ಹೆಣ್ಣಾಗಲಿ, ಗಂಡಾಗಲಿ ಇಬ್ಬರನ್ನೂ ಸರಿಯಾದ ಮಾರ್ಗದಲ್ಲಿ ಬೆಳೆಸಬೇಕು, ವಿದ್ಯಾವಂತರನ್ನಾಗಿ ಮಾಡಬೇಕು, ತಪ್ಪಿದಾಗ ಬುದ್ಧಿ ಹೇಳಬೇಕು. ಹಿರಿಯ ಲೇಖಕಿ ವಸುಧಾ ಪ್ರಭು ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಸುಮಾರು ದಿನದಿಂದ ಹೆಣ್ಣು ಮಕ್ಕಳ ಬಗ್ಗೆ ಒಂದು ಲೇಖನ ನೀವೂ ಓದಿರಬಹುದು. ಅದೃಷ್ಟವಂತರಿಗೆ ಮಾತ್ರ ಹೆಣ್ಣು ಮಕ್ಕಳನ್ನು ದೇವರು ಕೊಡುತ್ತಾರಂತೆ. ಇದನ್ನು ಯಾವ ಶತಮೂರ್ಖರು ಮೊದಲು ಬರೆದರೋ ಏನೋ ಬಹುಶ: ಒಂದೋ ಆಕೆಗೆ ಗಂಡು ಮಕ್ಕಳಾಗದೆ ಹೆಣ್ಣೇ ಆಗುವಾಗ ತನ್ನನ್ನು ಸಮಾಧಾನಗೊಳಿಸಲು ಆಕೆ ಬರೆದಿರಬಹುದು.
ನನ್ನ ಅನಿಸಿಕೆ ಏನೆಂದರೆ ಮಗು ಹೆಣ್ಣಾಗಲಿ, ಗಂಡಾಗಲಿ ಕೈ ಕಾಲು ಅಂಗಾಗ ಸರಿ ಇದ್ದರೆ ಹೆಣ್ಣಾಗಲಿ, ಗಂಡಾಗಲಿ ಆ ಹೆತ್ತವರು ನಿಜವಾಗಿಯೂ ಅದೃಷ್ಟವಂತರು. ಮತ್ತೆ ಎರಡನೆಯದು ಮಕ್ಕಳಿಗೆ ನಾವು ಕೊಡುವ ಸಂಸ್ಕಾರ, ಅವರನ್ನು ಒಳ್ಳೆಯದೋ, ಕೆಟ್ಟದ್ದೋ ಮಾರ್ಗಕ್ಕೆ ಖಂಡಿತಾ ಕೊಂಡು ಹೋಗುತ್ತೆ. ಗಂಡು ಮಗು ಇಲ್ಲ ಎಂದು ಹೆಣ್ಣು ಮಕ್ಕಳನ್ನು ಗಂಡಿನ ಹಾಗೆ ಬೆಳೆಸಿದವರೂ ಇದ್ದಾರೆ. ಆದರೆ ಅದರೊಟ್ಟಿಗೆ ಸಂಸ್ಕಾರ ಕೊಟ್ಟವರು ಮಾತ್ರ ತುಂಬಾ ಕಡಿಮೆ ಜನ ಅನಿಸ್ತದೆ.
