ಲೇಖನ : ನಾಗರಾಜ್ ಲೇಖನ್
ಪರಿಚಯ : ನಾಗರಾಜ್ ಲೇಖನ್ ಅವರು ಹುಟ್ಟಿ ಬೆಳೆದದ್ದು ಹೊನ್ನಾವರದ ಹರಡಸೆಯಲ್ಲಿ , ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಾಗಿದ್ದಾರೆ. ಕಥೆ, ಕವನ, ಚುಟುಕು, ಚಿತ್ರಕಥೆ , ಸ೦ಭಾಷಣೆ, ಸಾಹಿತ್ಯ ಬರೆಯುವುದು ಅವರ ಹವ್ಯಾಸಗಳು.
ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿಯೇ ದಾಖಲೆ ಬರೆದಂತಹ ನಿರ್ದೇಶಕರು, ನಾಯಕನಟರು ಬಹಳಷ್ಟು ಮಂದಿ ಇದ್ದಾರೆ. ಅಂತಹವರಲ್ಲೊಬ್ಬರು ವಿಶಿಷ್ಟ, ವಿಭಿನ್ನ ಶೈಲಿಯ ಚಿತ್ರಗಳ ನಿರ್ದೇಶಕರಾದಂತಹ “ ಸುನೀಲ್ ಕುಮಾರ್ ದೇಸಾಯಿ” ರವರು. ಪ್ರೀತಿ, ಪ್ರೇಮ, ಪ್ರಣಯದ ಚಿತ್ರಗಳ ಸಮಯದಲ್ಲಿ ಕನ್ನಡಕ್ಕೆ ಭಯಾನಕ, ಸಸ್ಪೆನ್ಸ್, ಥ್ರಿಲ್ಲರ್, ಪ್ರಯೋಗಾತ್ಮಕ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗವನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿದಂತವರು.
ಕಷ್ಟದ ಜೀವನದ ನಡುವೆ ಕಾಶೀನಾಥ್, ಸುರೇಶ್ ಹೆಬ್ಳಿಕರ್ ಅಂತಾ ಕ್ರಿಯಾತ್ಮಕ ನಿರ್ದೇಶಕರೊಂದಿಗೆ ಸಹಾಯಕರಾಗಿ ಕೆಲಸವನ್ನು ಪ್ರಾರಂಭಿಸಿ ಇಂದು ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಸೃಜನ ಶೀಲ ನಿರ್ದೇಶಕರು ಸುನೀಲ್ ಕುಮಾರ್ ದೇಸಾಯಿ ಅವರು. ಅವರ ಚಿತ್ರಗಳ ಅತ್ಯುತ್ತಮ ಕಥೆ- ಚಿತ್ರಕಥೆ- ಸಂಭಾಷಣೆ ಹಾಗೂ ನಿರ್ದೇಶನಕ್ಕೆ ತುಂಬಾ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದೆ. ಅವರ ಚಿತ್ರಗಳನ್ನು ನೋಡುವುದೆ ತುಂಬಾ ಕುತೂಹಲವಾಗಿರುತ್ತದೆ. ತುಂಬಾ ವರ್ಷಗಳ ನಂತರ ಬಂದಂತಹ ಅವರ ಚಿತ್ರ ‘ಉದ್ಘರ್ಷ’ ಇವಾಗಿನ ಯುವ ಪೀಳಿಗೆಗೆಗೂ ತುಂಬಾ ಅಚ್ಚು-ಮೆಚ್ಚಿನ ಚಿತ್ರವಾಗಿದೆ.
