೩೮ ವರ್ಷದ ಶಾರದಮ್ಮ ಗಂಡ ಸತ್ತ ಬಳಿಕ ತಮ್ಮ ಜೀವನೋಪಾಯಕ್ಕಾಗಿ ಲಾರಿ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. ಒಂದು ಲಾರಿ ಪರಿಪೂರ್ಣ ಮಾಡಲು 45 ದಿನಗಳನ್ನು ತಗೆದುಕೊಳ್ಳುತ್ತಾರೆ, ಅವರ ಸಾಧನೆಯ ಕುರಿತು ಟಿ.ಶಿವಕುಮಾರ್ ಅವರು ಬರೆದಿರುವ ಒಂದು ಲೇಖನ ತಪ್ಪದೆ ಓದಿ…
ಪುರುಷರಿಗೇ ಮೀಸಲು ಎನ್ನುವಂತಿರುವ ಕೆಲವು ಕೆಲಸ ಜಂಟಲ್ಮನ್ ಗಳಿಗಷ್ಟೇ ಎಂದು ನಾವಂದುಕೊಂಡಿರುತ್ತೇವೆ. ಆದರೆ ಇಲ್ಲಿ ವುಮೆನ್ ತುಂಬಾ ‘ಜಂಟಲ್’! ಎಂಬ ನಮ್ಮ ಅಭಿಪ್ರಾಯ… ಆದರೆ ಮಹಿಳೆ ತನಗೆ ತಾನೇ ಗೆರೆ ಎಳೆದುಕೊಂಡಿದ್ದನ್ನು ಈಗ ತಾನೇ ಅಳಿಸತೊಡಗಿದ್ದಾಳೆ. ಕೊಪ್ಪಳ ಪಟ್ಟಣದ ಗದಗ ರಸ್ತೆಯಲ್ಲಿರುವ ಮೌನೇಶ್ವರ ಬಾಡಿ ಬಿಲ್ಡಿಂಗ್ ವರ್ಕ್ಶಾಪ್ ಒಡತಿ ಶಾರದಮ್ಮ ಬಡಿಗೇರ
ಗಂಡನಿಲ್ಲದ ಕೊರಗನ್ನು ಮಡಿಲಲ್ಲೇ ಹುದುಗಿಸಿಕೊಂಡು ದುಃಖವನ್ನು ಮನದ ಮೂಲೆಯಲ್ಲಿ ಅರಗಿಸಿಕೊಂಡು ಗಟ್ಟಿಗರಾದ ಪುರುಷರಿಗೂ ಸವಾಲೆನಿಸುವಂತಹ ‘ಲಾರಿ ಬಾಡಿ ಬಿಲ್ಡಿಂಗ್’ ಕೆಲಸವನ್ನು ತಮ್ಮದಾಗಿಸಿಕೊಂಡು ಜೀವನ ಕಟ್ಟುವ ಕಾಯಕಕ್ಕಿಳಿದ ಶಾರದಮ್ಮ ಬಡಗೇರ ಇವರ ಸಾಹಸ ಕಥೆ ನಾಡಿನ ಅದೆಷ್ಟೋ ದುರ್ಬಲ ಮಹಿಳೆಯರಿಗೆ ಮಾದರಿಯಾದಿತು.
(ಬೈಕ್ ಸವಾರಿಯಲ್ಲಿ ಶಾರದಮ್ಮ)
ಸೂರ್ಯ ಹುಟ್ಟುವ ಮೊದಲೇ ಎದ್ದು ಮನೆಯ ಕಸ ಗುಡಿಸಿ ಇನ್ನಿತರೆ ಗೃಹ ಕೃತ್ಯವನ್ನು ಮುಗಿಸಿ ಲಾರಿ ಬಾಡಿ ಕಟ್ಟುವ ಕೆಲಸದಲ್ಲಿ ತೊಡಗಿದರೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಸದಾ ಲವಲವಿಕೆಯಿಂದ ಇರುವ ಶಾರದಮ್ಮನವರ ವಯಸ್ಸು 38.
