ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಛೇ ಕಾಳಜಿ ವಹಿಸಬೇಕಾಗುವುದು. ಅದಕ್ಕಾಗಿ ನಮ್ಮ ಆಹಾರ ಕ್ರಮದಲ್ಲಿ, ಕೆಲವೊಂದು ಬದಲಾವಣೆಗಳು ಅಗತ್ಯ. ಮಂಜುನಾಥ್ ಪ್ರಸಾದ್ ಅವರು ಅದರ ಕುರಿತು ಉಪಯುಕ್ತ ಮಾಹಿತಿಯನ್ನುಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇತ್ತೀಚಿನ ವರದಿಗಳು ಇನ್ನೂ 3 ವಾರದಲ್ಲಿ ಮುಂಗಾರು ಮಳೆ ಶುರುವಾಗುತ್ತದೆ ಎಂದು ತಿಳಿಸಿವೆ. ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುವುದು. ಅದಕ್ಕಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳು ಅಗತ್ಯ. ಅದರ ಜತೆಗೆ ಕೆಲವು ಆಹಾರ ವಸ್ತುಗಳನ್ನು ವಿಶೇಷವಾಗಿ ದೇಹದ ಉಷ್ಣತೆ ಹೆಚ್ಚಿಸುವ ಪದಾರ್ಥಗಳನ್ನು ಸೇರಿಸಿಕೊಳ್ಳುವುದರಿಂದ ಕಾಡುವ ಕಾಯಿಲೆಗಳಿಂದ ಸಾಕಷ್ಟು ರಕ್ಷಣೆ ಮಾಡಿಕೊಳ್ಳಬಹುದು.
ಮಳೆಗಾಲ ಶುರುವಾದೊಡನೆ ತೇವಾಂಶ ಹೆಚ್ಚಳದಿಂದ ಮನುಷ್ಯನ ದೇಹದಲ್ಲೂ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಶೀತ ನೆಗಡಿ, ಜ್ವರ, ಆಮಶಂಕೆ, ಅಸ್ತಮಾ ಮುಂತಾದ ಆರೋಗ್ಯ ಸಮಸ್ಯೆಗಳು ಬಾಧಿಧಿಸುತ್ತವೆ. ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನ ಉತ್ಪತ್ತಿಯಾಗಿ ಮಲೇರಿಯಾ, ಟೈಫಾಯ್ಡ್, ಇವೇ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆಯುರ್ವೇದದ ಪ್ರಕಾರ ಕಾಲಮಾನಗಳು ಬದಲಾದ ಹಾಗೆ ದೈಹಿಕವಾಗಿಯೂ ಬದಲಾವಣೆ ಉಂಟಾಗಿ, ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ನಿತ್ಯ ಬಳಕೆಯಲ್ಲಿರುವ ವಸ್ತುಗಳನ್ನು ಬಳಸಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು.
ಫೋಟೋ ಕೃಪೆ :google
ಅರಿಶಿನ: ಬಿಸಿನೀರಿನಲ್ಲಿ ಒಂದು ಚಿಕ್ಕ ಚಮಚ ಅರಿಶಿನ ಸೇರಿಸಿ ಕುಡಿಯುವುದು ಅಥವಾ ರಾತ್ರಿ ಮಲಗುವ ಮುನ್ನ ಬಿಸಿಹಾಲಿನಲ್ಲಿ ಒಂದು ಚಮಚ ಸೇರಿಸಿ ಕುಡಿಯುವುದರಿಂದಲೂ ಕೆಮ್ಮು ಮತ್ತು ಶೀತವನ್ನು ದೂರವಿಡಬಹುದು.
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರ ನಿವಾರಕ ಮತ್ತು ವೈರಸ್ ನಿವಾರಕ ಗುಣಗಳಿವೆ. ಮೂರು ನಾಲ್ಕು ಬೆಳ್ಳುಳ್ಳಿಯ ಎಸಳುಗಳನ್ನು ಸುಲಿದು ಹಸಿಯಾಗಿಯೇ ಜಗಿದು ನುಂಗಬೇಕು. ಖಾರ ಎನಿಸಿದರೆ ಊಟದ ಕಡೆಯ ತುತ್ತಿನೊಂದಿಗೆ ಜಜ್ಜಿದ ಒಂದು ಎಸಳು ಸೇವಿಸಬಹುದು.