ಆಗ ಲವ್ ಸ್ಟೋರಿಗಳು, ಫ್ಯಾಮಿಲಿ ಸ್ಟೋರಿಗಳು, ಅದರಲ್ಲಿ ವಿಲನ್ ಗಳ ಜೊತೆ ನಾಲ್ಕೈದು ಫೈ಼ಟ್ ಗಳು ಇದ್ದವು. ಅಂತಹ ಸಂದರ್ಭದಲ್ಲಿ ಕೇವಲ ಮೂರು ಪಾತ್ರಗಳನ್ನಷ್ಟೆ ಮುಖ್ಯವಾಗಿರಿಸಿಕೊಂಡು ಹಾಡು, ಹೊಡೆದಾಟಗಳಿಲ್ಲದೆ ಅವರ ನಿರ್ದೇಶನದಲ್ಲಿ ಬಂದಂತಹ ಮೊದಲ ಕುತೂಹಲ ಚಿತ್ರ ‘ತರ್ಕ’. ಮೊದಲ ಚಿತ್ರಕ್ಕೆ ಅವರ ಉತ್ತಮ ನಿರ್ದೇಶನಕ್ಕೆ ಹಾಗೂ ಉತ್ತಮ ಚಿತ್ರಕಥೆಗೆ ಪ್ರಶಸ್ತಿಯನ್ನು ಪಡೆದಂತಹವರು. ನಂತರ ಬಂದಂತಹ ಚಿತ್ರಗಳೆಲ್ಲಾ ಎಲ್ಲರಿಗೂ ಗೊತ್ತಿರುವುದೇ. ಎಲ್ಲವೂ ವಿಶಿಷ್ಟ, ವಿಭಿನ್ನ, ವಿಸ್ಮಯ ಚಿತ್ರಗಳು. ಉದಾಹರಣೆಗೆ ಒಂದೆ ಸ್ಥಳದಲ್ಲಿ ಚಿತ್ರೀಕರಿಸಿದಂತಹ ‘ನಿಷ್ಕರ್ಷ’ ಹಾಗೂ ನಾಯಕ ಪ್ರಧಾನ, ನಾಯಕಿ ಪ್ರಧಾನ ಚಿತ್ರಗಳ ಸಮಯದಲ್ಲಿ ನಾಯಕಿಯ ಮುಖ ಪರಿಚಯವನ್ನೆ ಚಿತ್ರದ ಕೊನೆಯವರೆಗೂ ಪ್ರೇಕ್ಷಕರಿಗೆ ತೋರಿಸಲಾಗದ ಚಿತ್ರ ‘ಬೆಳದಿಂಗಳ ಬಾಲೆ’. ನನ್ನ ಮೆಚ್ಚಿನ ಚಿತ್ರಗಳಲ್ಲೊಂದು. ಮಲೆನಾಡಿನ ಸುಂದರ ಪ್ರದೇಶದಲ್ಲಿ ಕುಮಟಾ, ಯಾಣದಂತಹ ಪ್ರವಾಸಿ ತಾಣದಲ್ಲಿ ಚಿತ್ರೀಕರಿಸಿದಂತಹ ಮಲೆನಾಡಿನ ತ್ರಿಕೋನ ಪ್ರೇಮ ಕಥನ ಚಿತ್ರ ‘ನಮ್ಮೂರ ಮಂದಾರ ಹೂವೆ’ ಯಾವತ್ತಿಗೂ ಜನ ಮನದಲ್ಲಿ ಉಳಿಯುವಂತಹ ಚಿತ್ರ. ಹೀಗೆ ಅವರ ಚಿತ್ರಗಳೆಲ್ಲಾ ಒಂದಕ್ಕಿಂತ ಒಂದು ವಿಭಿನ್ನವಾಗಿರುವಂತದ್ದು ನೋಡಿದಾಗ ತಿಳಿಯುತ್ತದೆ.