ಶಾರದಮ್ಮನವರ ತವರೂರು ಗದಗ ತೀರ ಬಡಕುಟುಂಬ. ಕೊಪ್ಪಳದ ದೇವೇಂದ್ರಪ್ಪ ಬಡಿಗೇರೊಂದಿಗೆ ಮದುವೆಯನ್ನು ಮಾಡಿಕೊಟ್ಟರು ಪತಿಗೆ ಬಾಡಿ ಕಟ್ಟುವ ಕೆಲಸ ಬಿಟ್ಟರೆ ಬೇರೆ ಕೆಲಸ ಗೊತ್ತಿರಲಿಲ್ಲ 15 ವರ್ಷಗಳ ಕಾಲ ಗಂಡನೊಂದಿಗೆ ಸಂಸಾರ ನೆಡೆಸಿದ ಶಾರದಮ್ಮ. ಗಂಡ ದೇವೇಂದ್ರಪ್ಪ ಬಡಿಗೇರ 2009 ರಲ್ಲಿ ಅನಾರೋಗ್ಯದಿಂದ ಮಡದಿ ಮಕ್ಕಳನ್ನು ಅಗಲಿ ಇಹಲೋಕ ಯಾತ್ರೆ ಮುಗಿಸಿದಾಗ ಶಾರದಮ್ಮಳಿಗೆ ಕಾಡಿದ್ದು ತನ್ನ ಇಬ್ಬರು ಮಕ್ಕಳನ್ನು ಸಲಹುವ ಚಿಂತೆ.
(ಲಾರಿ ವೆಲ್ಡಿಂಗ್ ಮಾಡುತ್ತಿರುವ ಶಾರದಮ್ಮ)
ಪ್ರತಿ ವರ್ಷ ಗಂಡ 15 ದಿನ ಶಬರಿಮಲೆಯಾತ್ರೆ ಕೈಗೊಳ್ಳುತ್ತಿದ್ದ ಆಂತಹ ಸಂದರ್ಭದಲ್ಲಿ ಶಾರದಮ್ಮ ಈ ಗ್ಯಾರೇಜಿನ ಉಸ್ತುವಾರಿಯನ್ನು ನೋಡಿಕೋಳ್ಳುತ್ತಿದ್ದಳು ಇದೇ ಶಾರದಮ್ಮನಿಗೆ ಬದುಕಿನ ಪಾಠವಾಗಿ ಮಾರ್ಪಡುತ್ತಿತ್ತು. ಅಂತಹ ಸಮಯದಲ್ಲಿ ಬದುಕಿನ ನೊಗ ಹೊರಲು ಕಲಿತ ವಿದ್ಯೆ ಈಗ ಅವರನ್ನು ಕಾಪಾಡುತ್ತಿದೆ. ಗಂಡನ ಸಾವಿನಿಂದ ಘಾಸಿಗೊಂಡಿದ್ದ ಶಾರದಮ್ಮಳ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಿದ್ದರು. ನೊಂದ ಮುಂದಿನ ಬದುಕು ಹೇಗೆ ಎಂದು ಚಿಂತಿಸುತ್ತಿರುವಾಗ ಗಂಡ ಕಟ್ಟಿ ಬೆಳೆಸಿದ ಗ್ಯಾರೇಜನ್ನು ಯಾಕೇ ಮುಂದುವರೆಸಿಕೊಂಡು ಹೋಗಬಾರದು ಎಂದು ಆಲೋಚಿಸಿ ಹಿಂದೆ ಇದೇ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ 4 ಹುಡುಗರನ್ನು ಹುರಿದುಂಬಿಸಿ ತಾನೇ ಸುತ್ತಿಗೆ, ಹುಳಿ, ಗರಗಸ, ಕಟ್ಟಿಗೆ ಹಿಡಿದರು ಒಡೆಯನಿಲ್ಲದೇ ಬಿಕೋ ಎನ್ನುತ್ತಿದ್ದ ಮೌನೇಶ್ವರ ಬಾಡಿ ಬಿಲ್ಡಿಂಗ್ ವರ್ಕ್ ಎಂಬ ಗ್ಯಾರೇಜಿಗೆ ಅಂದಿನಿಂದ ಮರುಜೀವ ಬಂತು