ಕಹಿ ಬೇವು: ಮಳೆಗಾಲ ಕಾಡುವ ಕಾಯಿಲೆಗಳಿಗೆ ಸರಳ ಆಯುರ್ವೇದ ಪರಿಹಾರಗಳಿಂದಲೇ ರಕ್ಷಣೆ ಪಡೆದುಕೊಳ್ಳಬಹುದು. ಬೇವಿನ ಎಲೆಗಳು ರುಚಿಯಲ್ಲಿ ಕಹಿಯಾದರೂ ವೈರಸ್ ಎದುರಿಸಲು ಈ ಎಲೆಗಳು ಸಮರ್ಥವಾಗಿವೆ. ಕೊಂಚ ನೀರಿನಲ್ಲಿ ಹತ್ತರಿಂದ ಹನ್ನೆರಡು ಕಹಿಬೇವಿನ ಎಲೆಗಳನ್ನು ಕುದಿಸಿ ತಣಿಸಿ ಬಳಿಕ ಸೋಸಿ ನೀರನ್ನು ಸಂಗ್ರಹಿಸಿಟ್ಟುಕೊಂಡು, ದಿನಕ್ಕೆ ಮೂರು ನಾಲ್ಕು ಬಾರಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹಸಿ ಶುಂಠಿ: ಒಂದು ತುಂಡು ಶುಂಠಿಯನ್ನು ಚಿಕ್ಕದಾಗಿ ಹೆಚ್ಚಿ ಕೊಂಚ ನೀರಿನಲ್ಲಿ ಕುದಿಸಿ ತಣಿದ ಬಳಿಕ ಸೋಸಿ ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು. ಅಥವಾ ಚಿಕ್ಕದಾಗಿ ಹೆಚ್ಚಿರುವ ಶುಂಠಿಯನ್ನು ಚಹಾದೊಂದಿಗೆ ಕೊಂಚ ಲಿಂಬೆ ಮತ್ತು ಜೇನು ಬೆರೆಸಿ ಸೇವಿಸಬಹುದು. ಅಥವಾ ಜೇನು ಮತ್ತು ಲಿಂಬೆರಸವನ್ನು ಬೆರೆಸಿ ಕೊಂಚ ಬಿಸಿನೀರಿನಲ್ಲಿ ಕದಡಿ ಕುಡಿಯುವುದರಿಂದ ಕೆಮ್ಮು, ಗಂಟಲಬೇನೆ, ಕಟ್ಟಿಕೊಳ್ಳುವ ಮೂಗು ಮೊದಲಾದವುಗಳಿಂದ ರಕ್ಷ ಣೆ ದೊರಕುತ್ತದೆ. ಕಫದ ಸಮಸ್ಯೆ ಇರುವವರು ಕುಡಿಯುವುದರಿಂದ ಕಫದ ನಿವಾರಣೆ ಆಗುತ್ತದೆ.
ದಾಲ್ಚಿನ್ನಿ/ಚೆಕ್ಕೆ: ಶೀತ, ಕೆಮ್ಮು, ಗಂಟಲಬೇನೆಗಳಿಂದ ರಕ್ಷಿಸಲು ಸಮರ್ಥವಾಗಿದೆ. ಚೆಕ್ಕೆ/ ದಾಲ್ಚಿನ್ನಿ ಪುಡಿಗೆ ಜೇನು ಸೇರಿಸಿ ತಿನ್ನುವುದರಿಂದ ಶೀತ. ಕೆಮ್ಮು ಕಡಿಮೆಯಾಗುತ್ತದೆ.
ತುಳಸಿ ದಳಗಳು: ತುಳಸಿ ಎಲೆಗಳು ಬ್ಯಾಕ್ಟೀರಿಯಾ ನಿರೋಧಕ ಮತ್ತು ಶಿಲೀಂಧ್ರ ನಿವಾರಕ ಗುಣಗಳನ್ನು ಹೊಂದಿದ್ದು ಜ್ವರ, ಮಲೇರಿಯಾ, ಗಂಟಲಬೇನೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಕೊಂಚ ನೀರನ್ನು ಕುದಿಸಿ ಇದರಲ್ಲಿ ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಸೇರಿಸಿ ತಣಿಸಿ. ಬಳಿಕ ಈ ನೀರನ್ನು ಸೋಸಿ ಬಿಸಿಬಿಸಿ ಇದ್ದಂತೆಯೇ ದಿನಕ್ಕೆ ಎರಡು ಬಾರಿ ಕುಡಿಯಬೇಕು.
ಫೋಟೋ ಕೃಪೆ :google
ಮುಂಜಾಗ್ರತಾ ಕ್ರಮಗಳು :
- ತಣ್ಣಗಿನ ನೀರು ಸೇವನೆ ಒಳ್ಳೆಯದಲ್ಲ. ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು.
- ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ.
- ಸೊಳ್ಳೆಗಳು ಹೆಚ್ಚಾಗುವುದರಿಂದ ಮಲಗುವಾಗ ಸೊಳ್ಳೆ ಪರದೆ ಬಳಸಿ. ಕೈ ಕಾಲುಗಳಿಗೆ ನೀಲಗಿರಿ ಅಥವಾ ನಿಂಬೆಹುಲ್ಲಿನ ಎಣ್ಣೆ ಹಚ್ಚಿಕೊಳ್ಳಿ.
- ಮಳೆ ಗಾಳಿಗೆ ಮೈಯೊಡ್ಡುವುದರಿಂದ ಶೀತ, ಜ್ವರ ಕಾಣಿಸಿಕೊಳ್ಳುತ್ತದೆ. ಹೊರಗೆ ಹೋಗುವಾಗ ಮಳೆಗೆ ಒದ್ದೆಯಾಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ.
- ಮಳೆಗಾಲದಲ್ಲಿ ಹಸಿಯಾದ ತರಕಾರಿ, ಆಹಾರ ಸೇವನೆಯಿಂದ ಅಜೀರ್ಣ ಉಂಟಾಗಬಹುದು. ಬೇಯಿಸಿದ ಆಹಾರವನ್ನೇ ಸೇವಿಸಿ.
- ತರಕಾರಿ, ಸೊಪ್ಪು ಬಳಸುವಾಗ ಚೆನ್ನಾಗಿ ತೊಳೆದು ಬಳಸಿ.
- ಮಂಜುನಾಥ್ ಪ್ರಸಾದ್