ಅಜರ್ಬೈಜಾನ್ ಕವಿ ಮಮ್ಮದ್ ಅರಾಜ಼್ ನ ಮೂರು ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಕವಿ ಮೇಗರವಳ್ಳಿ ರಮೇಶ್ ಅವರು ತಪ್ಪದೆ ಮುಂದೆ ಓದಿ…
೧. ಅಕಾಲದಲ್ಲಿ ಅರಳಿದ ಹೂವು.
ಇಲ್ಲ, ನಿಯಮಗಳು, ಸಂಪ್ರದಾಯಗಳು ಇಲ್ಲದೇ ಹೋದಲ್ಲಿ
ನನ್ನನ್ನು ನಾನು ಖಂಡಿತಾ ನಿಗ್ರಹಿಸುವುದಿಲ್ಲ.
ಮಕ್ಕಳು ನನ್ನನ್ನು “ಅಪ್ಪ” ಎಂದು ಕರೆದರೆ
ನನಗಂತೂ ಹಿಂಜರಿಕೆಯಿಲ್ಲ.
ಪ್ರಿಯೆ,
ನನ್ನ ಮೇಲೆ ಕೋಪಗೊಳ್ಳಲು ಎಲ್ಲಾ ಹಕ್ಕು ನಿನಗಿದೆ.
ಏನು ಮಾಡುವುದು ಹೇಳು?
ಬದುಕಿಗೆ ಇನ್ನೊಂದು ವಸಂತವಿಲ್ಲ!
ಪ್ರೇಮದರಮನೆ ಎಲ್ಲರಿಗೂ ಎಟಕುವುದಿಲ್ಲ!
ಮಂಜು ಬೀಳುವ ಅಕಾಲದಲ್ಲಿ ಅರಳಿದ ಹೂವು ನೀನು!
ನಾನು ನಿನ್ನನ್ನು ಕಿತ್ತುಕೊಳ್ಳದಿದ್ದರೆ
ಬಿರುಗಾಳಿ ನಿನ್ನನ್ನು ಕೊಲ್ಲುವುದು!
ನಾನು ನಿನ್ನನ್ನು ಕಿತ್ತುಕೊಂಡರೆ
ನನ್ನ ಕೈಗಳಲ್ಲಿ ನೀನು ಬಾಡಿ ಹೋಗುತ್ತಿ!
***
(ಕವಿತೆ: ದ ಫ಼್ಲವರ್ ವ್ಹಿಚ್ ಅಪಿಯರ್ಡ್ ಇನ್ ದಿ ರಾಂಗ್ ಸೀಸನ್)
೨. ಸಾಂತ್ವನ
ನೆಮ್ಮದಿ ನೀಡು ನನ್ನ ಕಷ್ಟದ ದಿನಗಳಲ್ಲಿ
ಇರಬಲ್ಲೆ ನಾನು ಆಹಾರ ಪಾನೀಯಗಳಿಲ್ಲದೆ.
ನಾನು ಕೊನೆಯುಸಿರೆಳೆಯುವ ಕ್ಷಣ
ನನ್ನನ್ನು ನೀನು ಬಂದು ನೋಡುವುದಾದರೆ
ತೆಗೆದುಕೊಂಡು ಬಾ ನಿನ್ನ ಕಣ್ಣುಗಳಲ್ಲಿ
ಸ್ವಲ್ಪ ಭರವಸೆಯನ್ನು.
ಅಲಾರಮ್ಮಿನ ಕೊನಯ ಗಂಟೆದನಿ ನಿನಗೆ ಕೇಳಿಸುವಾಗ
ನಿನಗೆ ಹಸಿವು, ನೀರಡಿಕೆಗಳಿರುವುದಿಲ್ಲ.
ಹೌದು, ಕೊನೆಯ ಕ್ಷಣದಲ್ಲಿ, ಕೊನೆಯುಸಿರು ಎಳೆವಾಗ
ನೀನು ಹಂಬಲಿಸುತ್ತಿ ಸಾಂತ್ವನಕ್ಕಾಗಿ!
***
( ಕವಿತೆ: ಕಾನ್ಸೊಲೇಷನ್ )
೩. ಯುದ್ಧಗಳು ನಡೆಯದೇ ಇದ್ದಿದ್ದರೆ….!
ಯುದ್ಧಗಳು ನಡೆಯದೇ ಇದ್ದಿದ್ದರೆ
ಭೂಮಿ ಮತ್ತು ಮಂಗಳ ಗ್ರಹಗಳ ನಡುವೆ ನಾವು ಕಟ್ಟ ಬಹುದಿತ್ತು ಸೇತುವೆಯನ್ನು-
ಕರಗಿಸಿ ಎಲ್ಲ ಶಸ್ತ್ರಾಸ್ತ್ರಗಳನ್ನು ತೆರೆದ ಕುಲುಮೆಗಳಲ್ಲಿ!
ಯುದ್ಧಗಳು ನಡೆಯದೇ ಇದ್ದಿದ್ದರೆ
ಸಾವಿರ ವರ್ಷದ ಫಸಲನ್ನು ಒಂದೇ ಬಾರಿ ಬೆಳೆಯ ಬಹುದಿತ್ತು,
ಚಂದ್ರ ತಾರೆಗಳನ್ನು ವಿಜ್ನಾನಿಗಳು ಭೂಮಿಗೆ ತರ ಬಹುದಿತ್ತು!
ಜನರಲ್ ಸಾಹೇಬನ ಕಣ್ಣುಗಳು ಹೇಳುತ್ತವೆ-
” ನಾನೊಬ್ಬ ಸಣ್ಣ ಹಳ್ಳಿಯ ಪಂಚಾಯ್ತಿ ಛೇರ್ಮನ್ ಆಗಿರುತ್ತಿದ್ದೆ!
ಯುದ್ಧಗಳು ನಡೆಯದೇ ಇದ್ದಿದ್ದರೆ.
ಯುದ್ಧಗಳು ನಡೆಯದೇ ಇದ್ದಿದ್ದರೆ
ನಾವು ತಡೆಯ ಬಹುದಿತ್ತು ಅಕಾಲಿಕ ಮರಣಗಳನ್ನು
ನಮ್ಮ ಕೂದಲುಗಳು ತಡವಾಗಿ ಬಿಲಿಯಾಗುತ್ತಿದ್ದವು!
ಯುದ್ಧಗಳು ನಡೆಯದೇ ಇದ್ದಿದ್ದರೆ
ದುಃಖವನ್ನು, ಅಗಲಿಕೆಯ ನೋವನ್ನು
ಎದುರಿಸುವ ಪ್ರಮೇಯವೇ ಇರುತ್ತಿರಲಿಲ್ಲ ನಮಗೆ!
ಯುದ್ಧಗಳು ನಡೆಯದೇ ಇದ್ದಿದ್ದರೆ
ಮನುಷ್ಯನ ಗುಂಡುಗಳು ಮಾತುಗಳಾಗಿರುತ್ತಿದ್ದವು
ಮತ್ತು ಮನುಷ್ಯನ ಆ ಮಾತುಗಳು ಪ್ರೀತಿಯದಾಗಿರುತ್ತಿದ್ದವು!
- (ಕವಿತೆ: ಇಫ಼್ ದೇರ್ ವರ್ ನೋ ವಾರ್)
ಮೂರೂ ಕವಿತೆಗಳ ಕನ್ನಡಾನುವಾದ : ಮೇಗರವಳ್ಳಿ ರಮೇಶ್.