ಲಾರಿ ಬಾಡಿಯ ಸುತ್ತಳತೆ ತೆಗೆದುಕೊಳ್ಳುವುದು, ನಿರ್ದಿಷ್ಟ ಆಳತೆ ಆಧರಿಸಿ ಕಟ್ಟಿಗೆ ಕೊರೆಯುವ ಯಂತ್ರದಲ್ಲಿ ಕತ್ತರಿಸಿ ಜೋಡಿಸುವುದು ವೆಲ್ಡಿಂಗ್ ಮಾಡುವುದು, ಕಟ್ಟಿಗೆಗೆ ಹೊಳಪು ನೀಡುವುದು ಸೇರಿದಂತೆ ನಾನಾ ಕೆಲಸಗಳು ಗ್ಯಾರೇಜಿನಲ್ಲಿ ಮಾಮೂಲು ಅವೆಲ್ಲವುಗಳನ್ನು ಶಾರದಮ್ಮ ಕರಗತಮಾಡಿಕೊಂಡಿದ್ದಾರೆ. ಆಶೋಕ ಲೈಲ್ಯಾಂಡ್ ಸೇರಿದಂತೆ ದೊಡ್ಡ ದೊಡ್ಡ ಲಾರಿಗಳಿಗೆ ಬಾಡಿ ಕಟ್ಟುವ ಶಾರದಮ್ಮ 45 ದಿನಗಳಲ್ಲಿ ಒಂದು ಲಾರಿಯ ಬಾಡಿ ನಿರ್ಮಾಣ ಮಾಡುತ್ತಾರೆ. ಒಂದು ಲಾರಿ ಬಾಡಿ ಕಟ್ಟಲು ಕನಿಷ್ಠ 2-3 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಹೇಳುತ್ತಾರೆ ಶಾರದಮ್ಮ. ಬಳ್ಳಾರಿಯಲ್ಲಿ ಅದಿರು ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಶಾರದಮ್ಮನವರ ಗ್ಯಾರೇಜ್ ಶ್ರೀಮಂತ ಗ್ರಾಹಕರಿಂದ ಮತ್ತು ಲಾರಿ ಚಾಲಕರಿಂದ ಗಿಜಿಗುಡುತ್ತಿತ್ತು.
(ಲಾರಿ ಬಾಡಿ ಕಟ್ಟಲು ಮರದ ಹಲಗೆಯನ್ನು ಕೊಯಿತ್ತಿರುವ ಶಾರದಮ್ಮ)
7ನೇ ತರಗತಿಯವರೆಗೆ ಕಲಿತಿರುವ ಶಾರದಮ್ಮ ಹಣಕಾಸು ವ್ಯವಹಾರ ತುಂಬಾ ಸಲೀಸಾಗಿ ನಿರ್ವಹಿಸುತ್ತಾಳೆ. ವ್ಯವಹಾರ ಜ್ಞಾನ, ಹೃದಯ ವೈಶಾಲ್ಯಗುಣ, ಶ್ರಮ ಜೀವನದಂತಹ ಗುಣಗಳಿಂದ ಕೊಪ್ಪಳ ಪಟ್ಟಣದ ಮಹಿಳೆಯರಿಗೆ ಮಾದರಿಯಾಗಿದ್ದಾg.É ತನ್ನಿಬ್ಬರು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮಗಳು ವಿಜಯಲಕ್ಷ್ಮಿ ಕೊಪ್ಪಳದ ಕಾಲೇಜಿನಲ್ಲಿ ಪಿ.ಯು.ಸಿ ಕಲಿಯುತ್ತಿದ್ದಾಳೆ ಮಗ ನಾಗರಾಜ ಗದಗದಲ್ಲಿ 9 ನೇ ತರಗತಿ ಕಲಿಯುತ್ತಿದ್ದಾನೆ. ಅವರಿಬ್ಬರೂ ಓದಿ ಮುಂದೆ ದೊಡ್ಡ ಹುದ್ದೆಯಲ್ಲಿರಬೇಕು ಎನ್ನುವುದು ತಾಯಿ ಶಾರದಮ್ಮಳ ಆಶೆ.