ಎಷ್ಟು ಹೆಣ್ಣು ಮಕ್ಕಳು ಮದುವೆ ಆದ ಮೇಲೆ ಗಂಡಿನ, ಅವನ ಮನೆಯವರ ಬಾಳು ನರಕ ಮಾಡಿದವರಿಲ್ಲ. ಮೊನ್ನೆ ಇಂತಹುದೇ ಒಂದು ಘಟನೆ ನಡೆದು ಹುಡುಗಿಯ ಮಾವ ಹೃದಯಾಘಾತವಾಗಿ ಇಹಲೋಕವನ್ನೇ ತ್ಯಜಿಸಿದರು. ಆ ತಾಯಿ ಕಣ್ಣೀರು ನೋಡಿದರೆ ತುಂಬಾ ದುಃಖ ಆಗುತ್ತೆ. ಮದುವೆ ಒಂದು ನೆಪಕ್ಕೆ ಮಾಡಿ ಕೊನೆಗೆ ಹುಡುಗನನ್ನು ಸತಾಯಿಸಿ ಲಕ್ಷ ಲಕ್ಷ ಹಣ ಪೀಕಿದವರೂ ಇದ್ದಾರೆ ಇಲ್ಲಿ. ಅಂತಹವರೇ ಹೇಳುತ್ತಾರೇನೋ ಹೆಣ್ಣು ಅದೃಷ್ಟ ಇದ್ದವರಲ್ಲಿ ಹುಟ್ಟುತ್ತಾಳೆನೋ ಅಂತ ಯೋಚಿಸುತ್ತಿರಬಹುದೇನೋ.
ಹೆಣ್ಣಾಗಲಿ, ಗಂಡಾಗಲಿ ಇಬ್ಬರನ್ನೂ ಸರಿಯಾದ ಮಾರ್ಗದಲ್ಲಿ ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿ, ತಪ್ಪಿದಾಗ ಬುದ್ಧಿ ಹೇಳಿ, ಸರಿಪಡಿಸುವುದು ಅದು ಹಿರಿಯರ ಕರ್ತವ್ಯ, ತಪ್ಪು ಅಂತ ಗೊತ್ತಾಗಿಯೂ ಅದನ್ನು ಪ್ರೋತ್ಸಾಹಿಸುವುದು ಅದು ಮತ್ತೊಂದು ತಪ್ಪನ್ನು ಮಾಡಲು ಅನುಕೂಲ ಮಾಡಿದಂತೆ ಆಗುವುದು.
ಈ ಲೇಖನ ಕೇವಲ ಗಂಡು ಮಕ್ಕಳನ್ನು ಪ್ರೋತ್ಸಾಹಿಸಲು ಬರೆದುದಲ್ಲ,, ಎಷ್ಟೋ ಹೆಣ್ಣು ಮಕ್ಕಳ ಜೀವನವನ್ನು ನರಕವಾನ್ನಾಗಿಸಿದ ಗಂಡುಗಳು, ಅದಕ್ಕೆ ಪ್ರೋತ್ಸಾಹಿಸುವ ಅತ್ತೆಯoದಿರೂ ಇದ್ದಾರೆ. ಹೀಗೆ ನರಕವನ್ನು ಅನುಭವಿಸುವ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗದೆ ಕಾನೂನು ಪ್ರಕಾರ ಬೇರೆಯಾಗುವುದು ತುಂಬಾ ಒಳ್ಳೆಯದು.
ದಿನ ಬೆಳಗಾದರೆ ಇಂತಹ ಘಟನೆಗಳು ಸಾಮಾನ್ಯ ಆಗಿದೆ. ಅದರಲ್ಲೂ ಸುಶಿಕ್ಷಿತ ಹೆಣ್ಣ ಮಕ್ಕಳು ಕೂಡಾ ಇದ್ದಾರೆ. ಕೋಪ ದುಃಖದಲ್ಲಿರುವಾಗ ಈ ನಿರ್ಧಾರ ಮನಸ್ಸಿಗೆ ಬಂದರೆ ಆ ವಿಚಾರ ಬದಿಗಿಟ್ಟು ಯಾರಾದರೂ ತಜ್ಞರನ್ನು ಭೇಟಿಯಾಗಿ ಮಾತನಾಡಿ ಸಮಸ್ಯೆಯನ್ನು ಪರಿಹರಿಸುವುದು ಒಳ್ಳೆಯದಲ್ಲವೇ.
- ವಸುಧಾ ಪ್ರಭು – ಮುಂಬೈ.
