ಪ್ರತಿಭಾವಂತ ಗೃಹಿಣಿ ಪದ್ಮಾ ಮಂಜುನಾಥ್

ಒಬ್ಬ ಗ್ರಹಿಣಿ ಕೈಯಲ್ಲಿ ಕೇವಲ ರುಚಿಕರ ಅಡುಗೆಯನಷ್ಟೇ ಅಲ್ಲ. ಆಕೆ ಮನಸ್ಸು ಮಾಡಿದರೆ ಯಾವ ವಸ್ತುವಿನಲ್ಲಾದರೂ ಸುಂದರ ಕಲಾಕೃತಿಯನ್ನಾಗಿ ಹುಟ್ಟುಹಾಕಬಲ್ಲಳು ಎಂಬುದಕ್ಕೆ ಶ್ರೀಮತಿ ಪದ್ಮ ಮಂಜುನಾಥ ಅವರ ಕೈಯಲ್ಲಿ ಮೂಡಿದ ಹಲವು ಕಲೆಗಳೇ ಸಾಕ್ಷಿ.

ಪದ್ಮಾ ಅವರು ಮೈಸೂರು ಮಿನರಲ್ಸ ಕಂಪನಿಯಲ್ಲಿ ೧೫ ವರ್ಷ ಸೇವೆ ಸಲ್ಲಿಸಿದ್ದಾರೆ. ಪುತ್ರ ಮತ್ತು ಪತಿ ಇರುವ ಪುಟ್ಟ ಕುಟಂಬಕ್ಕಾಗಿ ಕೆಲಸ ತೆಜಿಸಿದರು. ನಂತರ ಮನೆ ಕೆಲಸದ ಬಿಡುವಿನ ವೇಳೆಯಲ್ಲಿ ಖ್ಯಾತ ಮೈಸೂರು ಶೈಲಿಯ ಚಿತ್ರ ಕಲಾವಿದೆ ಪ್ರಭಾ ಮಲ್ಲೇಶ ಅವರ ಬಳಿ ಅಭ್ಯಾಸ ನಡೆಸಿದರು. ಪ್ರತಿಭೆ ಮತ್ತು ಆಸಕ್ತಿ ಒಂದೆಡೆ ಸೇರಿದಲ್ಲಿ ಏನಾದರೂ ಹುಟ್ಟಲೇಬೇಕು. ಮೂಲತಃ ಪ್ರತಿಭಾವಂತರಾದ ಪದ್ಮ ಇಲ್ಲಿ ತಮ್ಮ ಆಸಕ್ತಿಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡರು. ಇಲ್ಲಿ ಅವರು ಮೈಸೂರು ಚಿತ್ರಕಲೆ, ಮದುವೆ ಅಲಂಕಾರ ಗೊಂಬೆಗಳು, ಪ್ರದರ್ಶನಕ್ಕಾಗಿ ಇಡುವ ತರಕಾರಿ, ಕೊಬ್ಬರಿಗಳಲ್ಲಿ ಕಲಾಕೃತಿಗಳನ್ನು ತಯಾರಿಸಲು ಕಲಿತರು. ಮೈಸೂರು ಶೈಲಿಯ ಚಿತ್ರಕಲೆಯನ್ನು ಬಿಟ್ಟರೆ ಉಳಿದ ಕಲೆಗಳನ್ನು ಇವರು ತಮ್ಮ ಸ್ವ ಆಸಕ್ತಿಯ ಮೇಲೆ ಕಲಿತರು.

ಮೈಸೂರು ಸಾಂಪ್ರದಾಯಿಕ ಕಲೆಯಲ್ಲಿ ಲಕ್ಷ್ಮಿ, ಯಶೋಧ ಕೃಷ್ಣ, ನವನೀತ್ ಕೃಷ್ಣ, ಆಲದೆಲೆ ಕೃಷ್ಣ, ಗಣಪತಿ ಮುಂತಾದ ಚಿತ್ರಗಳನ್ನು ಆಕರ್ಷಕವಾಗಿ ಬಿಡಿಸಿದ್ದಾರೆ. ವಿಜಯನಗರ ಕಾಲದಲ್ಲಿ ಇದ್ದಈ ಸಾಂಪ್ರದಾಯಿಕ ಕಲೆಯನ್ನು ಮುಂದೆ ಮೈಸೂರು ಅರಸರು ಪ್ರೋತ್ಸಾಯಿಸಿ ಬೆಳೆಸಿದರು.ಅದಕ್ಕೂ ಮೊದಲು ಈ ಕಲೆಯನ್ನು ಹೊಯ್ಸಳ ಅರಸರು ಪ್ರೋತ್ಸಾಹಿಸಿದ್ದರು. ಮೈಸೂರಿನ ಜಗನ್ಮೋಹನ್ ಅರಮನೆಯಲ್ಲಿ ಈಗಲೂ ಚಿತ್ರಿತವಾದ ಈ ಕಲೆಯನ್ನು ನೋಡಬಹುದು. ಶಿರದ ಹತ್ತಿರ ಇರುವ, ಶಿಭಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮತ್ತು ಚಿತ್ರಕಲಾ ಪರಿಷತ್ತಿನಲ್ಲಿ ನೋಡಬಹುದು.