ಇನ್ನೊಂದು ಮುಖ್ಯವಾಗಿ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರಗಳಲ್ಲಿ ನಾವು ಗಮನಿಸಬೇಕಾಗಿರುವುದು ಅವರ ಕೆಲವು ಚಿತ್ರಗಳ ಶೀರ್ಷಿಕೆಗಳು (Title) ಸಹ ವಿಭಿನ್ನವಾಗಿರುವಂತದ್ದು. ಬಹುಶಃ ಇದು ಬಹಳಷ್ಟು ಜನರು ಗಮನಿಸದೆ ಇರಬಹುದು. ‘ಅರ್ಕ’ ಶಬ್ದಗಳನ್ನೊಳಗೊಂಡಂತಹ ಹೆಸರುಗಳು (ಉದಾ : ಸಂಘರ್ಷ, ನಿಷ್ಕರ್ಷ, ಉತ್ಕರ್ಷ, ಪ್ರತ್ಯರ್ಥ, ಮರ್ಮ) ಹೀಗೆ ಭಾಷಾ ಶುದ್ಧೀಕರಣ ಶೀರ್ಷಿಕೆಗಳು ಅಂತಾ ಹೇಳಬಹದು. ಇದನ್ನು ಗಮನಿಸಿದಾಗ ಚಿತ್ರದ ಹೆಸರು ಕೇಳಿದ ಕೂಡಲೆ ಇದು ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರವೆಂಬುದು ಪ್ರೇಕ್ಷಕರಿಗೆ ಗೊತ್ತಾಗುತ್ತದೆ.
ಆದರೆ, ಇತ್ತೀಚೆಗೆ ಅವರು ಬೆಳ್ಳಿತೆರೆಯಿಂದ ಸ್ವಲ್ಪ ದೂರಾನೇ ಇದ್ದಾರೆ. ಕೆಲವೊಮ್ಮೆ ಅವರ ಚಿತ್ರಗಳನ್ನು ನೋಡುವಾಗ ಇಂತಹ ಸದಾಭಿರುಚಿಯ ನಿರ್ದೇಶಕರುಗಳ ಚಿತ್ರಗಳು ಈವಾಗ ಯಾಕೆ ಬರುತ್ತಿಲ್ಲಾ ಅನಿಸುತ್ತದೆ. ಇದು ಇವರೊಬ್ಬರ ವಿಷಯವಲ್ಲ. ಒಳ್ಳೇಯ ಚಿತ್ರಗಳನ್ನು ಕೊಟ್ಟಂತಹ ಬಹಳಷ್ಟು ನಮ್ಮ ನಿರ್ದೇಶಕರುಗಳು ಹೀಗೆ ದೂರವಿದ್ದಾರೆ. ಆವಾಗಾವಾಗ ಎಲ್ಲೊ ಕಾಣಿಸಿಕೊಳ್ಳುತ್ತಾರೆ. ಅವರುಗಳು ಬೆಳ್ಳಿತೆರೆಯಿಂದ ದೂರವಿರಬಹುದು. ಆದರೆ ಈಗಿನ ನವ ನಿರ್ದೇಶಕರುಗಳಿಗೆ ಅವರೇ ಸ್ಫೂರ್ತಿ. ಇವತ್ತು ಇಂತದ್ದೇ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳು ಬರಬಹುದು. ಅದರಲ್ಲಿ ಯಾವುದಾದರೂ ಒಂದು ಸೀನ್ ಗಮನಿಸಿದಾಗ ನಮಗೆ ಮೊದಲು ನೆನಪಾಗುವುದೇ ಸುನೀಲ್ ಕುಮಾರದೇಸಾಯಿ ಅವರ ಚಿತ್ರಗಳು. ಎಷ್ಟೋ ಪ್ರಯೋಗಾತ್ಮಕ ಚಿತ್ರಗಳನ್ನು ಕೊಟ್ಟಂತಹ ಸುನೀಲ್ ಕುಮಾರ ದೇಸಾಯಿಯವರು ಮತ್ತಷ್ಟು ಹೊಸತನಗಳೊಂದಿಗೆ, ಹೊಸಚಿತ್ರಗಳನ್ನು ಅಭಿಮಾನಿಗಳಿಗೆ ಕೊಡಲಿ ಎಂಬುದೆ ನಮ್ಮೆಲ್ಲರ ಆಸೆ.
ಲೇಖನ : ನಾಗರಾಜ್ ಲೇಖನ್
ಹರಡಸೆ, ಹೊನ್ನಾವರ.
ನಾಗರಾಜ್ ಲೇಖನ್ ಅವರ ಹಿಂದಿನ ಬರಹ :