ನಮ್ಮ ಸಂಸ್ಕೃತಿಯಲ್ಲಿ ಶಿವತತ್ವದ ಕಲ್ಪನೆ ತುಂಬ ಪುರಾತನವಾದುದು. ವೇದಕಾಲದಲ್ಲಿಯೇ ಶಿವನು ಪ್ರಮುಖ ದೇವತೆಯಾಗಿದ್ದ ಎನ್ನುವುದು ಸ್ಪಷ್ಟ. ಶಿವನ ಆರಾಧನೆಗೆಂದೇ ಮೀಸಲಾದ ಪರ್ವದಿನ ಮಹಾಶಿವರಾತ್ರಿ. ಮುಂದೆ ಓದಿ …
ತ್ರಿಮೂರ್ತಿಗಳ ಕಲ್ಪನೆ ನಮಗೆ ಗೊತ್ತಿದೆ. ಬ್ರಹ್ಮ, ವಿಷ್ಣು, ಮಹೇಶ್ವರ – ಇವರು ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುವವರು. ಈ ಮೂರು ತತ್ವಗಳೂ ಒಂದೇ ತತ್ವದ ಬೇರೆ ಬೇರೆ ಆಯಾಮಗಳ ಅಭಿವ್ಯಕ್ತಿಯಷ್ಟೇ ಎಂದು ಹೇಳಬಹುದು. ಭಾರತೀಯ ಸಂಸ್ಕೃತಿಯ ಸೃಷ್ಟಿ ತತ್ವಗಳಾಗಿ ಮೂವರನ್ನು ರಾಮಮನೋಹರ ಲೋಹಿಯಾ ಅವರು ನಿರೂಪಿಸುವ ಕ್ರಮವೂ ವಿಶಿಷ್ಟವಾಗಿದೆ. ಈ ಗುಂಪಿನಲ್ಲೂ ಶಿವನಿದ್ದಾನೆ, ಉಳಿದ ಇಬ್ಬರು ರಾಮ ಮತ್ತು ಕೃಷ್ಣ.
ಶಿವನಿಗೆ ಹಲವು ಹೆಸರುಗಳು :
ರುದ್ರ, ಶಂಕರ, ಮಹಾದೇವ, ಶಂಭು, ತ್ರಿನೇತ್ರ, ಚಂದ್ರಶೇಖರ, ಗಿರೀಶ, ಫಾಲನೇತ್ರ, ಪಾರ್ವತೀ ರಮಣ, ಭೂತನಾಥ, ಕಪಾಲಿ, ನಟರಾಜ, ಮಹಾನಟ ಹೀಗೆ ಅವನ ಒಂದೊಂದು ತತ್ವಕ್ಕೂ ಒಂದೊಂದು ಹೆಸರು.
ಪ್ರಧಾನವಾಗಿ ಎರಡು ಹೆಸರುಗಳು ಅವನ ಎಲ್ಲ ತತ್ವಗಳನ್ನೂ ಪ್ರತಿನಿಧಿಸುತ್ತವೆ. ಅವೇ ರುದ್ರ, ಮತ್ತೊಂದು ಶಿವ ಮಾತ್ರವಲ್ಲ ಈ ಎರಡು ತತ್ವಗಳು ಎಲ್ಲ ದೇವತೆಗಳನ್ನು ಪ್ರತಿನಿಧಿಸುತ್ತವೆ ಎಂದೂ ಹೇಳಬಹುದು. ‘ಸರ್ವ ದೇವಾತ್ಮಕೋ ರುದ್ರಹ ಸರ್ವೇ ದೇವಾ ಶಿವಾತ್ಮಕಾಹ’ ಎಂಬ ಮಾತೊಂದಿದೆ. ‘ರುದ್ರನು ಸರ್ವ ದೇವತಾ ರೂಪಿ ಎಲ್ಲ ದೇಶಗಳೂ ಶಿವ ಸ್ವರೂಪರೇ ಹೌದು’ ಎಂಬುದು ಇದರ ತಾತ್ಪರ್ಯ. ಶಿವ ತತ್ವದಲ್ಲಿಯೇ ಎಲ್ಲ ದೇವತೆಗಳ ತತ್ವವೂ ಅಡಕವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ರುದ್ರ ಎಂದರೆ ರೋದನಕ್ಕೆ ಕಾರಣನಾಗಿರುವವನು, ಎಂದರೆ ಅಳುವಂತೆ ಮಾಡುವವನು ಎಂದು ಅರ್ಥವಿದೆ. ಶಿವ ಎಂದರೆ ಮಂಗಳಕರ ಎಂಬ ಅರ್ಥವಿದೆ. ಹೀಗಾಗಿ ಶಿವ ತತ್ವವು ದುಷ್ಟ ಶಿಕ್ಷಣ ಶಿಷ್ಟ ರಕ್ಷಣ – ಎಂಬ ಸೂತ್ರವನ್ನು ಎತ್ತಿ ಹಿಡಿಯುವುದು.