ಕೊಬ್ಬರಿ ಮತ್ತು ತರಕಾರಿ ಕಲೆ : ಮೈಸೂರು ರಾಜ್ಯದ ಅನೇಕ ಭಾಗದಲ್ಲಿ ಮದುವೆ ಸಂದರ್ಭದಲ್ಲಿ ಈಗಲೂ ತರಕಾರಿ ಮತ್ತು ಕೊಬ್ಬರಿ ಕಲೆಗಳನ್ನು ನೋಡುತ್ತೇವೆ. ಈ ಕಲೆಗೆ ತನ್ನದೆಯಾದ ವೈಶಿಷ್ಠವಿದೆ.ಕುಸರಿ ಕೆಲಸದ ಈ ಕಲಾತ್ಮಕ ಕಲೆಯನ್ನು ಇಂಥ ಸಂದರ್ಭದಲ್ಲಿ ಮಾಡಿದ್ದಾರೆ. ಈ ಕಲೆಯಲ್ಲಿ ಪಳಗಿದ ಪದ್ಮಾಅವರು ಅನೇಕ ಮದುವೆಗಳಿಗೆ ಈ ಕುಸರಿ ಕೆಲಸದ ಅಲಂಕಾರವನ್ನು ಲೇಪಿಸಿದ್ದಾರೆ. ನೋಡಿದವರೆಲ್ಲ ಮೆಚ್ಚಿ ಹೊಗಳಿದ್ದಾರೆ. ಮೊದಲು ಹವ್ಯಾಸವಾಗಿ ರೂಡಿಸಿಕೊಂಡ ಈ ಕಲೆ ಮುಂದೆ ವೃತಿಯಾಗಿ ಮಾರ್ಪಟ್ಟಿತು. ಪದ್ಮಾ ಅವರು ಸಾವಿರಾರು ಮದುವೆಗಳಿಗೆ ಇಂಥ ಅಲಂಕಾರವನ್ನು ಮಾಡಿದ್ದಾರೆ. ಈ ಅಲಂಕಾರದಲ್ಲಿ ತಯಾರಿಸುವ ಸೂಕ್ಷ್ಮ ಕುಸುರಿ ಕೆಲಸವೆಂದರೆ ಕೊಬ್ಬರಿಯಲ್ಲಿ ರಚಿಸಿರುವ ಮದುವೆಗೆ ಅವಶ್ಯಕತೆಗೆ ತಕ್ಕಂತಹ ಚಿತ್ರಗಳು, ಕುಂಕುಮದ ಬಟ್ಟಲು, ಬೀಸಣಿಕೆಗಳು, ಹತ್ತಿಯ ಹಾರಗಳು, ಮೇಣದಲ್ಲಿ ಕೆತ್ತಿದ ಹಣ್ಣುಗಳು ಮತ್ತು ಇವುಗಳನ್ನು ಸುಂದರವಾಗಿ ಅಲಂಕರಿಸಿದ ರೀತಿ ಪದ್ಮರವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಇದನ್ನೆಲ್ಲಾ ನೋಡಿ ಕಲಿತ್ತಿದ್ದಾರೆ.

