ಕವನದವೆಂದಾಗ ಅದರಲ್ಲಿ ಪದಗಳಿದ್ದರೆ ಸಾಲದು. ಭಾವನೆಗಳಿರಬೇಕು, ಮನ ಮುಟ್ಟುವಂತಿರಬೇಕು. ಅದು ಕವಿಯತ್ರಿ ಅಮೃತ ಎಂ ಡಿ ಅವರ ಕವನದಲ್ಲಿ ನಾವು ಕಾಣಬಹುದು. ಅವರ ಕವನದ ಪ್ರತಿ ಸಾಲುಗಳು ಮನ ಮುಟ್ಟುತ್ತದೆ. ನೀವು ಓದಿ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಕಣ್ಣಿಂದ ಕಂಬನಿ ಜಾರುತ್ತಲಿತ್ತು
ಎದುರು ನಿಂತು ಅಪೇಕ್ಷಿಸುತ್ತಿದ್ದ
ಅಂಗೈಯು ಅಗೋಚರವಾಗಿತ್ತು
ಧುಮ್ಮುಕ್ಕಿ ಬಂದ ಅಶ್ರುಧಾರೆಯ ಕಂಡು
ಮನದ ಸುತ್ತ ಕಾರ್ಮುಗಿಲ
ಕರಿನೆರಳು ನರ್ತಿಸುತ್ತಲಿತ್ತು
ನನ್ನವರ ಹುಸಿ ನಾಟಕದ
ಹಸಿ ತಥ್ಯ ಗೋಚರವಾಗುತ್ತಲಿತ್ತು
ಸುತ್ತಣ ಹಸಿರ ಐಸಿರಿ ಮೈದಳೆದು
ಕಣ್ಣಿಗೆ ರಾಚುತ್ತಲಿತ್ತು
ಮಿಥ್ಯ ನಾಟಕ ರಂಗಭೂಮಿಗೆ
ತೆರೆಬಿದ್ದರು ದಿಗಂಬರವಾಗಿತ್ತು
ಆತ್ಮಾನುಭವ ಆತ್ಮಾವಲೋಕನದ
ನಂಟ್ಯಾಕೋ ಜಟಿಲವಾಗಿತ್ತು
ಎದುರು ಬದುರು ನಿಂತವರೆಲ್ಲ
ಹೀಯಾಳಿಸಿ ಕುಹಕ ನುಡಿದಂತೆ ಕಾಣುತ್ತಿದ್ದರು
ನಂಬಿದ ಹಸ್ತದ ಹಂಗಿನ ಅರಮನೆಯ
ವೈಭೋಗದ ರಸದೌತಣದ ಋಣ ತೀರಿತ್ತು
ಅಸಹಾಯಕ ಬದುಕಿನ ತೀರ ಬಿಟ್ಟ
ಮೀನಿನ ವ್ಯಥೆಯ ನಿವೇದನೆ ಕೇಳುವರು ಯಾರಿಲ್ಲಿ ..?
ಆತ್ಮಸ್ಥೈರ್ಯದ ಅಂತರ್ಶಕ್ತಿ ಅರಿವಿಗೂ
ಬರದೆ ತನ್ನ ಛಾಪು ಮೂಡಿಸತೊಡಗಿತು
ಕುರೂಪಿಯಾದ ಕಲ್ಲಲ್ಲು ನೈವೇದ್ಯಕ್ಕೆ
ಒಳಪಡುವ ಶಿಲೆಯಿದೆಯೆಂದು ಸಾಬೀತುಪಡಿಸತೊಡಗಿತು.
- ಅಮೃತ ಎಂ ಡಿ (ಎಂ ಎಸ್ಸಿ ಗಣಿತಶಾಸ್ತ್ರ ,ದ್ವಿತೀಯ ವರುಷ) ಮಾಗನಹಳ್ಳಿ, ಮಂಡ್ಯ.