ಶಿವನನ್ನು ಕುರಿತು ನಮ್ಮಲ್ಲಿ ಹೇರಳವಾದ ಸಾಹಿತ್ಯವೂ ಇದೆ. ವೇದಗಳಲ್ಲಿ ಮಾತ್ರವಲ್ಲದೆ ಕಾವ್ಯ, ನಾಟಕ ಸ್ತೋತ್ರಗಳಲ್ಲಿ ಶಿವ, ಶಿವತತ್ವ ಮತ್ತು ಅವನ ಪರಿವಾರದ ಬಗ್ಗೆ ವರ್ಣನೆಗಳಿವೆ. ಆಗಮಗಳಲ್ಲೂ ಈ ಉಲ್ಲೇಖ – ಪ್ರಶಂಸೆಗಳನ್ನು ಧಾರಾಳವಾಗಿಯೇ ಕಾಣುತ್ತೇವೆ.
ಶಿವ ತತ್ವವು ಸೃಷ್ಟಿಯ ಹಲವು ವಿವರಗಳನ್ನು ಒಳಗೊಂಡಿದೆ. ಶಿವನ ನಟರಾಜ ಸ್ವರೂಪವು ಇಡಿಯ ಸೃಷ್ಟಿ ಪ್ರಕ್ರಿಯೆಯನ್ನು ಸಂಕೇತಿಸುತ್ತದೆ. ಸೃಷ್ಟಿ, ಸ್ಥಿತಿ, ಸಂಸಾರಗಳಲ್ಲದೇ ತಿರೋಭಾವ ಮತ್ತು ಅನುಗ್ರಹ ಎಂಬ ಇನ್ನೆರಡು ತತ್ವಗಳನ್ನೂ ನಟರಾಜನ ಕಲ್ಪನೆಯಲ್ಲಿ ಕಾಣಬಹುದು. ಅವನು ಕೈಯಲ್ಲಿ ಹಿಡಿದಿರುವ ಡಮರುಗದ ನಾದದಿಂದಲೇ ಇಡಿಯ ಸೃಷ್ಟಿ, ಅದೂ ನಾದಮಯವಾಗಿ ಸೃಷ್ಟಿಯಾಯಿತೆಂಬ ಕಲ್ಪನೆಯಿದೆ. ಮಾತ್ರವಲ್ಲ ನಟರಾಜನೇ ಮಹಾನಟ, ಅವನು ಎಲ್ಲ ಕಲೆಗಳಿಗೂ ಅಧಿಪತಿ.
ಶಿವನ ಕುಟುಂಬ ಅದು ಆದರ್ಶ ಸಂಸಾರಕ್ಕೂ ನಿದರ್ಶನವಾಗಿದೆ, ಅನ್ಯೋನ್ಯ ದಾಂಪತ್ಯ ಎಂದರೆ ಅದು ಶಿವ ಪಾರ್ವತಿಯರ ದಾಂಪತ್ಯವೇ ಹೌದು. ಶಿವನು ತನ್ನ ಶರೀರದ ಅರ್ಧ ಭಾಗವನ್ನೇ ತನ್ನ ಮಡದಿಗೆ ಮೀಸಲಾಗಿರಿಸಿ ಅರ್ಧನಾರೀಶ್ವರನಾದವನು. ದಾಂತ್ಯ ಎಂದರೆ ಗಂಡು ಹೆಚ್ಚು ಹೆಣ್ಣು ಕಡಿಮೆ ಎಂದೋ ಲೆಕ್ಕಾಚಾರದ ವ್ಯವಹಾರ ಅಲ್ಲ. ಅದು ಇಬ್ಬರ ಸಮಪಾಲಿನ ಸಮಬಾಳು ಎಂಬುದನ್ನು ಅರ್ಧನಾರೀಶ್ವರನ ಕಲ್ಪನೆಯಲ್ಲಿ ಕಾಣಬಹುದು. ಪಾರ್ವತಿಯ ತಪಸ್ಸಿನ ಫಲ ಶಿವ. , ಶಿವನ ತಪಸ್ಸಿನ ಫಲ ಪಾರ್ವತಿ – ಎಂಬ ಅಪ್ಪಯ್ಯ ದೀಕ್ಷಿತರ ಒಕ್ಕಣೆ ದಾಂಪತ್ಯದ ಪರಿಕಲ್ಪನೆಯ ಮಹೋನ್ನತೆಯನ್ನು ಸಾರುವಂತಿದೆ.
ಶಿವನಿಗೆ ತನ್ನ ಮಡದಿಗೆ ಅರ್ಧ ಶರೀರವನ್ನೇ ಕೊಡುವಷ್ಟು ಪ್ರೀತಿ ಇದೆ ನಿಜ, ಹೀಗಿದ್ದರೂ ಅವನು ಪರಮ ವೈರಾಗ್ಯ ಸ್ವರೂಪಿ. ಅವನು ಕೇವಲ ಭೋಗದಲ್ಲಿಯೇ ಮುಳುಗುವವನೂ ಅಲ್ಲ ಅಥವಾ ತ್ಯಾಗದಲ್ಲಿಯೇ ತಲ್ಲೀನನಾಗುವವನೂ ಅಲ್ಲ, ತ್ಯಾಗಭೋಗದ ಸಮನ್ವಯದ ಸಂಕೇತವೇ ಅವನು.
ಹೀಗೆ ವಿಶಿಷ್ಟ ದೇವತೆಯಾದ ಶಿವನ ಆರಾಧನೆಗೆಂದೇ ಮೀಸಲಾದ ದಿನವೇ ಶಿವರಾತ್ರಿ.
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ ).
