ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಪೌಲ್ ಈರ್ಲಿಚ್ ಅವರ ಹೆಸರು ಎಂದೂ ಮರೆಯದ ಹೆಸರಾಗಿ ಉಳಿದಿದೆ, ಅವರ ಹಲವಾರು ಮಹತ್ತರವಾದ ಅವಿಷ್ಕಾರದಿಂದ ೧೯೦೮ ರಲ್ಲಿ ನೋಬೆಲ್ ಪ್ರಶಸ್ತಿ ಸಂದಿದೆ. ಅವರ ಸಾಧನೆಯ ಕುರಿತು ವಿಜ್ಞಾನಿ ಪ್ರಸನ್ನ ಸಂತೇಕಡೂರು ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ವೈದ್ಯಕೀಯ ಶಾಸ್ತ್ರದಲ್ಲಿ ಡಾ. ಪೌಲ್ ಈರ್ಲಿಚ್ ಎಂಬುದು ಬಹು ದೊಡ್ಡ ಹೆಸರು. ಇವರು ಸಿಫಿಲಿಸ್ ಎಂಬ ಮಾರಕ ರೋಗಕ್ಕೆ ಔಷಧ ಕಂಡುಹಿಡಿಯುವುದರ ಜೊತೆ ಇನ್ನು ಹಲವು ಮಹತ್ತರವಾದ ಅವಿಷ್ಕಾರಗಳನ್ನು ಮಾಡಿದ್ದಕ್ಕೆ ಇವರಿಗೆ ೧೯೦೮ ರ ವೈದ್ಯಕೀಯ ಶಾಸ್ತ್ರದ ನೋಬೆಲ್ ಪ್ರಶಸ್ತಿಯೂ ಸಿಕ್ಕಿದೆ.

ಫೋಟೋ ಕೃಪೆ : wikimedia
ಈ #ಪೌಲ್_ಈರ್ಲಿಚ್ ಬಿಳಿ ಇಲಿಗಳ ಸ್ತನದಲ್ಲಿ ಕಾಣಿಸಿಕೊಳ್ಳುತ್ತಿದ್ದ ಒಂದು ರೀತಿಯ ಸ್ತನದ ಕ್ಯಾನ್ಸರ್ ಜೀವಕೋಶಗಳನ್ನು ಪ್ರಯೋಗಾಲಯದಲ್ಲಿ ಮತ್ತು ಆರೋಗ್ಯವಂತ ಇಲಿಗಳ ದೇಹಕ್ಕೆ ಸೇರಿಸಿ ಅವುಗಳನ್ನು ನಿರಂತರವಾಗಿ ಬೆಳೆಯುವ ಕ್ರಮವನ್ನು ಕಂಡು ಹಿಡಿದಿದ್ದರು. ಇಂದಿಗೂ ಆ ಕ್ಯಾನ್ಸರ್ ಜೀವಕೋಶಗಳನ್ನು ‘ಈರ್ಲಿಚ್ ಅಸೈಟಿಸ್ ಕಾರ್ಸಿನೋಮ ಜೀವಕೋಶಗಳು’ ಎಂದೇ ಕರೆಯುತ್ತಾರೆ.