ನಾಲ್ಕು ವರ್ಷಗಳಲ್ಲಿ 50 ಕ್ಕೂ ಹೆಚ್ಚು ಲಾರಿಗಳ ಬಾಡಿಯನ್ನು ಕಟ್ಟಿರುವ ಶಾರದಮ್ಮ ಕಷ್ಟದ ಕೆಲಸವಿದ್ದಾಗ 2-3 ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಅವರ ಕೌಶಲ್ಯಕ್ಕೆ ಆಧರಿಸಿ ಅವರಿಗೆ ದಿನಕ್ಕೆ 200-300 ಹಣವನ್ನು ನಿಗದಿಪಡಿಸುತ್ತಾರೆ.
(ಮೀಷಿನಿನಲ್ಲಿ ಹಲಗೆಯನ್ನು ಕೊಯಿತ್ತಿರುವುದು)
ಸರಕಾರದ ಸೌಲಭ್ಯಗಳೆನ್ನೇನಾದರೂ ಪಡೆದುಕೊಂಡ ಬಗ್ಗೆ ಪ್ರಶ್ನೆಸಿದರೆ ನೋಡ್ರಿ ಸಾರಾ ಬಡವರಿಗೆ ಅಂತಲೇ ಸರಕಾರದ ಯೋಜನೆಗಳು ಬಾಳ ಅದಾವು ನಮ್ಮಂಥವರಿಗೆ ಸಿಗೊದಿಲ್ಲ. ಯಾಕಂದ್ರ ಹಣ, ವಶೀಲಿ, ಹರಿತ ನಾಲಿಗೆ ಮತ್ತು ಕೆಲಸ ಬೊಗಸಿ ಬಿಟ್ಟು ನಾಯಿಯಂಗ ತಿರಗ್ಬೇಕು. ಇದೆಲ್ಲಾ ತಿಕಲಾಟ ಬ್ಯಾಂಡಂತಲೇ ಹಾಸಿಗೆ ಇದ್ದಷ್ಟೇ ಕಾಲ ಚಾಚಬೇಕು ಅಂತಾ ನಿರ್ಧಾರ ಮಾಡೀನಿ. ಯಾಕಂದ್ರ ಯಾರಿಗೆ ಯಾರು ಇಲ್ರೀ ಎಂದು ವಾಸ್ತವ ಸತ್ಯ ತೆರೆದಿಡುತ್ತಾಳೆ ಶಾರದಮ್ಮ.
ಇಂದು ಮಹಿಳೆಯರು .ಐ.ಪಿ.ಎಸ್. ಕಂಡಕ್ಟರ್ ,ಪೈಲೆಟ್, ರಾಜಕಾರಣಿ, ರಿಕ್ಷಾ ಡ್ರೈವರ್,ಹೀಗೆ ವಿವಿಧ ಉದೋಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಶಾರದಮ್ಮ ಸುಮಾರು 5-6ವರ್ಷದಿಂದ ಪುರುಷ ಪ್ರಧಾನವಾದ ಲಾರಿ ಬಾಡಿ ಕಟ್ಟುವ ಕೆಲಸವನ್ನು ನಿಭಾಯಿಸುತ್ತಿರುವುದು ತುಂಬಾ ಮಹತ್ವದ್ದೆನಿಸುತ್ತದೆ. ಅಂತೂ ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಉದ್ಯೋಗವನ್ನು ಸ್ವಾವಲಂಬನೆಯಿಂದ ಧೈರ್ಯದಿಂದ ನಿರ್ವಹಿಸಿ ಸಬಲಳಾಗಿ ಬದುಕಬಹುದೆಂಬುದಕ್ಕೆ ಲಾರಿ ಬಾಡಿ ಕಟ್ಟುವ ಶಾರದಮ್ಮಳೇ ಮಾದರಿ ಎಂದರೆ ತಪ್ಪಾಗದು.
- ಪೋಟೋ ಮತ್ತು ಬರಹ : ಟಿ.ಶಿವಕುಮಾರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಳೇಶ್ವರ (ತಾ) ಹಾನಗಲ್ಲ (ಜಿ) ಹಾವೇರಿ.