ರಾಜ್ಯ ಸರಕಾರ ಸಮಾಜ ಕಲ್ಯಾಣ ಇಲಾಖೆ ನೀಡುವ ‘ರಾಜ್ಯ ಶೌರ್ಯ ಪ್ರಶಸ್ತಿ’ ಗೆ ಸಿದ್ದಾಪುರ ತಾಲೂಕಿನ ಕಾನಸೂರಿನ ಕೌಸಲ್ಯ ವೆಂಕಟರಮಣ ಹೆಗಡೆ ಎನ್ನುವ ಪುಟ್ಟ ಬಾಲಕಿ ಆಯ್ಕೆಯಾಗಿದ್ದಾಳೆ. ಪತ್ರಕರ್ತ ರಾಜು ಕಾನಸೂರು ಅವರು ಬರೆದ ಲೇಖನ ತಪ್ಪದೆ ಓದಿ…
ಶೌರ್ಯ ಪ್ರಶಸ್ತಿಯನ್ನು ಸಾಹಸಮಯ ಪ್ರದರ್ಶನವನ್ನು ತೋರಿಸಿದ ಮಕ್ಕಳಿಗೆ ನೀಡಲಾಗುತ್ತಿದ್ದು, ಪ್ರತಿ ವರ್ಷದಂತೆ ಈ ಪ್ರಶಸ್ತಿಯನ್ನು ಮಕ್ಕಳ ದಿನಾಚರಣೆಯಂದು ಅಂದರೆ ನವೆಂಬರ್ 14 ರಂದು ಸಾಹಸ ತೋರಿದ ಮಕ್ಕಳಿಗೆ ನೀಡಲಾಗುತ್ತದೆ. ಈ ಬಾರಿ ಕಾನಸೂರಿನ ಕೌಸಲ್ಯ ವೆಂಕಟರಮಣ ಹೆಗಡೆ ಸ್ವೀಕರಿಸುತ್ತಿದ್ದು, ತನ್ನ ತಂದೆ ಜೀಪಿನ ಅಡಿಯಲ್ಲಿ ಸಿಲುಕಿ ಜೀವನ್ ಮರಣದ ಮಧ್ಯೆ ಹೋರಾಡುತ್ತಿದ್ದಾಗ ಸುಮಾರು ಎರಡು ಕಿಲೋಮೀಟರ್ ದೂರ ಓಡಿ ಹೋಗಿ ಜನರನ್ನು ಕರೆತಂದು ತಂದೆಯನ್ನು ಬದುಕಿಸಿದ 11 ವರ್ಷದ ಬಾಲಕಿಯ ಸಮಯ ಪ್ರಜ್ಞೆಯ ಕುರಿತು ಪ್ರಶಂಸೆ ವ್ಯಕ್ತಗೊಂಡಿತ್ತು.
ಘಟನೆಯ ವಿವರ: 2021ರ ಮಾರ್ಚ್ 15 ರಂದು ತನ್ನ ತಂದೆಯೊಂದಿಗೆ ಮಾವಿನಗುಂಡಿ ಸಮೀಪದ ಹಳ್ಳಿಯೊಂದರಲ್ಲಿ ಮಂಗಲ ಕಾರ್ಯಕ್ಕಾಗಿ ಅಡಿಗೆ ಮಾಡಲು ಹೊರಟಿದ್ದ ತಂದೆ ವೆಂಕಟರಮಣ ಹೆಗಡೆ ಅವರು ಚಲಾಯಿಸುತ್ತಿದ್ದ ಜೀಪು ಆಕಸ್ಮಿಕವಾಗಿ ಪಲ್ಟಿ ಹೊಡೆದು ಜೀಪಿನ ಅಡಿಯಲ್ಲಿ ತಂದೆ ವೆಂಕಟರಮಣ ಹೆಗಡೆ ಸಿಲುಕಿ ಕೊಂಡಿದ್ದರು. ಈ ಸಂದರ್ಭದಲ್ಲಿ ಜಿಪಿ ನಲ್ಲಿದ್ದ ಕೌಶಲ್ಯ ಹೆಗಢ ಹಾಗೂ ಆಕೆಯ ಐದು ವರ್ಷದ ತಮ್ಮ ತಂದೆಯನ್ನು ಬದುಕಿಸಲು ಹರಸಾಹವನ್ನು ಪಟ್ಟರು. ಇದೇ ವೇಳೆಯಲ್ಲಿ ಸಮಯ ಪ್ರಜ್ಞೆ ತೋರಿದ ಕೌಶಲ್ಯ ಹೆಗಡೆ ಘಟನೆ ನಡೆದ ಸ್ಥಳದಿಂದ ಸುಮಾರು ಎರಡು ಕಿಲೋ ಮೀಟರ್ ದೂರ ಓಡಿ ಹೋಗಿ ಅಲ್ಲಿಂದ ಜನರನ್ನು ಕರೆತಂದು ಜೀಪನ್ನು ಎತ್ತಿಸಿ ತಂದೆಯ ಜೀವವನ್ನು ಉಳಿಸಿದ್ದಾಳೆ. ಈ ಸಂದರ್ಭದಲ್ಲಿ ಬಾಲಕಿಯ ಈ ಸಾಹಸಪ್ರಜ್ಞೆ ಎಂಥವರನ್ನಾದರೂ ಬೆರಗುಗೊಳಿಸಿತ್ತು.

ಕಾನಸೂರಿನ ಕೌಸಲ್ಯ ವೆಂಕಟರಮಣ ಹೆಗಡೆ
ಕೌಶಲ್ಯ ವೆಂಕಟರಮಣ ಹೆಗಡೆ ಕಾನಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಬಾಲಕಿ ತನ್ನ ಸಣ್ಣ ವಯಸ್ಸಿನಲ್ಲಿಯೇ ಈ ರೀತಿಯ ಸಮಯಪ್ರಜ್ಞೆಯನ್ನು ತೋರಿ ತನ್ನ ತಂದೆಯನ್ನು ಬದುಕಿಸಿದ ಈಕೆಯ ಸಾಹಸವನ್ನು ನೋಡಿ ರಾಜ್ಯ ಸರ್ಕಾರ ನವೆಂಬರ್ 14ರಂದು ನೀಡುವ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಕೌಸಲ್ಯ ಅವಳಿಗೆ ನೀಡಿ ಗೌರವಿಸುತ್ತಿದೆ. ಕಾನಸೂರು ಸಮೀಪದ ಮಾದ್ನಕಳ್ ದ ವೆಂಕಟ್ರಮಣ ಹೆಗಡೆ ಹಾಗೂ ಪದ್ಮಾ ದಂಪತಿಗಳ ಪುತ್ರಿಯಾದ ಕೌಸಲ್ಯರ ಈ ಸಾಧನೆಗೆ ಕಾನಸೂರಿನ ನಾಗರಿಕರು ಶುಭ ಹಾರೈಸಿದ್ದಾರೆ.
- ರಾಜು ಕಾನಸೂರು – ಕರಾವಳಿ ಮುಂಜಾವು ಡಿಜಿಟಲ್ ಉಪಸಂಪಾದಕರು, ಲೇಖಕರು, ಶಿರಸಿ.