ಈ ಜೀವಕೋಶಗಳನ್ನು ಉಪಯೋಗಿಸಿಕೊಂಡು ಇಂದಿಗೂ ಲಕ್ಷಾಂತರ ಜನರು ಸಂಶೋಧನೆ ಮಾಡುತ್ತಿದ್ದಾರೆ. ಮಾನವರಿಗೆ ಅದರಲ್ಲೂ ಮಹಿಳೆಯರಿಗೆ ಬರುವ ಸ್ತನದ ಕ್ಯಾನ್ಸರಿನ ಜೀವಕೋಶಗಳಂತೆಯೇ ಇವುಗಳು ಕಾರ್ಯನಿರ್ವಹಿಸುವುದರಿಂದ ಇವು ಬಹು ಉಪಯೋಗಿಯಾಗಿವೆ. ನಾನು ಪಿಎಚ್.ಡಿ. ಸಮಯದಲ್ಲಿ ಈ ಜೀವಕೋಶಗಳನ್ನು ಉಪಯೋಗಿಸುತ್ತಿದ್ದೆ. ಈ ಜೀವಕೋಶಗಳನ್ನು ಆರೋಗ್ಯವಂತ ಇಲಿಗಳ ಸ್ತನದ ಭಾಗಕ್ಕೆ ಇಂಜೆಕ್ಟ್ ಮಾಡಿದರೆ ಅಲ್ಲಿ ದ್ರವ ರೂಪದ ಅಥವಾ ಗೆಡ್ಡೆ ರೂಪದ ಕ್ಯಾನ್ಸರ್ ಬೆಳೆಯುತ್ತದೆ. ಈ ರೀತಿಯ ಇಲಿಗಳಲ್ಲಿ ಅವುಗಳ ಲಿವರ್ ದಪ್ಪವಾಗಿ ಉರಿಯೂತದ ಲಕ್ಷಣಗಳು ಕಾಣುತ್ತಿದ್ದವು. ಅದಕ್ಕೆ ಕಾರಣ ಏನು ಎಂದು ಸುಮಾರು ಹದಿನೈದು ವರ್ಷಗಳಿಂದ ಯೋಚಿಸುತ್ತಿದ್ದೆ. ಇತ್ತೀಚೆಗೆ ನಮ್ಮ ವಿದ್ಯಾರ್ಥಿಗಳು ಮತ್ತು ನಮ್ಮ ಸಹೋದ್ಯೋಗಿಗಳ ಸಹಾಯದಿಂದ ಉತ್ತರ ಕಂಡುಕೊಳ್ಳಲು ಪ್ರಯತ್ನ ಪಟ್ಟಾಗ ತಿಳಿದದ್ದು ಏನೆಂದರೆ ಈ ಕ್ಯಾನ್ಸರ್ ಜೀವಕೋಶಗಳು ಸೂಸುವ ಕೆಲವು ಉರಿಯೂತಕಾರಕ ಮತ್ತು ರಕ್ತನಾಳಗಳು ಬೆಳೆಯಲು ಸಹಾಯ ಮಾಡುವ ಕೆಲವು ಪ್ರೋಟೀನುಗಳು ಲಿವರ್ ಉರಿಯೂತಕ್ಕೆ ಕಾರಣಗಳಾಗಿವೆ ಎಂದು ಗೊತ್ತಾಯಿತು.

ಫೋಟೋ ಕೃಪೆ : sciencedirect
#ಸ್ತನ_ಕ್ಯಾನ್ಸರ್ ಬಂದಿರುವ ಕೆಲವು ಮಹಿಳೆಯರ ಲಿವರಿನಲ್ಲಿ ಕೂಡ ಉರಿಯೂತದ ಲಕ್ಷಣಗಳು ಕಾಣುವುದು ತಿಳಿದು ಬಂತು. ಇದು ಮನುಷ್ಯರ ಹೆಪಟೈಟಿಸ್ ಎಂಬ ಲಿವರ್ ಕಾಯಿಲೆಯನ್ನ ಹೋಲುತ್ತದೆ. ಈ ನಮ್ಮ ಸಂಶೋಧನೆಯನ್ನ Advances in Cancer Biology and Metastasis ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದೇವೆ. ಈ ನಮ್ಮ ಸಂಶೋಧನೆ ಬೇರೆ ಬೇರೆ ಕ್ಯಾನ್ಸರಿನಿಂದ ಬರುವ ಲಿವರ್ ಉರಿಯೂತವನ್ನು ಅರ್ಥಮಾಡಿಕೊಳ್ಳಲು ಮುಂದೆ ಅವುಗಳಿಗೆ ಔಷಧ ಕಂಡುಹಿಡಿಯಲು ಸಹಾಯ ಮಾಡುತ್ತದೆ.
ಆಸಕ್ತರು ನಮ್ಮ ಲೇಖನವನ್ನ ಈ ಕೊಂಡಿಯ ಮೂಲಕ ಓದಬಹುದು :
- ಪ್ರಸನ್ನ ಸಂತೇಕಡೂರು (ವಿಜ್ಞಾನಿಯಾಗಿ ಮ್ಯಾಸ್ಸಿ ಕ್ಯಾನ್ಸರ್ ಸೆಂಟರಿನಿಂದ ಎಕ್ಸೆಲೆನ್ಸ್ ಇನ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್ ಪಡೆದಿದ್ದಾರೆ, ಸಾಹಿತಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ 2021ನೇ ಅವ್ವ ಪ್ರಶಸ್ತಿ ಪುರಸ್ಕೃತರು ಆಗಿದ್ದಾರೆ)
