲ್ಲ
ಅನಂತಶಯನ ಶರಣು ಬಂದೆ
ಸತ್ಯ ನಿನ್ನೆಡೆ ||೪||
- ಅನಂತ ನಾಯ್ಕ