ಮೈಸೂರು ಗೊಂಬೆ ಹಬ್ಬ: ದಸರಾ ಹಬ್ಬದ ವಿಶೇಷತೆಯಲ್ಲಿ ಬೊಂಬೆಗಳ ಪಾತ್ರ ಹಿರಿದಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಇಂಥ ಗೊಂಬೆಗಳ ಪ್ರದರ್ಶನ ವಿಶೇಷವಾಗಿದೆ. ಪದ್ಮಾರವರು ಈ ಹಬ್ಬಗಳಿಗೆ ತಯಾರಿಸಿದ ಗೊಂಬೆಗಳಿಗೆ ಲೆಕ್ಕವೇ ಇಲ್ಲ. ಅವರ ಕ್ರಿಯಾಶೀಲತೆ, ಶ್ರದ್ದೆ, ಉತ್ಸಾಹ ಈ ಗೊಂಬೆಗಳ ತಯಾರಿಕೆಯಲ್ಲಿ ಮಡುಗಟ್ಟಿದೆ. ಪುಟ್ಟ-ಪುಟ್ಟ ಗೊಂಬೆಗಳನ್ನು ತಯಾರಿಸುವಾಗಿನ ಇವರ ತಾಳ್ಮೆ, ಸಂಯಮವನ್ನು ಮೆಚ್ಚಲೇಬೇಕು. ಮದುವೆ ಸಂದರ್ಭದಲ್ಲಿ ಇವರಲ್ಲಿ ಗೊಂಬೆ ತಯಾರಿಕೆಗಾಗಿ ಸಾಕಷ್ಟು ಬೇಡಿಕೆಗಳು ಬರುತ್ತಿದ್ದವು. ಇಂಥ ಸಂದರ್ಭದಲ್ಲಿ ಪದ್ಮಾರವರು ಹತ್ತೆಂಟು ಹುಡುಗೀರಿಗೆ ಕೆಲಸವನ್ನು ಕೊಟ್ಟು ಅವರ ಆಸಕ್ತಿಯನ್ನು ಹೆಚ್ಚಿಸಿದ್ದರು. ಸಂಕ್ರಾಂತಿ ಸಂದರ್ಭದಲ್ಲಿಎಳ್ಳು, ವೈವಿಧ್ಯಮಯ ಸಕ್ಕರೆ ಅಚ್ಚುಗಳನ್ನು ತಯಾರಿಸಿ ವಿತರಕರಿಗೆ ಸರಬರಾಜು ಮಾಡುತ್ತಿದ್ದರು.

ಸಾಂಪ್ರದಾಯಿಕ ಮೈಸೂರು ಕಲಾಕೃತಿಗಳ ರಚನೆಯಲ್ಲಿ ನೈಜ ಬಣ್ಣಗಳ ಜೊತೆಗೆ ೨೪ ಕ್ಯಾರೆಟ್ ಚಿನ್ನದ ಹಾಳೆಗಳನ್ನು ಬಳಸಿರುವುದು ವಿಶೇಷ. ಒಂದೊಂದು ರೇಖೆಗಳನ್ನುಅತಿ ಸೂಕ್ಷ್ಮವಾಗಿ ಕುಂಚದಲ್ಲಿ ಮೂಡಿಸಲಾಗಿದೆ. ಈ ಚಿತ್ರಗಳ ಮಾರಾಟದ ಬೆಲೆ ಕನಿಷ್ಠ ೪,೦೦೦ ದಿಂದ ೬೦,೦೦೦ ವರೆಗೂ ಆಗುತ್ತದೆ. ಪದ್ಮಾರವರು ತಮ್ಮ ಚಿತ್ರಗಳನ್ನು ಎಲ್ಲಿಯೂ ಮಾರಾಟಕ್ಕೆ ಇಡದೆ, ಚಿತ್ರಕಲೆಯನ್ನು ತಮ್ಮ ಹವ್ಯಾಸವನ್ನಾಗಿಸಿ ಕೊಂಡಿರುವುದು ಇವರಲ್ಲಿನ ಇನ್ನೊಂದು ವಿಶೇಷತೆಯಾಗಿದೆ. ಒಂದು ಚಿತ್ರದ ಪರಿಪೂರ್ಣತೆಗೆ ಶ್ರೀಮತಿ ಪದ್ಮ ಮಂಜುನಾಥವರು 3 ತಿಂಗಳ ಕಾಲ ಸಮಯ ತಗೆದುಕೊಳ್ಳುತ್ತಾರೆ. ಚಿತ್ರದಲ್ಲಿನ ಎಳೆಗಳ ನಾಜೂಕತೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರ ತಾಳ್ಮೆಯನ್ನು ಚಿತ್ರದಲ್ಲಿ ಕಾಣಬಹುದು. ಇವರ ಇಂಥ ಚಿತ್ರಗಳು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ‘ಮದುವೆ ಒಂದು, ಅಲಂಕಾರ ನೂರುಂದು’ ಎಂಬ ಶೀರ್ಷಿಕೆಯಡಿಯಲ್ಲಿ ಏಕ ವ್ಯಕ್ತಿ ಚಿತ್ರ ಪ್ರದರ್ಶನ ಕಂಡಿವೆ.

ಇನ್ನಷ್ಟು ವಿವರಗಳು ಮುಂದೊರೆಯುತ್ತದೆ ……

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW