ಖ್ಯಾತ ಲೇಖಕರಾದ ಮಲ್ಲಿಕಾರ್ಜುನ ಕಡಕೋಳ ಅವರ ‘ನಾಟಕ ಕರ್ನಾಟಕ’ ಕೃತಿಯ ಕುರಿತು ರಂಗಭೂಮಿ ಆ ನಿರ್ದೇಶಕರಾದ ಕಿರಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪುಸ್ತಕ : ನಾಟಕ ಕರ್ನಾಟಕ
ಲೇಖಕರು : ಮಲ್ಲಿಕಾರ್ಜುನ ಕಡಕೋಳ
ನಾಟಕದ ಪೆಟಾರಿಯ ಮುಚ್ಚಳ ತೆಗೆದು. ಶಿರಸಿಯ ಮಾರಿ ಜಾತ್ರೆ. ಹತ್ತಾರು ಕಂಪನಿಗಳು ನಾಟಕದ ಟೆಂಟ್ ಹಾಕಿದ್ದವು. ಶುರುವಾಗಿ ಕೆಲವು ದಿನಗಳಾಗಿತ್ತಷ್ಟೇ. ಧುತ್ತೆಂದು ಎರಗಿತು ಕೊರೋನಾ. ಲಾಕ್ಡೌನ್ ಘೋಷಣೆಯಾಯ್ತು. ಬದುಕೇ ಸ್ಥಬ್ಧವಾಯ್ತು.ಕಂಪನಿಗಳ ಕ್ಯಾಂಪ್ ಮುಚ್ಚಬೇಕಾಯ್ತು.ಕಂಪನಿಯ ಸರಕುಗಳನ್ನು ಸಾಗಿಸಲೂ ಹಣವಿಲ್ಲ. ಊಟಕ್ಕೂ ತತ್ವಾರ. ಅಂಥ ದುರಿತದ ದಿನಗಳಲ್ಲಿ ಶಿರಸಿಯ ಜನ ತಿಂಗಳುಗಟ್ಟಲೇ ಊಟ ಕೊಟ್ಟು ಕಲಾವಿದರನ್ನು ಸಾಕಿದರು.

ಹಿರಿಯ ಬರಹಗಾರ, ರಂಗ ಚಿಂತಕ ಮಲ್ಲಿಕಾರ್ಜುನ ಕಡಕೋಳರ ʼ ನಾಟಕ ಕರ್ನಾಟಕʼ ಪುಸ್ತಕದ ʼ ಕಂಪನಿ ನಾಟಕಗಳ ಪ್ರೇಕ್ಷಕ ಪರಂಪರೆ ಮತ್ತು ಜತೆಗಿರುವನು ಚಂದಿರʼ ಲೇಖನ ಓದುತ್ತಿದ್ದಂತೆ ಇದೆಲ್ಲ ನೆನಪಾಯ್ತು. ಆನವಟ್ಟಿಯಲ್ಲಿ, ʼಜತೆಗಿರುವನು ಚಂದಿರʼ ನಾಟಕದ ಪ್ರೇಕ್ಷಾಂಗಣದಲ್ಲಿ ಗಲಾಟೆಯಾಗಿ ನಾಟಕ ನಿಂತುಹೋದ ಸಂದರ್ಭವನ್ನು ಎತ್ತಿಕೊಂಡು ಕಡಕೋಳ ಇಂಥ ಒಂದು ಬಹು ಮುಖ್ಯ ವಿಷಯವನ್ನು ಚರ್ಚಿಸುತ್ತಾರೆ. ಸಹೃದಯ ಪ್ರೇಕ್ಷಕ ಪರಂಪರೆ ಕಣ್ಮರೆಯಾಗುತ್ತಿರುವದರ ಕುರಿತು ವ್ಯಥೆಪಡುತ್ತಾರೆ.

ಕನ್ನಡ ವೃತ್ತಿರಂಗಭೂಮಿಯ ಕುರಿತ ಆಳವಾದ ಅಧ್ಯಯನ, ಕಂಪನಿಗಳ ಜೊತೆಗಿನ ನಿರಂತರ ಸಂಬಂಧ, ಒಡನಾಟ ಹೊಂದಿರುವ ಕಡಕೋಳರ ಇಪ್ಪತ್ತಾರು ಮಹತ್ವದ ಲೇಖನಗಳ ಸಂಕಲನ ʼನಾಟಕ ಕರ್ನಾಟಕʼ ಪುಸ್ತಕ. ನಾಡಿನ ಸಾಂಸ್ಕೃತಿಕ ಬದುಕಿನ ಕುರಿತು ಪ್ರಭುತ್ವದ ಅಸಡ್ಡೆಯ ಕುರಿತಂತೆ ನಿರ್ಭಿಡೆಯಿಂದ ಬರೆದ ಲೇಖನಗಳನ್ನೂ ಒಳಗೊಂಡಂತೆ ಕನ್ನಡ ಕಂಪನಿ ನಾಟಕಗಳ ಇತಿಹಾಸ ಮತ್ತು ವರ್ತಮಾನದ ಪೆಟಾರಿ ತೆಗೆದು ಹೊಸ ಹೊಸ ಹೊಳಹುಗಳನ್ನು ಹೊರಹಾಕುವ ಅನೇಕ ಲೇಖನಗಳು ಇಲ್ಲಿವೆ, ಜಾತ್ರೆಗಳ ಕಲ್ಚರಲ್ ಮಾಫಿಯಾ ಕುರಿತ ಭಯ ಹುಟ್ಟಿಸುವಂಥ ವಿವರಗಳಿವೆ. ಕನ್ನಡದ ವೃತ್ತಿ ನಾಟಕಗಳ ಕುರಿತ ಸ್ಥೂಲ ಇತಿಹಾಸವಿದೆ. ಕಂದಗಲ್ ಹಣಮಂತರಾಯರ ಕುರಿತ ಪರಿಚಯಾತ್ಮಕ ಲೇಖನವಿದೆ. ದಾವಣಗೆರೆಯಲ್ಲಿ ದೇವರಾಜ ಅರಸರನ್ನು ಸ್ವಾಗತಿಸಲು ಕಂಪನಿಯ ಮಾಲಕ ಕಾಕನೂರು ಯಲ್ಲಪ್ಪ, ಹುಬ್ಬಳ್ಳಿಯಿಂದ ಒಂದು ಬ್ಯಾರಲ್ ಸುಗಂಧದೆಣ್ಣೆ ತರಿಸಿ, ಟೆಂಟ್ ನ ಒಳಗೂ ಹೊರಗೂ ಸಿಂಪಡಿಸಿ ವಾತಾವರಣವನ್ನೇ ಘಮಾಯಿಸುವಂತೆ ಮಾಡಿದ ಕುತೂಹಲಕಾರೀ ಸಂಗತಿಗಳಿವೆ.
ರಂಗಭೂಮಿಯ ವಿದ್ಯಾರ್ಥಿಗಳು ಮುದ್ದಾಂ ಒದಲೇಬೇಕಾದ ಪುಸ್ತಕವಿದು.
- ಕಿರಣ ಭಟ್, ಹೊನ್ನಾವರ
