ರಂಗು ರಂಗಿನ ಚಿತ್ತ ಕಲುಕುವ ಚಿತ್ತಾರ ಬಿಡಿಸುತ್ತಾರೆ ವಯ್ಯಾರದಲಿ ಕಿಲ ಕಿಲನೆ ಕುಲುಕುತ್ತ ಮೋಹಕ ನಗೆಯಲಿ ….ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಈ ಕವಿತೆಗಳು ತಪ್ಪದೆ ಮುಂದೆ ಓದಿ…
ಈ ನೀರೆಯರೇ ಹೀಗೆ
ಮೂಡಣದ ಮೂಲೆಯಲ್ಲಿ ಇನ್ನೂ
ರವಿ ಮೂಡುವುದೇ ತಡ
ಇವರದು ಅದೆಂತಹ ಸಡಗರ!
ತಲೆಗೆ ನೀರೆರೆದುಕೊಂಡು ಹಾಗೆಯೇ
ಕೂದಲನು ಇಳಿ ಬಿಟ್ಟುಕೊಂಡು
ಬಣ್ಣ ಬಣ್ಣದ ಹೊಸ ಉಡುಗೆ ಧರಿಸಿಕೊಂಡು
ತಮ್ಮ ತಮ್ಮ ಮನೆ ಮುಂದಿನಂಗಳದಲಿ
ರಂಗು ರಂಗಿನ ಚಿತ್ತ ಕಲುಕುವ
ಚಿತ್ತಾರ ಬಿಡಿಸುತ್ತಾರೆ ವಯ್ಯಾರದಲಿ
ಕಿಲ ಕಿಲನೆ ಕುಲುಕುತ್ತ
ಮೋಹಕ ನಗೆಯಲಿ ಮುಂಜಾನೆಯ
ಸಂಗೀತ ಹಾಡುತ್ತಾರೆ
ಇವರ ಈ ಹಾವ ಭಾವ ಬಿನ್ನಾಣಗಳಿಗೆ
ಮನ ಸೋತು ಹಲ್ಲು ಕಿರಿದು
ಪೋಜು ಕೊಡುವ ಪಡ್ಡೆ ಹೈದರಿಗೆ
ವಾರೆ ನೋಟದ ಕಿಕ್ ನೀಡುತಾ
ಹ್ಯಾಪಿ ಪೊಂಗಲ್ ಎಂದು ಬರೆದು
ಶುಭ ದಿನದ ಬದುಕಿಗೆ ಸ್ಫೂರ್ತಿಯಾಗುತ್ತಾರೆ
ಸಂಜೆ ಯಥಾಪ್ರಕಾರ
ತಮ್ಮ ಸಿಂಗಾರದ ಸೀರಿಯಲ್ಲಿ
ಎಳ್ಳು ಬೆಲ್ಲ ಕಬ್ಬುಗಳ ಹೊತ್ತು
ಕಾಲ್ಗೆಜ್ಜೆಯ ಝಣಝಣಕಾರದಲಿ
ಮೋಹಕ ನೋಟವನು ಚಲ್ಲುತಾ ಹಾಕುತ್ತಾರೆ
ವಯ್ಯಾರದ ನಡಿಗೆ ಮನೆ ಮನೆಗೆ
ಎಳ್ಳು ಬೆಲ್ಲ ಬೀರುತಾ
ಇಡೀ ದಿನ ಪಡ್ಡೆ ಹೈದರನ್ನು ತಮ್ಮತ್ತಲೇ
ಗಿರಕಾಯಿಸಿಕೊಳ್ಳುತ ನಡೆಸಿಬಿಡುತ್ತಾರೆ
ಅವರೆದೆಗಳಲಿ Some ಕ್ರಾಂತಿಯನು.
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
