ಮುದ್ದು ಕೊಟ್ಟು ಕದ್ದು ನೋಡಿದ ದಿನ ಮನಗೆದ್ದ ರಮಣಿಯೇ…ಕವಿ ಶಂಕರಾನಂದ ಹೆಬ್ಬಾಳ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕೆದ್ದೆಯಲ್ಲ
ಗೆದ್ದೆಯಲ್ಲ
ಸದ್ದು ಮಾಡಿ ಮನವನು
ಜಿದ್ದು ಮಾಡಿ
ಮುದ್ದು ಕೊಟ್ಟು
ಕದ್ದು ನೋಡಿ ದಿನವನು
ಮನಸಿನಲ್ಲಿ
ಕನಸುಕೊಟ್ಟು
ಮುನಿಸು ತೋರಿ ಸಾಗಿದೆ
ಸನಿಹವಿರದೆ
ವಿನಯದಿಂದ
ಬನವನೆಲ್ಲ ತಿರುಗಿದೆ
ಕೂಡಿ ನನ್ನ
ಕಾಡಿ ಕಾಡಿ
ಮೋಡಿ ಮಾಡೊ ರಜನಿಯೆ
ಓಡಿ ಬಂದು
ಮೂಡಿನಿಂದು
ಹಾಡು ಹಾಡೊ ರಮಣಿಯೆ
ಜೇನಿನಂತ
ಮಾನಿನಿಯನು
ಮೇನೆಯಲ್ಲಿ ಕೂಡಿಸಿ
ಸೋನೆ ಸುರಿಸಿ
ಗಾನ ಪಾಡಿ
ಮೌನದಲ್ಲಿ ವಿರಮಿಸಿ
ಒಲವ ಲೋಕ
ಚೆಲುವ ಲೋಕ
ಮಿಲನದಲ್ಲಿ ತೋರಿಸಿ
ಸಲುಗೆ ಬಳಸಿ
ನಲುಮೆಯಿಂದ
ಛಲವ ತೊಟ್ಟು ಪಳಗಿಸಿ
- ಶಂಕರಾನಂದ ಹೆಬ್ಬಾಳ
